ಮೈಸೂರು ಜಿಲ್ಲಾ ಉಸ್ತುವಾರಿ ಮೇಲೆ ಸಿ. ಪಿ. ಯೋಗೇಶ್ವರ್ ಕಣ್ಣು?
ಮೈಸೂರು, ಮಾರ್ಚ್ 12; ಮೈಸೂರಿನ ಮೇಲೆ ಕಣ್ಣಿಟ್ಟಿದ್ದಾರಾ ಸೈನಿಕ?. ಮೈಸೂರು ಜಿಲ್ಲಾ ಉಸ್ತುವಾರಿ ಸ್ಥಾನ ಸಿ. ಪಿ. ಯೋಗೇಶ್ವರ್ ಪಾಲಾಗುತ್ತಾ? ಎಂಬ ಪ್ರಶ್ನೆ ಇದೀಗ ಮೈಸೂರಿನ ಜನರನ್ನು ಕಾಡುತ್ತಿದೆ.
ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಸಿ. ಪಿ. ಯೋಗೇಶ್ವರ್ ಸೋಲು ಕಂಡರು. ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯರಾದರು. ಸಚಿವ ಸಂಪುಟ ವಿಸ್ತರಣೆ ಬಳಿಕ ಸಚಿವರಾದರು.
ಸಿಪಿ ಯೋಗೇಶ್ವರ್ಗೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?
ಸಿ. ಪಿ. ಯೋಗೇಶ್ವರ್ ಸಚಿವರಾದ ದಿನದಿಂದಲೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಅವರು ಸಹ ಮೈಸೂರಿನ ಅಭಿವೃದ್ಧಿ ಕುರಿತು ವಿಶೇಷ ಆಸಕ್ತಿ ತೋರಿದಂತಿದೆ. ಪ್ರವಾಸೋದ್ಯಮ ಇಲಾಖೆ ಸಚಿವರಾದ ತಕ್ಷಣ ಸತತವಾಗಿ ಮೂರ್ನಾಲ್ಕು ಬಾರಿ ಮೈಸೂರಿಗೆ ಭೇಟಿ ನೀಡಿದ್ದಾರೆ.
2ನೇ ಬಾರಿಗೆ ಸಚಿವ ಸ್ಥಾನ ಅಲಂಕರಿಸಲಿರುವ ಸಿಪಿ ಯೋಗೇಶ್ವರ್ ವ್ಯಕ್ತಿಚಿತ್ರಣ
ಹೀಗಾಗಿ, ಸಚಿವ ಯೋಗೇಶ್ವರ್ ಮೈಸೂರು ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುತ್ತಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಪ್ರಸ್ತುತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್.
ಮುಂದಿನ ಚುನಾವಣೆಗೆ ಕ್ಷೇತ್ರ ಬದಲಾವಣೆ; ಯೋಗೇಶ್ವರ್ ಸ್ಪಷ್ಟನೆ
ಒಂದೇ ತಿಂಗಳಲ್ಲಿ ಮೂರು ಬಾರಿ ಆಗಮನ
ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೇಶ್ವರ್ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಒಂದೇ ತಿಂಗಳಲ್ಲಿ ಮೂರನೇ ಬಾರಿಗೆ ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಈ ಹಿಂದೆ ಮಾರ್ಚ್ 2 ಮತ್ತು 3ರಂದು ಮೈಸೂರಿಗೆ ಆಗಮಿಸಿದ್ದ ಅವರು, ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದಲ್ಲದೇ, ಕೆಲವು ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ ಮಾರ್ಚ್ 7ರಂದು ಸಹ ಮೈಸೂರಿಗೆ ಆಗಮಿಸಿದ್ದರು. ಇದೀಗ ಒಂದು ವಾರದ ಬಳಿಕ ಮತ್ತೊಮ್ಮೆ 2 ದಿನಗಳ ಮೈಸೂರು ಪ್ರವಾಸ ಕೈಗೊಂಡಿರುವುದು ಕುತೂಹಲ ಮೂಡಿಸಿದೆ.
ಮೊದಲ ಭೇಟಿಯಲ್ಲೇ ಕುತೂಹಲ
ಪ್ರವಾಸೋದ್ಯಮ ಇಲಾಖೆ ಸಚಿವರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ್ದ ಸಿ. ಪಿ. ಯೋಗೇಶ್ವರ್, ಅತ್ಯಂತ ಲವಲವಿಕೆಯಿಂದಲೇ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ವಿಶೇಷವಾಗಿ ಮೈಸೂರಿಗೆ ಮೊದಲ ಬಾರಿಗೆ ಆಗಮಿಸಿದ್ದ ಅವರು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದಲ್ಲದೇ, ಪಕ್ಷ ಸಂಘಟನೆಯ ಕುರಿತಂತೆ ಕಾರ್ಯಕರ್ತರ ಜತೆಗೆ ಸಭೆಯನ್ನು ನಡೆಸಿದ್ದರು. ಈ ನಡುವೆ ಆರ್. ಎಸ್. ಎಸ್ ಕಚೇರಿಗೂ ಸಹ ಭೇಟಿ ನೀಡಿ ಸ್ಥಳೀಯ ಮುಖಂಡರೊಂದಿಗೆ ಮಾತಕತೆ ನಡೆಸಿದ್ದರು. ಅಲ್ಲದೇ, ಹಿರಿಯ ರಾಜಕಾರಣಿ ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿ ಆಪ್ತ ಸಮಾಲೋಚನೆ ನಡೆಸಿದ್ದರು. ಇದೇ ವೇಳೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ಸಹ ನಡೆಸಿದ್ದರು.
ಪ್ರಮೋದಾದೇವಿ ಒಡೆಯರ್ ಭೇಟಿ
ಮಾರ್ಚ್ 7ರಂದು ಮೈಸೂರು ಪ್ರವಾಸ ಕೈಗೊಂಡಿದ್ದ ಸಚಿವ ಸಿ. ಪಿ. ಯೋಗೇಶ್ವರ್ ಮೈಸೂರಿನ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ತೋರಿದ್ದರು. ಪ್ರಮುಖವಾಗಿ ಹೆಲಿ ಟೂರಿಸಂ ಆರಂಭಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಭೇಟಿ ಮಾಡಿದ್ದರು. ಇದಕ್ಕೂ ಮುನ್ನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೂ ತೆರಳಿ ಶ್ರೀಗಳ ಜತೆ ಮಾತುಕತೆ ನಡೆಸಿದ್ದರು.
ಮೂರನೇ ಬಾರಿಗೆ ಮೈಸೂರು ಭೇಟಿ
ಈಗಾಗಲೇ ಇದೇ ತಿಂಗಳಲ್ಲಿ ಎರಡು ಬಾರಿ ಮೈಸೂರಿಗೆ ಭೇಟಿ ನೀಡಿದ್ದ ಸಚಿವ ಯೋಗೇಶ್ವರ್, ಇದೀಗ ಮಾರ್ಚ್ 12 ಮತ್ತು 13 ರಂದು ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಈ ಎರಡು ದಿನಗಳ ಪ್ರವಾಸದಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ಆಯೋಜಿಸಿರುವ ಸಂವಾದ ಕಾರ್ಯಕ್ರಮ ಸೇರಿದಂತೆ ಮೈಸೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ ಪ್ರಮುಖರ ಜತೆ ಸಭೆ ನಡೆಸಲಿದ್ದಾರೆ. ಅಲ್ಲದೇ ಈ ವೇಳೆ ಆದಿ ಚುಂಚನಗಿರಿ ಶಾಖಾ ಮಠಕ್ಕೆ ಸಹ ಭೇಟಿ ನೀಡಲಿದ್ದಾರೆ.
ಸಚಿವರು ಹೇಳಿದ್ದೇನು?
ಸತತವಾಗಿ ಮೈಸೂರು ಪ್ರವಾಸ ಕೈಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಯೋಗೇಶ್ವರ್, "ಮೈಸೂರು ಪ್ರವಾಸೋದ್ಯಮವನ್ನು ಬ್ರಾಂಡ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಚರ್ಚೆಗಾಗಿ ಪದೇ ಪದೇ ಮೈಸೂರಿಗೆ ಬರುತ್ತಿದ್ದೇನೆ. ಇದನ್ನು ಹೊರತುಪಡಿಸಿ ಇನ್ಯಾವ ರಾಜಕೀಯ ಉದ್ದೇಶ ಇಲ್ಲ. ನಾನು ರಾಮನಗರ ಉಸ್ತುವಾರಿ ಕೊಡಿ ಎಂದು ಕೇಳಿದ್ದೇನೆ. ಆದರೆ ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟಪಡಿಸಿಲ್ಲ. ಮೈಸೂರು ಉಸ್ತುವಾರಿ ಸಚಿವನಾಗುವ ಉದ್ದೇಶದಿಂದ ಮೈಸೂರಿಗೆ ಬರುತ್ತಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
15 ದಿನಗಳಿಂದ ಬಾರದ ಸೋಮಶೇಖರ್
ಒಂದೆಡೆ ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೇಶ್ವರ್ ಕಳೆದ 15 ದಿನಗಳಲ್ಲಿ ಮೂರು ಬಾರಿ ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಮಾತ್ರ ಕಳೆದ 15 ದಿನಗಳಿಂದ ಮೈಸೂರಿನತ್ತ ಮುಖ ಮಾಡಿಲ್ಲ. ಫೆಬ್ರವರಿ ಅಂತ್ಯದಲ್ಲಿ ಮೈಸೂರಿಗೆ ಆಗಮಿಸಿದ್ದ ಸಚಿವ ಸೋಮಶೇಖರ್, ಇದಾದ ನಂತರ ಯಾವುದೇ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಲುವಾಗಿಯೂ ಮೈಸೂರಿಗೆ ಬಂದಿಲ್ಲ. ಹೀಗಾಗಿ ಈ ಎಲ್ಲಾ ಬೆಳವಣಿಗೆಗಳು ಸಹಜವಾಗಿಯೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಅನುಮಾನಗಳಿಗೆ ಕಾರಣವಾಗಿವೆ.