ಗೋಮಾಂಸ ನಿಷೇಧದಿಂದ ಮೈಸೂರು ಜೂ ಕಂಗಾಲು, ಮುಂದೇನು?
ದಿನವೂ ಸಾವಿರಾರು ಜನ ಪ್ರವಾಸಿಗರನ್ನು ತನ್ನತ್ತ ಬರಸೆಳೆಯುತ್ತಿರುವ ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ, ತನ್ನಲ್ಲಿರುವ ಪ್ರಾಣಿಗಳಿಗೆ ಯಾವ ಆಹಾರ ಕೊಡುವುದು ಎಂಬ ದೊಡ್ಡ ಸಮಸ್ಯೆ ಕಾಡುತ್ತಿದೆ.
ಮೈಸೂರು , ಮೇ 30 : ಕೇಂದ್ರ ಸರಕಾರ ಗೋ ಹತ್ಯೆ ನಿಷೇಧ ಜಾರಿಗೆ ತಂದಿರುವುದು ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ದಿನವೂ ಸಾವಿರಾರು ಜನ ಪ್ರವಾಸಿಗರನ್ನು ತನ್ನತ್ತ ಬರಸೆಳೆಯುತ್ತಿರುವ ಮೈಸೂರು ಝೂಗೆ ಇನ್ಮೇಲೆ ಪ್ರಾಣಿಗಳಿಗೆ ಯಾವ ಆಹಾರ ಕೊಡುವುದು ಎಂಬ ದೊಡ್ಡ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ಇನ್ಮುಂದೆ ಮೃಗಾಲಯದ ಪ್ರಾಣಿಗಳಿಗೆ ಗೋಮಾಂಸದ ಬದಲಾಗಿ ಹೊಸ ರುಚಿ ಕೊಡಲು ಪ್ರಾಧಿಕಾರ ನಿರ್ಧರಿಸಿದೆ. [ಗೋ ಹತ್ಯೆ ನಿಷೇಧ: ಕೇರಳ ಸರ್ಕಾರದ ನಿಲುವು ಸಮರ್ಥಿಸಿದ ಸಿಎಂ ಸಿದ್ದರಾಮಯ್ಯ]
ಕೊಲ್ಲುವ ಉದ್ದೇಶಕ್ಕಾಗಿ ಜಾನುವಾರು ಮಾರಾಟಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಪರಿಣಾಮ ಮೃಗಾಲಯದ ಪ್ರಾಣಿಗಳಿಗೆ ದನ ಮತ್ತು ಎಮ್ಮೆ ಮಾಂಸದ ಬದಲಿಗೆ ಹಂದಿ, ಕುರಿ ಹಾಗೂ ಕೋಳಿ ಮಾಂಸ ನೀಡಲು ಮೃಗಾಲಯ ಪ್ರಾಧಿಕಾರ ಚಿಂತನೆ ನಡೆಸಿದೆ.
ಆಹಾರ ಕ್ರಮದ ದಿಢೀರ್ ಬದಲಾವಣೆ ಪ್ರಾಣಿಗಳ ಮೇಲೆ ಬೀರಬಹುದಾದ ಪರಿಣಾಮಗಳನ್ನು ಪತ್ತೆ ಹಚ್ಚಲು ಪ್ರಾಧಿಕಾರ ಮುಂದಾಗಿದೆ. ದನ ಮತ್ತು ಎಮ್ಮೆಗೆ ಪರ್ಯಾಯವಾಗಿ ಖರೀದಿಸುವ ಮಾಂಸ ಆರ್ಥಿಕವಾಗಿ ಹೊರೆಯಾಗುವ ಸಾಧ್ಯತೆಯ ಕುರಿತು ಗಮನ ಹರಿಸಿದೆ.
ದಿನಕ್ಕೆ 310 ಕಿಲೋ ದನದ ಮಾಂಸ
ಹರಯಕ್ಕೆ ಬಂದಿರುವ ಸಿಂಹಕ್ಕೆ ಒಂದು ದಿನಕ್ಕೆ 15 ಕೆ.ಜಿ. ದನದ ಮಾಂಸಾಹಾರ ನೀಡಲಾಗುತ್ತದೆ. ಗಂಡು ಸಿಂಹಕ್ಕೆ 12 ಕೆ.ಜಿ. ಮರಿಗಳಿಗೆ 4 ಕೆ.ಜಿ. ಹಾಗೂ ಹುಲಿ ಹಾಗೂ ಚಿರತೆ ಸೇರಿದಂತೆ ಮಾಂಸಾಹಾರಿ ಪ್ರಾಣಿಗಳಿಗೆ ವಯಸ್ಸಿನ ಆಧಾರದ ಮೇಲೆ ದನದ ಮಾಂಸ ನೀಡಲಾಗುವುದು. ಎಲ್ಲ ಸೇರಿ ಪ್ರತಿದಿನಕ್ಕೆ 310 ಕಿಲೋ ದನದ ಮಾಂಸ ಅಗತ್ಯವಿದ್ದು, ವರ್ಷಕ್ಕೆ 113.15 ಟನ್ ದನದ ಮಾಂಸ ಬೇಕಾಗಲಿದೆ.
ಸದ್ಯ ಪ್ರಾಧಿಕಾರದ ಅಧೀನದಲ್ಲಿರುವ 8 ಮೃಗಾಲಯಗಳ ಪೈಕಿ ಮೂರರಲ್ಲಿ ದನ ಮತ್ತು ಎಮ್ಮೆಯ ಮಾಂಸವೇ ಪ್ರಧಾನ ಆಹಾರ. ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನಿತ್ಯ 10 ಕ್ವಿಂಟಲ್, ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ದಿನಕ್ಕೆ 6 ಕ್ವಿಂಟಲ್ ಹಾಗೂ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಪ್ರತಿದಿನ 2 ಕ್ವಿಂಟಲ್ ದನದ ಮಾಂಸವನ್ನು ಪ್ರಾಣಿಗಳಿಗೆ ಆಹಾರವಾಗಿ ಕೊಡಲಾಗುತ್ತಿದೆ.ಯಾವ ಮಾಂಸಕ್ಕೆ ಎಷ್ಟು?
ದನದ ಮಾಂಸಕ್ಕೆ 200 ರೂ. ನೀಡಬೇಕು. ಕುರಿ ಮಾಂಸಕ್ಕೆ 450 ರೂ. ಹಬ್ಬದ ಸಂದರ್ಭಗಳಲ್ಲಿ ಕುರಿಯ ಮಾಂಸ 600ರೂ. ವರಗೆ ಏರಲಿದೆ. ಅಂತೆಯೇ ಒಂದು ದಿನಕ್ಕೆ 310 ಕೆ.ಜಿ. ಕುರಿ ಮಾಂಸಕ್ಕೆ 1,39,500 ರೂ. ಖರ್ಚು ಮಾಡಬೇಕಿದೆ. ಇಷ್ಟು ಪ್ರಮಾಣದ ದುಬಾರಿ ಹಣ ವ್ಯಯಿಸಿ ಪ್ರಾಣಿಗಳನ್ನು ಪೋಷಿಸುವುದರಿಂದ ಮೃಗಾಲಯಕ್ಕೆ ಹಣದ ಹೊರೆ ಜೊತೆಗೆ ಮಾಂಸದ ಹೊರೆಯೂ ಬೀಳಲಿದೆ.
ದನದ ಮಾಂಸ ಹುಲಿ, ಸಿಂಹ, ತೋಳ, ಚಿರತೆಗಳಿಗೆ ಪುಷ್ಠಿದಾಯಕ ಆಹಾರವಾಗಿದೆ. ಅಲ್ಲದೇ ದೊಡ್ಡ ದೊಡ್ಡ ಮಾಂಸದ ತುಂಡುಗಳನ್ನು ಅಗಿದು ತಿನ್ನುವ ಈ ಪ್ರಾಣಿಗಳು ಕುರಿ, ಕೋಳಿ, ಮೇಕೆ, ಮಾಂಸದ ತುಂಡುಗಳು ಬೇಗನೆ ಅಗಿದು ಬಿಡುತ್ತವೆ. ಇದರಿಂದ ಆಹಾರ ಕ್ರಮ ಬದಲಾದಂತೆ ಆರೋಗ್ಯದಲ್ಲೂ ವ್ಯತ್ಯಾಸ ಕಾಣಲಿದೆ.[ಕೇಂದ್ರದ ಅಧಿಸೂಚನೆಯಲ್ಲಿ ಗೋ ಹತ್ಯೆ ನಿಷೇಧ ಅಂತ ಎಲ್ಲಿದೆ?]ಕೋಟಿ ಕೋಟಿ ಖರ್ಚು
ಹುಲಿ, ಸಿಂಹ, ಚಿರತೆ, ಸೀಳುನಾಯಿ, ತೋಳ, ಜಾಗ್ವಾರ್, ಕತ್ತೆಕಿರುಬ ಸೇರಿ ಹಲವು ಪ್ರಾಣಿ ಹಾಗೂ ಹದ್ದು, ಗೂಬೆ, ಬಕಪಕ್ಷಿ ಸೇರಿ ಅನೇಕ ಪಕ್ಷಿಗಳು ಮಾಂಸಾಹಾರಿಗಳು. ಕುರಿ, ಕೋಳಿಯೊಂದಿಗೆ ದನ ಮತ್ತು ಎಮ್ಮೆ ಮಾಂಸ ನೀಡಲಾಗುತ್ತಿದೆ. ಮೈಸೂರು ಮೃಗಾಲಯ ಈ ವರ್ಷ 1,076 ಕ್ವಿಂಟಲ್ ದನದ ಮಾಂಸಕ್ಕೆ ₹ 1.19 ಕೋಟಿಗೆ ಟೆಂಡರ್ ನೀಡಿದೆ. ಹಸಿರು ಹುಲ್ಲು (₹ 1.5 ಕೋಟಿ) ಬಿಟ್ಟರೆ ಅತಿ ಹೆಚ್ಚು ವೆಚ್ಚ ಮಾಡುವುದು ಈ ಮಾಂಸ ಖರೀದಿಗೆ.
ಪ್ರವಾಸಿಗರು ಮೃಗಾಲಯದಿಂದ ಮರಳಿದ ಬಳಿಕ ಅಥವಾ ಸಫಾರಿ ಮುಕ್ತಾಯವಾದ ನಂತರ ಮಾಂಸಾಹಾರಿ ಪ್ರಾಣಿಗಳಿಗೆ ಆಹಾರ ನೀಡುವುದು ವಾಡಿಕೆ. ನಿತ್ಯ ಸಂಜೆ 5.30-6.30ರ ಒಳಗೆ ಮಾಂಸಾಹಾರವನ್ನು ಪ್ರಾಣಿಗಳಿಗೆ ನೀಡಲಾಗುತ್ತದೆ. ಹೆಣ್ಣು ಹುಲಿ ಮತ್ತು ಸಿಂಹಕ್ಕೆ ತಲಾ 8 ರಿಂದ 9 ಕೆ.ಜಿ, ಗಂಡು ಸಿಂಹ- ಹುಲಿಗೆ 12ರಿಂದ 14 ಕೆ.ಜಿ. ಮಾಂಸ ಹಾಗೂ ಚಿರತೆಗೆ 6 ರಿಂದ 8 ಕೆ.ಜಿ. ನೀಡಲಾಗುತ್ತಿದೆ. ಪ್ರಾಣಿಯ ದೇಹದ ತೂಕದ ಆಧಾರದ ಮೇರೆಗೆ ಇದನ್ನು ನಿರ್ಧರಿಸಲಾಗುತ್ತದೆ.ಮಂಗಳವಾರ ಪ್ರಾಣಿಗಳ ಉಪವಾಸ!
ಕಾಡಿನಲ್ಲಿ ಬೇಟೆ ಆಡಿದ ವ್ಯಾಘ್ರ ಹೊಟ್ಟೆ ತುಂಬ ಮಾಂಸ ಸೇವಿಸುತ್ತದೆ. ಮೂರ್ನಾಲ್ಕು ದಿನ ಅದು ವಿಶ್ರಾಂತಿ ಪಡೆಯುತ್ತದೆ. ಬಳಿಕ ಆಹಾರ ಹುಡುಕಲು ಆರಂಭಿಸುತ್ತದೆ. ಹೀಗಾಗಿ, ಸಮತೋಲನ ಉಂಟಾಗುತ್ತದೆ. ನಿತ್ಯವೂ ಆಹಾರ ಸೇವಿಸುವ ಮೃಗಾಲಯದ ಪ್ರಾಣಿಗಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿ, ಪ್ರತಿ ಮಂಗಳವಾರ ಈ ಪ್ರಾಣಿಗಳನ್ನು ಉಪವಾಸ ಬಿಡಲಾಗುತ್ತದೆ ಎಂದು ಮೃಗಾಲಯದ ಮೂಲಗಳು ಮಾಹಿತಿ ನೀಡಿವೆ.[ಗೋಹತ್ಯೆ ನಿಷೇಧ ಕಾಯ್ದೆ =ಮತಾಂತರ:ಮಹಾದೇವಪ್ಪ ಹೊಸ ಲೆಕ್ಕ!]
ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರು ಏನಂತಾರೆ?
ಕೇಂದ್ರ ಸರ್ಕಾರದ ಆದೇಶ ಇನ್ನೂ ಜಾರಿಯಾಗಿಲ್ಲ. ಆದೇಶ ಜಾರಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಡುವುದರಿಂದ ಸದ್ಯಕ್ಕೆ ಸಮಸ್ಯೆ ಉಂಟಾಗುವುದಿಲ್ಲ. ಆದರೂ, ದನ ಹಾಗೂ ಎಮ್ಮೆಯ ಮಾಂಸಕ್ಕೆ ಪರ್ಯಾಯವಾಗಿ ಬಳಕೆ ಮಾಡಬಹುದಾದ ಆಹಾರದ ಕುರಿತು ಗಂಭೀರವಾಗಿ ಚಿಂತಿಸಲಾಗುವುದು' ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ 'ಒನ್ ಇಂಡಿಯಾ'ಗೆ ತಿಳಿಸಿದ್ದಾರೆ.[ಗೋ ಹತ್ಯೆ ನಿಷೇಧ: ಕೇರಳ ಸರ್ಕಾರದ ನಿಲುವು ಸಮರ್ಥಿಸಿದ ಸಿಎಂ ಸಿದ್ದರಾಮಯ್ಯ]