"ಕೊರೊನಾ ಪ್ರಕರಣ ಹೆಚ್ಚಾದರೆ ಕೋವಿಡ್ ಸೆಂಟರ್ ಪುನರಾರಂಭ''
ಮೈಸೂರು, ಮಾರ್ಚ್ 24: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ, ಸೋಂಕಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದೆ.
ಮೈಸೂರು ನಗರದಲ್ಲಿ ಸೋಂಕಿನ ಪ್ರಕರಣ ಹೆಚ್ಚಾದಲ್ಲಿ ಕೋವಿಡ್ ಸೆಂಟರ್ ಪುನರಾರಂಭ ಮಾಡುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಿನಿಲಾಕ್ ಡೌನ್; ರೋಹಿಣಿ ಸಿಂಧೂರಿ ಎಚ್ಚರಿಕೆ
ಬುಧವಾರ ಈ ಬಗ್ಗೆ ಮಾತನಾಡಿದ ಡಿಸಿ ರೋಹಿಣಿ ಸಿಂಧೂರಿ, "ಮೈಸೂರಿನಲ್ಲಿ ಕೊರೊನಾ ಸೊಂಕು ಹೆಚ್ಚಾದ ಹಿನ್ನೆಲೆ, ಸರ್ಕಾರಿ ಜಾಥಾ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ದಿನೇ ದಿನೇ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರದಿಂದ ಹೆಚ್ಚು ಜನ ಸೇರುವ ಕಾರ್ಯಕ್ರಮಗಳನ್ನು ಕೂಡ ನಿಲ್ಲಿಸಲಾಗುವುದು. ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಸೋಂಕಿನ ಪ್ರಕರಣ ಹೆಚ್ಚಾದಲ್ಲಿ ಕೋವಿಡ್ ಸೆಂಟರ್ ಪುನರಾರಂಭ ಮಾಡುತ್ತೇವೆ'' ಎಂದರು.
ಬನ್ನೂರಿನಲ್ಲಿ ಶಾಲಾ ಮಕ್ಕಳಿಗೆ ಸಾಮೂಹಿಕ ಸೋಂಕು ವಿಚಾರ ಕುರಿತು ಮಾತನಾಡಿದ ಡಿಸಿ ರೋಹಿಣಿ ಸಿಂಧೂರಿ, ಶಾಲಾ ಆಡಳಿತ ಮಂಡಳಿಯವರು ಸಂಪರ್ಕಿತರೆಲ್ಲರಿಗೂ ಟೆಸ್ಟ್ ಮಾಡಿಸುತ್ತಿದ್ದಾರೆ. ಈಗಾಗಲೇ 1500ಕ್ಕೂ ಹೆಚ್ಚು ಪರೀಕ್ಷೆ ಮಾಡಲಾಗಿದೆ. ಶಾಲಾ- ಕಾಲೇಜುಗಳಲ್ಲಿ ಕೊರೊನಾ ಪರೀಕ್ಷೆಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ 1 ವಾರದಿಂದ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಹೀಗಾಗಿ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಸಕಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.