ಮೈಸೂರಲ್ಲಿ ಸ್ಥಾಪನೆಯಾಯ್ತು ಕೋವಿಡ್ ಕೇರ್ ಟೀಮ್
ಮೈಸೂರು, ಮಾರ್ಚ್ 24: ದೇಶದೆಲ್ಲೆಡೆ ಬಹು ಚರ್ಚಿತವಾಗುತ್ತಿರುವ ವಿಷಯ ಕೋವಿಡ್ 19. ಇದೀಗ ಜನರೆಲ್ಲ ಆತಂಕದಲ್ಲಿ ದಿನ ಕಳೆಯುತ್ತಿರುವಾಗ ಜನತೆಯ ಅಗತ್ಯಕ್ಕೆ ಸ್ಪಂದಿಸಲು, ನೆರವು ನೀಡಲು ಸ್ವಯಂ ಸೇವಕ ಪಡೆಯೊಂದು ಸಜ್ಜಾಗಿದೆ. ಮೈಸೂರಿನಲ್ಲಿ ಎರಡನೇ ಕೊರೊನಾ ಪ್ರಕರಣ ಪತ್ತೆ ಆಗುತ್ತಿದ್ದಂತೆ ವಿವಿಧ ಜನಪರ ಸಂಘ -ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸಲು ಮುಂದಾಗಿದ್ದು, ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರ ನೇತೃತ್ವದಲ್ಲಿ ಮೈಸೂರು ಕೋವಿಡ್ ಕೇರ್ ಟೀಮ್ (MCCT) ಸೋಮವಾರ ಅಸ್ತಿತ್ವಕ್ಕೆ ಬಂದಿದೆ.
ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಿಎಎ, ಎಸ್ ಕೆಸಿಸಿಐ, ಎನ್ ಸಿಐಸಿ, ರೆಡಾಲ್, ಬಿಎಐ, ಮೆರೇಡ್ಕೋ, ಯೋಗಾ ಫೆಡರೇಷನ್, ಟ್ರಾವೆಲ್ಸ್ ಅಸೋಸಿಯೇಷನ್, ಹೋಟೆಲ್ ಅಸೋಸಿಯೇಷನ್, ಸಿಸ್ಟ್ ಮ್ಯಾಮ್ ಮತ್ತು ಫಾರ್ಮ ಅಸೋಸಿಯೇಷನ್ ಹೀಗೆ ವಿವಿಧ ಸಂಸ್ಥೆಗಳು ಒಟ್ಟಾಗಿ ಸೇರಿ ಸರ್ಕಾರದಿಂದ ಹಾಗೂ ನಾಗರಿಕರಿಂದ ಯಾವ ರೀತಿಯ ಕೆಲಸಗಳಾಗಬೇಕೆಂದು ನಿನ್ನೆ ಸುದೀರ್ಘ ಚರ್ಚೆಯ ನಂತರ ಸರ್ಕಾರದ ಜತೆ ಸ್ಪಂದಿಸಲು ಮತ್ತು ಜನತೆಗೆ ನೆರವು ನೀಡುವ ಸಲುವಾಗಿ ತಂಡ ರಚನೆ ಆಗಿದೆ.
ಜನತಾ ಕರ್ಫ್ಯೂ ಆಚರಿಸುವಂತೆ ಶಾಸಕ ರಾಮದಾಸ್ ಮನವಿ
ಈ ತಂಡ ಈಗಾಗಲೇ ಕಾಲ್ ಸೆಂಟರ್ ತೆರೆದಿದ್ದು 24 ಗಂಟೆಗಳೂ ಕಾರ್ಯ ನಿರ್ವಹಿಸಲಿದೆ. ಕಾಲ್ ಸೆಂಟರ್ ನಂಬರ್- 4001100 ಆಗಿದ್ದು, ಕರೆಗಳ ವಿಚಾರಗಳನ್ನು ತೆಗೆದುಕೊಂಡು ಅದನ್ನು ವ್ಯವಸ್ಥಿತವಾಗಿ ಪ್ರಸ್ತುತ ಪಡಿಸುವ ದೃಷ್ಟಿಯಿಂದ ಕೇರ್ ಸೆಂಟರ್ ಕೂಡ ತೆರೆಯಲು ನಿರ್ಣಯಿಸಲಾಗಿದೆ. ಕಡು ಬಡವರು, ಹಾಗೂ ದಿನ ನಿತ್ಯ ಹೊರಗಿನ ಆಹಾರವನ್ನು ಅವಲಂಬಿಸಿರುವವರ ಮೇಲೆ ವಿಶೇಷವಾಗಿ ಗಮನ ಹರಿಸಲು ತುರ್ತಾಗಿ ಬೇಕಾಗಿರುವ ಆಹಾರ ಪದಾರ್ಥಗಳನ್ನು ದಾನಿಗಳ ಮೂಲಕ ಪಡೆದುಕೊಂಡು ವಿತರಿಸಲು ಒಂದು ಕೇಂದ್ರ ಪ್ರಾರಂಭಿಸಲು ತೀರ್ಮಾನಿಸಲಾಗಿದೆ.
ಜನಸಾಮಾನ್ಯರ ಜಾಗೃತಿಗೆ ಔಟ್ ಡೋರ್ ಪಬ್ಲಿಸಿಟಿ ಸೆಂಟರ್ ಮಾಡುವ ನಿರ್ಣಯ ಮಾಡಲಾಗಿದೆ. ವಿಶೇಷವಾಗಿ ಸಿಸ್ಕಾಂ ಶಾಲೆಯ ಮೂಲಕ ಜನಸಾಮಾನ್ಯರಿಗೆ ವಿಷಯ ತಲುಪಿಸುವ ದೃಷ್ಟಿಯಿಂದ ಶಾಲೆ ಮತ್ತು ಪೋಷಕರ ಕೋ ಆರ್ಡಿನೇಷನ್ ಟೀಂ ಅನ್ನು ತಯಾರು ಮಾಡಲು ನಿರ್ಧರಿಸಲಾಗಿದೆ.
ಜನಸಾಮಾನ್ಯರಿಗೆ ಅವಶ್ಯಕವಾದ ಔಷಧ ಉಪಚಾರಗಳ ಕುರಿತು ಫಾರ್ಮಾ ಕೋ ಆರ್ಡಿನೇಷನ್ ಟೀಂ ತಯಾರು ಮಾಡಲಾಗಿದೆ. ನಮ್ಮ ರಾಜ್ಯದ ಜನರ ಜೊತೆಗೆ ಬೇರೆ ಬೇರೆ ರಾಜ್ಯದಿಂದ ಬಂದಿರುವ ಕಟ್ಟಡ ಕೆಲಸಗಾರರನ್ನು ಅವರು ಕೆಲಸ ಮಾಡುತ್ತಿರುವ ಜಾಗದಲ್ಲೇ ಉಳಿಸಿಕೊಂಡು ಅವರಿಗೆ ಬೇಕಾಗಿರುವ ಆಹಾರ, ವೈದ್ಯಕೀಯ ಚಿಕಿತ್ಸೆ ಎಲ್ಲದರ ಬಗ್ಗೆ ಚಿಂತನೆ ಮಾಡಿ, ಅವರಿಗೆ ಕೂಡ ಕೋ ಆರ್ಡಿನೇಷನ್ ಸೆಂಟರ್ ಸ್ಥಾಪಿಸಲಾಗಿದೆ.
ಮೈಸೂರಲ್ಲಿ ಮೆಡಿಕಲ್ ಶಾಪ್ ಗೆ 5,000 ರೂ. ದಂಡ
ಪ್ರತಿಯೊಬ್ಬರಿಗೂ ಬೇಕಾಗಿರುವ ಆಹಾರ ಪದಾರ್ಥಗಳನ್ನು, ಅವಶ್ಯಕ ವಸ್ತುಗಳನ್ನು ಮುಂದಿನ 31ನೇ ತಾರೀಕಿನವರೆಗೂ ಸಂಗ್ರಹ ಮಾಡಿ ಇಟ್ಟುಕೊಳ್ಳಿ. ನಿನ್ನೆ ಆದಂತಹ ಜನತಾ ಕರ್ಫ್ಯೂ ರೀತಿಯಲ್ಲಿ ಇದೇ ತಿಂಗಳ 31 ನೇ ತಾರೀಕಿನವರೆಗೂ ಕರ್ಫ್ಯೂಗೆ ಸಹಕರಿಸಿ, ಯಾರೂ ಹೊರಗೆ ಬಂದು ರೋಗವನ್ನು ನಿಮ್ಮ ಮನೆಗೆ ನೀವೇ ತೆಗೆದುಕೊಂಡು ಹೋಗಬೇಡಿ ಎಂದು ಶಾಸಕರು ತಿಳಿಸಿದ್ದಾರೆ.