ಕೋವಿಡ್ ಕೇರ್ ಸೆಂಟರ್ ವಿಚಾರ; ರಾಮದಾಸ್, ಸಾ. ರಾ. ಮಹೇಶ್ ಜಟಾಪಟಿ!
ಮೈಸೂರು, ಮೇ 20; ಸಮರ್ಪಕವಾಗಿ ಕಾರ್ಯನಿರ್ವಹಿಸದ ಕೋವಿಡ್ ಕೇರ್ ಸೆಂಟರ್ಗಳ ವಿರುದ್ಧ ಕ್ರಮಕೈಗೊಂಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಹಾಗೂ ಬಿಜೆಪಿ ಶಾಸಕ ಎಸ್. ಎ. ರಾಮದಾಸ್ ನಡುವೆ ಜಟಾಪಟಿ ಶುರುವಾಗಿದೆ.
ನಗರದ ಖಾಸಗಿ ಕೋವಿಡ್ ಕೇರ್ ಸೆಂಟರ್ಗಳ ಪರಿಶೀಲನೆ ನಡೆಸಿದ್ದ ಶಾಸಕ ರಾಮದಾಸ್, ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕೇಂದ್ರಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಡಿಎಚ್ಒ ಖಾಸಗಿ ಆಸ್ಪತ್ರೆಗಳು ನಿರ್ವಹಣೆ ಮಾಡುತ್ತಿದ್ದ ಕೋವಿಡ್ ಆರೈಕೆ ಕೇಂದ್ರಗಳನ್ನು ಮುಂದಿನ ಆದೇಶದವರೆಗೂ ಬಂದ್ ಮಾಡುವಂತೆ ಆದೇಶಿಸಿದ್ದರು.
ಮೈಸೂರು; 16 ಖಾಸಗಿ ಕೋವಿಡ್ ಕೇರ್ ಸೆಂಟರ್ ಮುಚ್ಚಲು ಆದೇಶ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಶಾಸಕ ಸಾ. ರಾ. ಮಹೇಶ್, ಕೋವಿಡ್ ಕೇರ್ ಸೆಂಟರ್ಗಳ ಪರಿಶೀಲನೆ ನಡೆಸಿ, ಅವುಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದ ರಾಮದಾಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಮೈಸೂರು; ಬ್ಲ್ಯಾಕ್ ಫಂಗಸ್ಗೆ ಇಬ್ಬರು ಕೋವಿಡ್ ವಾರಿಯರ್ಸ್ ಬಲಿ
ಸಾ. ರಾ. ಮಹೇಶ್ ಹೇಳಿಕೆಗೆ ತಿರುಗೇಟು ನೀಡಿರುವ ರಾಮದಾಸ್, "ಉಸ್ತುವಾರಿ ಸಚಿವರು ಸೂಚನೆ ನೀಡಿದ ಕಾರಣಕ್ಕೆ ಸಲಹೆಗಾರನಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಇದು ನನಗೆ ಬಂದ ಅಧಿಕಾರ ಅಲ್ಲ, ನನ್ನ ಜಿಲ್ಲೆಯ ಕರ್ತವ್ಯ. ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟೇ ಹೇಳಿದರು ಎಸ್ಓಪಿ ಪಾಲನೆ ಮಾಡುತ್ತಿರಲಿಲ್ಲ. ಈ ಬಗ್ಗೆ ಮಾಹಿತಿ ತರಿಸಿಕೊಂಡಿದ್ದೆ. ಜೊತೆಗೆ ವಾರ್ ರೂಂನಲ್ಲಿನ ಲೆಕ್ಕವೂ ಸರಿಯಾಗಿ ಟ್ಯಾಲಿ ಆಗುತ್ತಿರಲಿಲ್ಲ" ಎಂದರು.
ಕೋವಿಡ್ ಪರಿಸ್ಥಿತಿ; ಮೈಸೂರು ಜೈಲಿನಿಂದ 46 ಕೈದಿಗಳು ಬಿಡುಗಡೆ
"ಎಲ್ಲವು ಡಬಲ್ ಇತ್ತು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ದೆ. ಒಂದು ವಾರದ ಹಿಂದೆಯೇ ಈ ಬಗ್ಗೆ ಕೋವಿಡ್ ಕೇರ್ ಸೆಂಟರ್ಗಳಿಗೆ ಸೂಚನೆ ನೀಡಲಾಗಿತ್ತು. ಇದನ್ನ ಗಮನಿಸಿ ಖುದ್ದು ನಾನೇ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದೆ. ಈ ವೇಳೆ ಅಲ್ಲಿ ಸಾಕಷ್ಟು ಲೋಪದೋಷ ಕಂಡು ಬಂತು" ಎಂದು ರಾಮದಾಸ್ ಹೇಳಿದರು.
"ಆಸ್ಪತ್ರೆಯಿಂದ ಬಂದ ಕೆಲವೇ ಕ್ಷಣದಲ್ಲಿ ಕರೆ ಬಂತು. ನಂತರ ಎಲ್ಲರೂ ಸರಿಯಾದ ಮಾಹಿತಿ ಕೊಟ್ಟರು. ನಮ್ಮ ಉದ್ದೇಶ ಬಡ ಜನರಿಗೆ ಸರಿಯಾದ ಚಿಕಿತ್ಸೆ ಸಿಗುವುದು. ಅದು ಸರ್ಕಾರಿ ಕೋಟಾದ ದುರ್ಬಳಕೆ ಆಗಬಾರದೆಂಬುದಷ್ಟೇ" ಎಂದು ಸ್ಪಷ್ಟಪಡಿಸಿದರು.
ಖಾಸಗಿ ಕೋವಿಡ್ ಕೇರ್ ಸೆಂಟರ್ಗಳ ಅನುಮತಿ ರದ್ದತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ರಾಮದಾದ್, "ಖಾಸಗಿ ಆಸ್ಪತ್ರೆಗಳು ಹಣ ಮಾಡುವ ದಂಧೆಗಾಗಿ ಕೇರ್ ಸೆಂಟರ್ ನಡೆಸುತ್ತಿವೆ. ಇದನ್ನು ತಪ್ಪಿಸುವ ಸಲುವಾಗಿ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದು ನಿಜ" ಎಂದು ತಿಳಿಸಿದರು.
"ನಾನು ಕೋವಿಡ್ ಕೇರ್ ಸೆಂಟರ್ಗಳಿಗೆ ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಅಲ್ಲಿ ವೈದ್ಯರಿಲ್ಲ, ನರ್ಸ್ ಇಲ್ಲ, ಕೆಲಸ ಮಾಡುವವರೂ ಪಿಪಿಇ ಕಿಟ್ ಧರಿಸುತ್ತಿಲ್ಲ. ಒಂದು ಹೋಟೆಲ್ನವರು ಮೊದಲ, ಎರಡನೇ ಮಹಡಿಯನ್ನು ಒಂದು ಆಸ್ಪತ್ರೆಗೆ, ಮೂರು, ನಾಲ್ಕನೇ ಮಹಡಿಯನ್ನು ಮತ್ತೊಂದು ಆಸ್ಪತ್ರೆಗೆ ಕೊಟ್ಟಿದ್ದಾರೆ. ಇರುವ ಒಂದೇ ಲಿಫ್ಟ್ ನಲ್ಲಿ ರೋಗಿಗಳು, ಹೆಲ್ತ್ ವರ್ಕರ್, ಜನ ಸಾಮಾನ್ಯರು ಓಡಾಡಬೇಕು. ಇಂತಹ ಅವ್ಯವಸ್ಥೆ ತಪ್ಪಿಸಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ" ಎಂದರು.
"ಯಾರಿಗೋ ತೊಂದರೆ ಕೊಡಬೇಕು ಎಂಬುದು ನಮ್ಮ ಉದ್ದೇಶವಲ್ಲ. ಇದುವರೆಗೂ ಯಾವುದೇ ಕೇರ್ ಸೆಂಟರ್ ಮುಚ್ಚಿಲ್ಲ. ಯಾವೊಬ್ಬ ರೋಗಿಯನ್ನೂ ಹೊರಗೆ ಕಳುಹಿಸಿಲ್ಲ" ಎಂದು ಹೇಳಿದರು.