ಕೋವಿಡ್ 3ನೇ ಅಲೆ ಭೀತಿ; ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆಗಳು
ಮೈಸೂರು, ನವೆಂಬರ್ 29; "ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ 3ನೇ ಅಲೆ ಭೀತಿ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸದೇ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಸೋಮವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ಬೇರೆ-ಬೇರೆ ದೇಶದಲ್ಲಿ ಕೊರೊನಾ ಹೊಸ ತಳಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಇದು ಭಾರತಕ್ಕೂ ಬರಬಹುದು. ಹೀಗಾಗಿ ಕರ್ನಾಟಕ ಸರ್ಕಾರ ವಿದೇಶದಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಬೇಕು" ಎಂದರು.
'ಓಮಿಕ್ರಾನ್' ಭಾರತಕ್ಕೆ ಎಚ್ಚರಿಕೆ ಗಂಟೆಯಾಗಬಹುದು; ಸೌಮ್ಯ
"ಅನುಮಾನ ಬಂದ ವ್ಯಕ್ತಿಗಳ ತಪಾಸಣೆ ಮಾಡಬೇಕು. ಕೊರೊನಾ 1 ಮತ್ತು 2ನೇ ಅಲೆ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸಿದಂತೆ ಮಾಡಬಾರದು, ಅಗತ್ಯ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆ, ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಹೆಚ್ಚಾಗದಂತೆ ಕ್ರಮ ಕೈಗೊಳ್ಳಬೇಕು. 3ನೇ ಅಲೆ ಅಪ್ಪಳಿಸದ ಹಾಗೆ ಬಿಗಿ ಕ್ರಮ ಜರುಗಿಸಬೇಕೆಂದು" ಸಲಹೆ ನೀಡಿದರು.
ಓಮಿಕ್ರಾನ್ ಬಗ್ಗೆ ಚರ್ಚಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ
"2ನೇ ಅಲೆಯನ್ನು ನಿರ್ಲಕ್ಷಿಸಿದ ಪರಿಣಾಮ ಅನೇಕ ಸಾವುಗಳು ಉಂಟಾದವು. 3ನೇ ಅಲೆ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಅಗತ್ಯ. ರಾಜ್ಯಕ್ಕೂ ಮೂರನೇ ಅಲೆ ಬಾರದಂತೆ ಎಚ್ಚರ ವಹಿಸಬೇಕಾದುದು ಸರ್ಕಾರದ ಕರ್ತವ್ಯ. ಸಾವು ನೋವು ಹೆಚ್ಚಾಗದಂತೆ ಸರ್ಕಾರ ತ್ವರಿತ ನಿರ್ಧಾರ ಕೈಗೊಳ್ಳಬೇಕು" ಎಂದು ಹೇಳಿದರು.
'ಕೊರೊನಾ 3ನೇ ಅಲೆ ಬಂದ ನಂತರ ಸರ್ಕಾರ ಕಾರ್ಯಪ್ರವೃತ್ತ ಆಗಬಾರದು. ಮುಂಚಿತವಾಗಿ ಸೋಂಕು ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ವಹಿಸಬೇಕು" ಎಂದು ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದರು.
ಇದೇ ವೇಳೆ ವಿಧಾನ ಪರಿಷತ್ ಚುನಾವಣೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, 'ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುತ್ತದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಇದೆ. ಪ್ರಚಾರವೂ ಒಳ್ಳೆ ರೀತಿ ನಡೆಯುತ್ತಿದೆ. ಮತದಾರರು ಕೂಡ ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಟ್ಟರೂ ನಮಗೆ ಏನು ತೊಂದರೆ ಆಗುವುದಿಲ್ಲ. ಮೊದಲಿನಿಂದಲೂ ಅವರದ್ದು ಒಳ ಒಪ್ಪಂದ ನಡೆಯುತ್ತಲೇ ಇದೆ. ಅದರಲ್ಲಿ ಹೊಸತೇನೂ ಇಲ್ಲ. ನಮ್ಮ ಬೆಂಬಲಿಗರು ನಮ್ಮನ್ನು ಬೆಂಬಲಿಸುತ್ತಾರೆ. ಸರ್ಕಾರದ ಜನವಿರೋಧಿ ನೀತಿಗಳಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ" ಎಂದರು.
ಓಮಿಕ್ರಾನ್ ರೂಪಾಂತರ ಸೋಂಕು ತಗುಲಿದರೆ ಮನೆಯಲ್ಲೇ ಚಿಕಿತ್ಸೆ!
"ಅಧಿಕಾರ ಅಲ್ಲ ಜನ ಸೇವೆ ಮುಖ್ಯ" ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟರು. "ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗುವುದು ಜನ ಸೇವೆಗಾಗಿ. ಅದರಲ್ಲಿ ಹೊಸದು ಏನಿದೆ?. ಪ್ರಧಾನಮಂತ್ರಿ ಹುದ್ದೆ ಎನ್ನುವುದು ಜನಸೇವೆಗಾಗಿ ಎಂಬುದು ಅವರಿಗೆ ಈಗ ಜ್ಞಾನೋದಯವಾಗಿದೆ. ರಾಜಕೀಯವೇ ಜನಸೇವೆ, ಅದು ಈಗ ಪ್ರಧಾನಮಂತ್ರಿಗೆ ಅರಿವಾಗಿದೆ" ಎಂದು ಹೇಳಿದರು.
"ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಸರ್ವಪಕ್ಷ ಸಭೆ ಕರೆದು ನರೇಂದ್ರ ಮೋದಿ ಅವರೇ ಗೈರಾಗಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ. ಈ ರೀತಿಯ ಧೋರಣೆ ಸರಿಯಿಲ್ಲ" ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಆರೋಗ್ಯ ಸಚಿವರ ಹೇಳಿಕೆ; ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಓಮಿಕ್ರಾನ್ ಬಗ್ಗೆ ಮಾತನಾಡಿದ್ದಾರೆ, "ಓಮಿಕ್ರಾನ್ ವೈರಸ್ ಬೇಗ ಹರುಡುತ್ತದೆ ಎಂದು ಗೊತ್ತಾಗಿದೆ ಆದರೆ ಈ ವೈರಸ್ನ ತೀವ್ರತೆ ಎಷ್ಟು ಅನ್ನೊದು ಗೊತ್ತಾಗಿಲ್ಲ" ಎಂದರು.
"ನಮ್ಮ ಸರ್ಕಾರ ಈಗಾಗಲೇ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ ಸಿಎಂ ಬೊಮ್ಮಾಯಿ ಅವರು ಈಗಾಗಲೇ ಕೆಲವು ನಿರ್ಬಂಧ ತೆಗೆದುಕೊಂಡಿದ್ದಾರೆ. ದೇಶದಲ್ಲಿನ ನಮ್ಮ ರಾಜ್ಯ ಹೆಚ್ಚು ಬಿಗಿ ಕ್ರಮಕ್ಕೆ ಮುಂದಾಗಿದೆ. ಎಲ್ಲರು 2ನೇ ಡೋಸ್ ವ್ಯಾಕ್ಸಿನೇಷನ್ ಪಡೆಯಬೇಕು" ಎಂದು ಸಚಿವರು ಮನವಿ ಮಾಡಿದರು.
"ಮುಖ್ಯಮಂತ್ರಿಗಳು ಈಗಾಗಲೇ ನಿರ್ದೇಶನ ಕೊಟ್ಟಿದ್ದಾರೆ . ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಡಿಮೆ ಮಾಡಬೇಕು. ಅನಗತ್ಯವಾಗಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದು . ವಸತಿ ನಿಲಯ ಇರುವ ಕಡೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು" ಎಂದರು.