ಮೈಸೂರಿನ ದೇವರಾಜ ಮಾರುಕಟ್ಟೆ ಕೆಡವಲು ಕೋರ್ಟ್ ಆದೇಶ
ಮೈಸೂರು, ಜೂನ್ 15: ಮೈಸೂರಿನ ಪ್ರತಿಷ್ಠಿತ ಪಾರಂಪರಿಕ ಕಟ್ಟಡವೆಂದು ಹೆಸರಾದ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಾಣ ಮಾಡುವಂತೆ ನ್ಯಾಯಾಲಯ ಆದೇಶ ನೀಡಿರುವುದಾಗಿ ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಲಕ್ಷಾಂತರ ಜನಕ್ಕೆ ಅಕ್ಷರ ಕಲಿಸಿದ ಈ ಶಾಲಾ ಕಟ್ಟಡ ನೆಲಕ್ಕುರುಳುತ್ತಾ?
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರುಕಟ್ಟೆಯ ಕೆಲ ಮಳಿಗೆಯವರು, ಒಡೆಯದೆ ನವೀಕರಣಗೊಳಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಒಡೆದು ಹಾಕಿ ಪುನರ್ ನಿರ್ಮಾಣ ಮಾಡುವಂತೆ ಆದೇಶಿಸಿದೆ ಎಂದರು. ಮಾರುಕಟ್ಟೆ ನವೀಕರಣ ವೇಳೆಯೇ ಒಂದು ಭಾಗ ಕುಸಿತಗೊಂಡಿತ್ತು. ಇದೀಗ ಸಂಪೂರ್ಣ ಕೆಡವಿ ಹೊಸದಾಗಿ ನಿರ್ಮಿಸಲು ಕೌನ್ಸಿಲ್ ತೀರ್ಮಾನ ಕೈಗೊಂಡಿದೆ. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು. ಈ ನಡುವೆ ಪಾರಂಪರಿಕ ಕಟ್ಟಡವನ್ನು ಉಳಿಸಿಕೊಳ್ಳಬೇಕೆಂಬ ಅಭಿಪ್ರಾಯವೂ ಕೇಳಿಬಂದಿತ್ತು ಎಂದು ಹೇಳಿದರು.
ಈ ಕುರಿತಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸ್ಥಳ ಪರಿಶೀಲನೆ ನಡೆಸಿದ್ದರು. ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ. ಸರ್ಕಾರದ ಸೂಚನೆಯಂತೆ ನಾವು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮೇಯರ್ ತಿಳಿಸಿದರು.