'ಸಿದ್ದುಗೆ ಧೈರ್ಯವಿದ್ದರೆ ಸರ್ಕಾರದ ಸಾಧನೆ ಮುಂದಿಡಲಿ'
ಮೈಸೂರು, ಜನವರಿ 16 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧೈರ್ಯ ಇದ್ದರೆ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಜನರ ಬಳಿಗೆ ಹೋಗಬೇಕಿತ್ತು. ಆಮಿಷ ಒಡ್ಡಬೇಕಿಲ್ಲ' ಎಂದು ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಕಾಂಗ್ರೆಸ್ ನಂಜನಗೂಡು ಉಪಚುನಾವಣೆಗೆ ಅಭ್ಯರ್ಥಿ ಹುಡುಕಲು ಸಮಿತಿ ರಚಿಸಿ ಹರಸಾಹಸ ಪಡುತ್ತಿದೆ. ನೈತಿಕವಾಗಿ ಕಾಂಗ್ರೆಸ್ ದಿವಾಳಿಯಾಗಿದೆ. ಅಲ್ಲಿ ಸಮರ್ಥ ಅಭ್ಯರ್ಥಿಯೇ ಇಲ್ಲದಂತಾಗಿದೆ. ಪಕ್ಷದಲ್ಲಿ ಈ ಕ್ಷೇತ್ರದಲ್ಲಿಯವರೇ ಆದ ಮುಖ್ಯಮಂತ್ರಿಗಳೂ ಇದ್ದಾರೆ, ಸಚಿವರು ಇದ್ದಾರೆ, ಸಂಸದರೂ ಇದ್ದಾರೆ ಇಂತಹ ಕ್ಷೇತ್ರದಲ್ಲಿ ಹೀಗೂ ಆಗುವುದುಂಟೆ ಎಂದು ಶ್ರೀನಿವಾಸ್ ಪ್ರಸಾದ್ ಲೇವಡಿಯಾಡಿದರು.[ಸಿದ್ದರಾಮಯ್ಯನವರದ್ದು ಅಸೂಯೆ ಬುದ್ಧಿ: ಶ್ರೀನಿವಾಸ್ ಪ್ರಸಾದ್]
ರಾಜ್ಯದ ಬೇರಾವ ವಿಧಾನಸಭಾ ಕ್ಷೇತ್ರದಲ್ಲೂ ಇಲ್ಲದ ಸಾಲದ ಯೋಜನೆಯನ್ನು ನಂಜನಗೂಡು ಕ್ಷೇತ್ರದಲ್ಲಿ ಮಾತ್ರ ಜಾರಿಗೆ ತರಲಾಗಿದೆ. ಮುಖ್ಯಮಂತ್ರಿಗಳಿಗೆ ಧೈರ್ಯವಿಲ್ಲ. ಇದ್ದರೆ ಸರ್ಕಾರದ ಮೂರೂವರೆ ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗಬೇಕಿತ್ತು. ಅದನ್ನು ಬಿಟ್ಟು ಹಣದ ಆಮಿಷವನ್ನು ತೋರಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಎಲ್ಲ ಪಕ್ಷಗಳಲ್ಲಿಯೂ ಅಸಹನೆ, ಭಿನ್ನಾಭಿಪ್ರಾಯ ಇರುವಂತೆ ಕೆ.ಎಸ್.ಈಶ್ವರಪ್ಪ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ನಡುವೆ ಭಿನ್ನಾಭಿಪ್ರಾಯವಿದೆ. ಅದು ಬಗೆಹರಿಸಲು ಸಾಧ್ಯವಿಲ್ಲದ್ದೇನೂ ಅಲ್ಲ. ಮಾತುಕತೆಯ ಮೂಲಕ ಬಗೆಹರಿಸಬಹುದು ಎಂದು ತಿಳಿಸಿದರು.