ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ...
ಮೈಸೂರು, ಅಕ್ಟೋಬರ್ 8: ಕಳೆದ ಹತ್ತು ದಿನಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರಂಭಗೊಂಡಿದ್ದ ದಸರಾ ಸಂಭ್ರಮ ಇಂದು ಅರಮನೆ ಆವರಣದಿಂದ ಆಕರ್ಷಕ ಜಂಬೂಸವಾರಿ ಮೆರವಣಿಗೆಯೊಂದಿಗೆ ಶುರುವಾಗಿ ರಾತ್ರಿ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿನೊಂದಿಗೆ ಸಂಪನ್ನಗೊಳ್ಳಲಿದೆ.
ಐತಿಹಾಸಿಕ ಮೈಸೂರು ದಸರಾ ನಡೆದು ಬಂದ ಹಾದಿ
ಇಡೀ ಮೈಸೂರಿಗೆ ಮೈಸೂರೇ ದಸರಾ ಸಂಭ್ರಮದಲ್ಲಿ ಮಿಂದೆದ್ದಿದ್ದು, ವರುಣ ಆರ್ಭಟದ ನಡುವೆಯೂ ದಸರಾ ಸಡಗರ ಕಳೆಗುಂದಿಲ್ಲ. ಇಷ್ಟು ದಿನಗಳಿಂದ ಕಾಯುತ್ತಾ ಬಂದಿದ್ದ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ದೂರದಿಂದ ಬಂದ ಪ್ರವಾಸಿಗರು ಮೈಸೂರಿನಲ್ಲಿ ಹೋಟೆಲ್, ರೆಸಾರ್ಟ್ ಹಾಗೂ ಸಂಬಂಧಿಕರ ಮನೆಗಳಲ್ಲಿ ಬೀಡುಬಿಟ್ಟಿದ್ದಾರೆ. ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಿಸಲು ಮುಂದಾಗಿದ್ದಾರೆ. ಇನ್ನು ಸುತ್ತಮುತ್ತಲ ಊರುಗಳಿಂದ ಜನ ಸ್ವಂತ ವಾಹನ, ಬಸ್ಗಳನ್ನು ಹಿಡಿದುಕೊಂಡು ನಗರದತ್ತ ಬರುತ್ತಿದ್ದಾರೆ.
ಜಂಬೂಸವಾರಿ ವೀಕ್ಷಿಸಲು ಮರ, ಕಟ್ಟಡವೇರುವ ಜನ
ಜಂಬೂಸವಾರಿ ಅರಮನೆ ಆವರಣದಿಂದ ಆಂಜನೇಯ ದೇಗುಲದ ಮೂಲಕ ಜಯಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ, ಸರ್ಕಾರಿ ಆಯುರ್ವೇದ ಆಸ್ಪತ್ರೆ ವೃತ್ತ, ಹೈವೇ ವೃತ್ತದ ಮೂಲಕ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ. ದೂರದ ಮಾರ್ಗಗಳ ಎರಡು ಬದಿಯಲ್ಲಿ ಜನ ಕಿಕ್ಕಿರಿದು ಸೇರುತ್ತಿದ್ದು, ಮೊದಲೇ ಬಂದು ತಮಗೆ ಸೂಕ್ತವಾದ ಸ್ಥಳಗಳನ್ನು ಹಿಡಿದುಕೊಂಡು ಆಸೀನರಾಗಿ ಬಿಡುತ್ತಾರೆ.
ಆದರೆ ಮೆರವಣಿಗೆ ಬರುವ ಸಮಯದಲ್ಲಿ ನೂಕು ನುಗ್ಗಲು ಆರಂಭವಾಗಿ ಕೆಲವೊಮ್ಮೆ ಸ್ಥಾನಪಲ್ಲಟಗೊಳ್ಳುವ ಪರಿಸ್ಥಿತಿಯೂ ನಿರ್ಮಾಣವಾಗಿ ಬಿಡುತ್ತದೆ. ಕೆಲವರು ಕಟ್ಟಡಗಳನ್ನೇರಿದರೆ, ಮತ್ತೆ ಕೆಲವರು ಮರವೇರಿ ಕುಳಿತು ವೀಕ್ಷಿಸುತ್ತಾರೆ. ಇದು ಅಪಾಯಕಾರಿಯಾಗಿರುವುದರಿಂದ ಮರ ಮತ್ತು ಕಟ್ಟಡ ಏರುವುದನ್ನು ನಿರ್ಬಂಧಿಸಲಾಗಿದ್ದರೂ ಜನ ಸೊಪ್ಪು ಹಾಕದೆ ಆ ಸಮಯದಲ್ಲಿ ಮರ, ಕಟ್ಟಡ ಏರಿ ಕುಳಿತು ಬಿಡುತ್ತಾರೆ.
ಛತ್ರಿ ಕೊಂಡೊಯ್ಯಲು ಜನರ ಚಿಂತನೆ
ಈ ಬಾರಿ ರಾತ್ರಿಯೆಲ್ಲ ಭಾರಿ ಮಳೆ ಸುರಿದಿರುವುದರಿಂದ ಮಣ್ಣು ತೇವಗೊಂಡಿದ್ದು ರಸ್ತೆಯ ಇಕ್ಕೆಲಗಳು ಕೆಲವೆಡೆ ಡಾಂಬರು, ಗಾರೆ ಇಲ್ಲದ ಕಡೆ ಕೆಸರಾಗಿದ್ದು, ಬಿಸಿಲಿಗೆ ಒಣಗಿದರೆ ತೊಂದರೆ ಇಲ್ಲ. ಇಲ್ಲದಿದ್ದರೆ ಇದರ ಮೇಲೆಯೇ ನಿಂತು ವೀಕ್ಷಿಸುವುದು ಅನಿವಾರ್ಯವಾಗಿದೆ. ಇದೀಗ ಬಿಸಿಲು ಕಾಣಿಸಿಕೊಂಡಿದ್ದು ಜಂಬೂಸವಾರಿ ವೇಳೆ ಮಳೆ ಬಾರದೆ ಹೋದರೆ ಎಲ್ಲರೂ ನೆಮ್ಮದಿಯಾಗಿ ದಸರಾ ನೋಡಬಹುದಾಗಿದೆ. ಈ ಬಾರಿ ಸದಾ ಮಳೆ ಬರುತ್ತಿರುವುದರಿಂದ ಜಂಬೂಸವಾರಿ ಹೊರಡುವ ವೇಳೆ ಮಳೆ ಬಂದರೆ ಅಚ್ಚರಿ ಪಡಬೇಕಾಗಿಲ್ಲ. ಮಳೆ ಬರಬಹುದು ಜತೆಗೆ ಬಿಸಿಲಿದ್ದರೂ ಅದರಿಂದ ತಪ್ಪಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ತಮ್ಮೊಂದಿಗೆ ಛತ್ರಿಯನ್ನು ಕೊಂಡೊಯ್ಯುತ್ತಿದ್ದಾರೆ.
ಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮ
ಬಿಗಿ ಪೊಲೀಸ್ ಬಂದೋಬಸ್ತ್
ಇನ್ನು ಜಂಬೂಸವಾರಿ ಸಾಗುವ ಹಾದಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಸುಮಾರು 10 ಸಾವಿರ ಸಿಬ್ಬಂದಿಯನ್ನು ನಗರದೆಲ್ಲೆಡೆ ಭದ್ರತೆಗೆ ನಿಯೋಜಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಿಂದ, ಕೇಂದ್ರದಿಂದ ಪೊಲೀಸರನ್ನು ಕರೆಯಿಸಿಕೊಳ್ಳಲಾಗಿದೆ.
ಭದ್ರತೆಯಲ್ಲಿ 14 ಮಂದಿ ಎಸ್ಪಿಗಳು, 54 ಡಿವೈಎಸ್ಪಿ, 153 ಇನ್ಸ್ ಪೆಕ್ಟರ್, 336 ಸಬ್ಇನ್ಸ್ ಪೆಕ್ಟರ್ ಇವರ ಜತೆಗೆ ಒಂದು ಇಮಿಡಿ ಯೇಟ್ ಬ್ಯಾಕ್ ಆಫ್ ಸಪೋರ್ಟ್ ಕಮಾಂಡೋ ಪಡೆ, 2 ತುಕಡಿ ಸಿಟಿ ಕಮಾಂಡೋ, 3 ರಾಜ್ಯ ವಿಪತ್ತು ನಿವಾರಣಾ ಪಡೆ, 30 ಮೌಂಟೆಡ್ ತುಕಡಿ, 30 ಆಂಟಿ ಸಬೊಟೇಜ್ ಚೆಕ್ ಟೀಂ, 30 ಶ್ವಾನ ದಳ, 3 ಬಾಂಬ್ ಪತ್ತೆ ಮತ್ತು ನಿಗ್ರಹ ತಂಡ, 34 ಕೆಎಸ್ ಆರ್ ಪಿ ತುಕಡಿ, 20 ಸಿಎಆರ್ ಮತ್ತು ಡಿಎಆರ್ ತುಕಡಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದಲ್ಲದೆ, ಮೊಬೈಲ್ ಕಮಾಂಡ್ ಸೆಂಟರ್, ಪೊಲೀಸ್ ಅಧಿಕಾರಿಗಳಿಗೆ ಬಾಡಿ ವೋರ್ನ್ ಕ್ಯಾಮರಾ, ರಾಜ ಮಾರ್ಗದ ಸಿಸಿ ಕ್ಯಾಮರಾಗಳ ಮೂಲಕ ದೃಶ್ಯಾವಳಿ ಮೇಲೆ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ.
ನಂದಿಪೂಜೆಯೊಂದಿಗೆ ಮೆರವಣಿಗೆ ಆರಂಭ
ಮಧ್ಯಾಹ್ನ 2.15 ರಿಂದ 2.58 ರವರೆಗೆ ಅರಮನೆ ಬಲರಾಮ ದ್ವಾರದಲ್ಲಿ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜ ಪೂಜೆಯನ್ನು ನೆರವೇರಿಸಲಾಗುತ್ತದೆ. ಬಳಿಕ ಕಲಾತಂಡಗಳು, ಸ್ತಬ್ದ ಚಿತ್ರಗಳ ಮೆರವಣಿಗೆ ಹೊರಡಲಿದೆ. ಸಂಜೆ 4.31 ರಿಂದ 4.57 ರವರೆಗೆ ಸಲ್ಲುವ ಶುಭ ಕುಂಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅರಮನೆಯ ಒಳಾವರಣದಲ್ಲಿ ಶುಭ ಕುಂಭ ಲಗ್ನದಲ್ಲಿ ಅರ್ಜುನನ ಮೇಲೆ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಜೃಂಭಣೆಯ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಎಸ್.ಎ. ರಾಮದಾಸ್ ಅವರು ವಹಿಸಲಿದ್ದಾರೆ. ಮೈಸೂರು ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ, ಮೈಸೂರು ಮಹಾನಗರಪಾಲಿಕೆಯ ಮಹಾಪೌರರಾದ ಪುಷ್ಪಲತಾ ಜಗನ್ನಾಥ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಪಂಜಿನ ಕವಾಯತಿನೊಂದಿಗೆ ದಸರಾಕ್ಕೆ ತೆರೆ
ಜಂಬೂಸವಾರಿ ಬನ್ನಿಮಂಟಪ ತಲುಪಿದ ಬಳಿಕ ಅಲ್ಲಿ ಸಂಜೆ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು (ಟಾರ್ಚ್ ಲೈಟ್ ಪೆರೇಡ್) ನಡೆಯಲಿದ್ದು, ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಶಾಸಕರಾದ ತನ್ವೀರ್ ಸೇಠ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ, ಕೇಂದ್ರ ಸಂಸದೀಯ ವ್ಯವಹಾರಗಳು ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ, ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವರಾದ ಗೋವಿಂದ ಎಂ. ಕಾರಜೋಳ, ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ್ ಸಂಗಪ್ಪ ಸವದಿ, ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸಿ.ಟಿ. ರವಿ, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಪುಷ್ಟಲತಾ ಜಗನ್ನಾಥ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಿ.ಸಿ. ಪರಿಮಳ ಶ್ಯಾಂ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಹಾಗೂ ನಗರ ಪೊಲೀಸ್ ಕಮೀಷ್ನರ್ ಕೆ.ಟಿ.ಬಾಲಕೃಷ್ಣ ಉಪಸ್ಥಿತರಿರುವರು. ಪಂಜಿನ ಕವಾಯತುನೊಂದಿಗೆ ಈ ಬಾರಿಯ ನಾಡ ಹಬ್ಬ ದಸರಾಕ್ಕೆ ತೆರೆ ಬೀಳಲಿದೆ.