ಮೈಸೂರು ಮೇಯರ್ ಚುನಾವಣೆ: ಜೆಡಿಎಸ್ ನೊಂದಿಗೆ ಬಿಜೆಪಿ ಮೈತ್ರಿ?
ಮೈಸೂರು, ಫೆಬ್ರವರಿ 13: ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದೆ. ಮೈತ್ರಿ ಕುರಿತು ಇನ್ನೂ ಜೆಡಿಎಸ್ ನೊಂದಿಗೆ ಮಾತುಕತೆ ನಡೆಸಿಲ್ಲ. ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ ನಂತರ ಮಾತುಕತೆ ನಡೆಸಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮೈತ್ರಿ ಕುರಿತು ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಈ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ತರಲಾಗುವುದು. ಅವರ ಮಾರ್ಗದರ್ಶನದಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಬಾರಿ ಬಿಜೆಪಿ ಮೇಯರ್ ಸ್ಥಾನ ಪಡೆಯುವ ವಿಶ್ವಾಸವಿದ್ದು, ಎಲ್ಲರೂ ಬಿಜೆಪಿ ಸದಸ್ಯರು ಮೇಯರ್ ಆಗಬೇಕೆಂದು ಬಯಸುತ್ತಿದ್ದಾರೆ. ಮುಂದೆ ಏನಾಗುತ್ತೋ ಕಾದು ನೋಡೋಣ ಎಂದರು.
ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್; ಎಚ್. ವಿಶ್ವನಾಥ್
ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರೂ ಆದ ಎಸ್.ಟಿ.ಸೋಮಶೇಖರ್ ಸುದ್ದಿಗೋಷ್ಠಿ ನಡೆಸಿದ್ದು, ದೇಶಾದ್ಯಂತ ಒಟ್ಟು 720 ಕಡೆಗಳಲ್ಲಿ ಏಕ ಕಾಲದಲ್ಲಿ ಸುದ್ದಿಗೋಷ್ಠಿ ನಡೆದಿದೆ. ಕೇಂದ್ರ ಬಜೆಟ್ 2021ರ ಕುರಿತು ಬೆಳಕು ಚೆಲ್ಲುವ ಸಲುವಾಗಿ ಸುದ್ದಿಗೋಷ್ಠಿ ನಡೆಸಲಾಯಿತು.
ಬಜೆಟ್ 2021ರ ಮುಖ್ಯಾಂಶಗಳು
ಬಜೆಟ್ 2021ರ ಮುಖ್ಯಾಂಶಗಳು ಹಾಗೂ ಬಜೆಟ್ ಆದ್ಯತೆ ಕುರಿತು ಮಾಹಿತಿ ನೀಡುವುದಾಗಿದ್ದು, ಸಹಕಾರ ಇಲಾಖೆಗೆ ಸಿಕ್ಕಿರುವ ಅನುದಾನದ ಮಾಹಿತಿ ನೀಡಿದರು. ಅದೇ ರೀತಿ ಬಜೆಟ್ನಲ್ಲಿ ರಾಜ್ಯಕ್ಕೆ ಸಿಕ್ಕಿರುವ ಅನುದಾನ ಯೋಜನೆಗಳ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು. ಇದೇ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಕೊರೊನಾದಿಂದ ರಾಜ್ಯ ಸರ್ಕಾರಕ್ಕೆ ವರಮಾನ ಕಮ್ಮಿಯಾಗಿದೆ. ಹಾಗಾಗಿ ಪೆಟ್ರೋಲ್ ಮೇಲಿನ ಸೆಸ್ ಹೆಚ್ಚಿಸಲಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಗಳ ದರ ಏರಿಳಿತ ಸರ್ವೇ ಸಾಮಾನ್ಯ. ಪೆಟ್ರೋಲ್ ದರ ಹೆಚ್ಚಳದಿಂದ ಅಗತ್ಯ ವಸ್ತುಗಳ ದರ ಏರಿಕೆಯೂ ಸಹಜವಾಗಿದೆ. ನಿಮ್ಮ ಸಲಹೆಯನ್ನು ಸ್ವಾಗತಿಸುತ್ತೇನೆ, ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಬೆಂಗಳೂರು ಮೆಟ್ರೋ ಕಾಮಗಾರಿಗೆ 14,788 ಕೋಟಿ
2021 ರ ಕೇಂದ್ರ ಬಜೆಟ್ ಇದೊಂದು ಐತಿಹಾಸಿಕ ಬಜೆಟ್ ಆಗಿದ್ದು, ರೈತರ ಕಲ್ಯಾಣಕ್ಕೆ ಬದ್ಧವಾಗಿದೆ. ಕೃಷಿ ಉತ್ಪಾದನೆ ಪ್ರಮಾಣ ಹೆಚ್ಚಳ, ಮೂಲಭೂತ ಸೌಕರ್ಯ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡಿಸಿದ್ದು, ಬಜೆಟ್ ನಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಬೇಕಾದ ಅಂಶಗಳಿವೆ. ಈ ಬಜೆಟ್ ಅನ್ನು ರಾಜ್ಯ ಸರ್ಕಾರ ಸ್ವಾಗತಿಸುತ್ತದೆ ಎಂದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 10,904 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2ನೇ ಹಂತದ ಬೆಂಗಳೂರು ಮೆಟ್ರೋ ಕಾಮಗಾರಿಗೆ 14,788 ಕೋಟಿ ರುಪಾಯಿ ನೀಡಲಾಗಿದೆ. ಕರ್ನಾಟಕ ರೈಲ್ವೆ ಯೋಜನೆಗಳಿಗೆ 4,870 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಬೆಂಗಳೂರು ಉಪನಗರ ಯೋಜನೆಗೆ 23,093 ಕೋಟಿ ರೂ. ಅನುದಾನ ನೀಡಿದೆ ಎಂದು ರಾಜ್ಯಕ್ಕೆ ಸಿಕ್ಕಿರುವ ಕೊಡುಗಡಗಳ ಮಾಹಿತಿ ನೀಡಿದರು.
16.5 ಲಕ್ಷ ಕೋಟಿ ರೂ. ಕೃಷಿ ಸಾಲ ವಿತರಣೆಯ ಗುರಿ
ಎಪಿಎಂಸಿ ಬಲವರ್ಧನೆಗೆ ಸಂಕಲ್ಪ ಮಾಡಿದ್ದು, ಕೃಷಿ ಮೂಲ ಸೌಕರ್ಯ ನಿಧಿ ಬಳಕೆಗೆ ಅನುಮತಿ ನೀಡಲಾಗಿದೆ. ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಹೆಚ್ಚಿನ ಸೌಲಭ್ಯ ಒದಗಿಸಿದೆ. 16.5 ಲಕ್ಷ ಕೋಟಿ ರೂ. ಕೃಷಿ ಸಾಲ ವಿತರಣೆಯ ಗುರಿ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು. ನರೇಗಾ ಯೋಜನೆಗೆ 73,000 ಕೋಟಿ ರೂ. ಅನುದಾನ ನೀಡಲಾಗಿದ್ದು, ಅಷ್ಟೇ ಅಲ್ಲದೆ ಆರೋಗ್ಯ ಕ್ಷೇತ್ರ, ಆತ್ಮನಿರ್ಭರ ಯೋಜನೆ, ಸಂಪನ್ಮೂಲ ಸಂಗ್ರಣೆಗೆ ಒತ್ತು ನೀಡಲಾಗಿದೆ ಎಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ರಾಜಕೀಯ ಅಸ್ತಿತ್ವಕ್ಕಾಗಿ ಅಹಿಂದ ಮುನ್ನೆಲೆಗೆ
ಇನ್ನು ಇದೇ ವೇಳೆ ರಾಜ್ಯದಲ್ಲಿ ಅಹಿಂದ ಹೋರಾಟ ಚರ್ಚೆ ವಿಚಾರವಾಗಿ ಮಾತನಾಡಿದ ಸಚಿವ ಎಸ್.ಟಿ.ಎಸ್, ಸದ್ಯಕ್ಕೆ ಇದು ಅಪ್ರಸ್ತುತ, ಚುನಾವಣೆ ಕೂಡಾ ಇನ್ನೂ ತುಂಬಾ ದೂರ ಇದೆ. ಅಹಿಂದ ಕೂಗು ಎತ್ತುತ್ತಿರುವವರು ರಾಜಕೀಯವಾಗಿ ಮೂಲೆ ಗುಂಪಾಗಿದ್ದಾರೆ. ರಾಜಕೀಯಕ್ಕಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಹಿಂದ ಕೂಗು ಎತ್ತಿದ್ದಾರೆ. ಆ ಮೂಲಕವಾಗಿ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪಗೆ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಜೊತೆಗೆ ನನ್ನ ವಿಶ್ವಾಸ ಈಗಲೂ ಹಾಗೆ ಉಳಿದುಕೊಂಡಿದ್ದು, ಪರಸ್ಪರ ವೈಯಕ್ತಿಕವಾಗಿ ವಿಶ್ವಾಸದಿಂದಿದ್ದೇವೆ ಹೊರತು ರಾಜಕೀಯವಾಗಲ್ಲ. ನಾನು 5 ವರ್ಷ ಅವರ ಜೊತೆ ಕೆಲಸ ಮಾಡಿದ್ದೇನೆ. ಈಗ ಬಿಜೆಪಿಯಲ್ಲಿ ಇದ್ದೇನೆ, ಇಲ್ಲೂ ವಿಶ್ವಾಸದಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದರು.