ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ಸ್ಯಾನಿಟೈಸರ್ ಸಿಂಪಡಣೆ
ಮೈಸೂರು, ಮಾರ್ಚ್ 20: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸರ್ ವಿತರಣೆ ಮಾಡಲಾಗುತ್ತಿದೆ. ದರ್ಶನಕ್ಕೆ ಬರುವ ಭಕ್ತರಿಗೆ ದ್ವಾರದ ಬಳಿಯಲ್ಲೇ ಸ್ಯಾನಿಟೈಸರ್ ಸಿಂಪಡಣೆ ಮಾಡಿ ಒಳಗೆ ಬಿಡಲಾಗುತ್ತಿದೆ.
ಈಗಾಗಲೇ ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ತುಂಬಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ಆದರೂ ಜನರು ಭಯದ ವಾತಾವರಣದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇನ್ನು ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಚಾಮುಂಡಿದೇವಿ ದರ್ಶನಕ್ಕೆಂದು ದೂರದಿಂದ ಬರುತ್ತಿದ್ದು, ಇಂದು ಅದೆಲ್ಲದಕ್ಕೂ ಬ್ರೇಕ್ ಬಿದ್ದಿದೆ.
ಕೊರೊನಾ ಎಫೆಕ್ಟ್: ಉಡುಪಿಯ ಕೃಷ್ಣಮಠ, ಮಸೀದಿಗಳಲ್ಲೂ ನಿರ್ಬಂಧ
ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಐಪಿ ಹಾಗೂ ವಿಶೇಷ ದರ್ಶನವನ್ನು ರದ್ದು ಮಾಡಲಾಗಿದ್ದು, ದೇಗುಲ ಸಿಬ್ಬಂದಿ ಒಂದು ಬಾರಿ ಹತ್ತು ಮಂದಿಯನ್ನು ಮಾತ್ರ ದರ್ಶನಕ್ಕೆ ಬಿಡುತ್ತಿದ್ದಾರೆ.
ಪ್ರತಿ ಶುಕ್ರವಾರ ಚಾಮುಂಡೇಶ್ವರಿ ಬೆಟ್ಟದಲ್ಲಿ ಜನ ಸಾಗರವೇ ತುಂಬಿರುತ್ತಿತ್ತು. ಆದರೆ ಈ ಶುಕ್ರವಾರ ವಿಐಪಿ ಹಾಗೂ ವಿಶೇಷ ದರ್ಶನ ರದ್ದು ಮಾಡಿರುವುದರಿಂದ ಹಾಗೂ ಕೊರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಿರುವ ಭಯದಿಂದ ಭಕ್ತರಿಗೆಲ್ಲಾ ತಮ್ಮ ತಮ್ಮ ಮನೆಗಳಲ್ಲೇ ಪೂಜೆ ಮಾಡಿಕೊಂಡಿದ್ದು, ಬೆಟ್ಟಕ್ಕೆ ಬಾರದೇ ಇರುವುದು ಕಂಡುಬಂತು.
ಇನ್ನು ಚಾಮುಂಡೇಶ್ವರಿ ಬೆಟ್ಟಕ್ಕೆ ಕಳೆದ ಎರಡು ವಾರಗಳಿಂದ ಕೊರೊನಾ ಸೋಂಕು ಹರಡುವಿಕೆ ಅರಿತ ನಂತರ ಭಕ್ತರ ಸಂಖ್ಯೆ ತುಂಬಾ ಇಳಿಮುಖವಾಗಿದ್ದು, ದೂರದಿಂದ ಬರುತ್ತಿದ್ದ ಭಕ್ತರು ದೂರವೇ ಉಳಿದಿದ್ದಾರೆ. ಹೆಚ್ಚು ಜನರು ಸೇರುವ ಪ್ರದೇಶಗಲಲ್ಲಿ ಸೋಂಕು ಹರಡುವುದು ಹೆಚ್ಚಿರುವ ಹಿನ್ನಲೆ ದೇವಸ್ಥಾನಗಳಲ್ಲಿ ಎಲ್ಲರೂ ಒಂದು ಕಡೆ ನಿಂತು ದರ್ಶನ ಪಡೆಯುವುದರಿಂದ ಜನರು ಆತಂಕಕ್ಕೆ ಒಳಗಾಗಿ ದೇವಿಯ ದರ್ಶನಕ್ಕೆ ತಾತ್ಕಾಲಿಕವಾಗಿ ವಿರಾಮ ಕೊಟ್ಟುಕೊಂಡಿದ್ದಾರೆ.
ಚಾಮುಂಡೆಶ್ವರಿ ಬೆಟ್ಟದಲ್ಲಿ ಸಾವಿರಾರು ಭಕ್ತರ ಆಗಮನದಿಂದ ಏನೇ ಅಂಗಡಿಗಳು ತೆರೆದರೂ ಸಂಪೂರ್ಣ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ ಕಳೆದ ಒಂದು ವಾರದಿಂದ ವ್ಯಾಪಾರ ವಹಿವಾಟು ಸಂಪೂರ್ಣ ನೆಲ ಕಚ್ಚಿದೆ.
ಎಲ್ಲೆಡೆ ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹೆಚ್ಚಾಗಿದ್ದು, ಈ ನಡುವೆ ನಟ ನೆನಪಿರಲಿ ಪ್ರೇಮ್ ಕೊರೊನಾ ನಿಗ್ರಹಕ್ಕೆ ಶುಕ್ರವಾರ ಕುಟುಂಬ ಸಮೇತರಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.