ನಂಜನಗೂಡು ವಿಷಕಂಠನಿಗೂ ತಟ್ಟಿತು ಕೊರೊನಾ ಬಿಸಿ
ಮೈಸೂರು, ಮಾರ್ಚ್ 20: ದೇಶ ಮತ್ತು ರಾಜ್ಯದ ಎಲ್ಲೆಡೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ವಿವಿಧ ಹಂತದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಅದರಂತೆ ಭಾರತೀಯ ಪುರಾತತ್ವ ಇಲಾಖೆ ಸರ್ವೇಕ್ಷಣಾ ಬೆಂಗಳೂರು ವಲಯ ದಕ್ಷಿಣ ಕಾಶಿ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಪ್ರವೇಶಕ್ಕೆ ಮಾ.31ರವರೆಗೆ ಪ್ರವೇಶ ನಿರ್ಬಂಧಿಸಿ ಆದೇಶ ನೀಡಿದೆ.
ಕೊರೊನಾದಿಂದಾಗಿ ಭಕ್ತರಿಲ್ಲದೆ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇಗುಲವೂ ಬಿಕೋ ಎನ್ನುತ್ತಿದೆ. ಸಾಮಾನ್ಯವಾಗಿ ಎಲ್ಲ ದಿನಗಳಲ್ಲಿಯೂ ಭಕ್ತರು ಸೇರಿದಂತೆ ಪ್ರವಾಸಿಗರು ಇತ್ತ ಆಗಮಿಸಿ ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ತೆರಳುತ್ತಿದ್ದರು. ಹೀಗಾಗಿ ಜನ ಜಂಗುಳಿಯಿಂದ ಕೂಡಿರುತ್ತಿತ್ತು. ಆದರೆ ಕೊರೊನಾ ವೈರಸ್ನ ಭೀತಿ ಆವರಿಸಿರುವುದರಿಂದ ದೇವಾಲಯ ಮಾತ್ರವಲ್ಲದೆ, ಪಟ್ಟಣದಲ್ಲಿಯೂ ಜನ ಹೆಚ್ಚಾಗಿ ಕಂಡು ಬರುತ್ತಿಲ್ಲ.
ಸ್ಥಗಿತಗೊಂಡ ವ್ಯಾಪಾರ ವಹಿವಾಟು
ದೇವಾಲಯದ ವ್ಯಾಪ್ತಿಯಲ್ಲಿ ವಿವಿಧ ಅಂಗಡಿ ಮುಂಗಟ್ಟುಗಳನ್ನಿಟ್ಟುಕೊಂಡು, ಹೂ ಹಣ್ಣು ಮಾರುತ್ತಾ ಬದುಕು ಕಟ್ಟಿಕೊಂಡವರ ಬದುಕು ಅಯೋಮಯವಾಗಿದೆ. ಜತೆಗೆ ಇಲ್ಲಿಗೆ ಪ್ರವಾಸಿಗರು ಬರುತ್ತಿದ್ದರಿಂದ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು. ಆದರೆ ಈಗ ಹೊರಗಿನ ಪ್ರವಾಸಿಗರು ಹಾಗೂ ಭಕ್ತರನ್ನು ನಂಬಿ ಬದುಕು ಕಟ್ಟಿಕೊಂಡಿದ್ದ ವರ್ತಕರು ವ್ಯಾಪಾರವಿಲ್ಲದೆ ಪರದಾಡುವಂತಾಗಿದೆ.
ಮೈಸೂರು ಇನ್ಫೋಸಿಸ್ ನಿಂದ 4 ಸಾವಿರ ಟೆಕ್ಕಿಗಳು ತವರಿಗೆ ವಾಪಸ್
ಬಹುಶಃ ಇಂತಹದೊಂದು ಪರಿಸ್ಥಿತಿ ಇಲ್ಲಿ ನಿರ್ಮಾಣವಾಗುತ್ತದೆ ಎಂದು ಯಾರೂ ನಂಬಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಕೊರೊನಾ ವೈರಸ್ ಎಲ್ಲವೂ ತಲೆಕೆಳಗಾಗುವಂತೆ ಮಾಡಿದೆ. ದೇಗುಲಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧ ಮಾಡಿದ್ದರೂ ಶ್ರೀಕಂಠೇಶ್ವರ ಸೇರಿದಂತೆ ಇತರೆ ದೇವರುಗಳಿಗೆ ನಿತ್ಯ ನಡೆಯುತ್ತಿದ್ದ ಸೇವೆ, ಪೂಜಾ ಕೈಂಕರ್ಯಗಳನ್ನು ಅರ್ಚಕರು ನೆರವೇರಿಸುತ್ತಿದ್ದಾರೆ.
ಪಂಚ ಮಹಾರಥೋತ್ಸವಕ್ಕೂ ವಿಘ್ನ?
ಕೊರೊನಾ ವೈರಸ್ನ ಹಿನ್ನೆಲೆಯಲ್ಲಿ ಈ ಬಾರಿ ನಡೆಯಬೇಕಿದ್ದ ಶ್ರೀಕಂಠೇಶ್ವರಸ್ವಾಮಿಯ ಪ್ರಸಿಧ್ಧ ಪಂಚ ಮಹಾ ರಥೋತ್ಸಕ್ಕೂ ವಿಘ್ನ ಉಂಟಾಗುವ ಸಾಧ್ಯತೆಯಿದ್ದು, ಏ.4 ರಂದು ನಡೆಯಲಿರುವ ರಥೋತ್ಸವ ರದ್ದಾದರೂ ಅಚ್ಚರಿಪಡಬೇಕಾಗಿಲ್ಲ. ರಥೋತ್ಸವಕ್ಕೆ ಎರಡು ವಾರಗಳಷ್ಟೆ ಬಾಕಿ ಉಳಿದಿದ್ದು, ಇಷ್ಟರಲ್ಲಿಯೇ ರಥೋತ್ಸವಕ್ಕೆ ಸಂಬಂಧಿಸಿದಂತೆ ಸಿದ್ಧತಾ ಕಾರ್ಯಗಳನ್ನು ಆರಂಭಿಸಬೇಕಾಗಿತ್ತು. ಆದರೆ ಯಾವುದೇ ಕಾರ್ಯಗಳನ್ನು ಆರಂಭಿಸಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಇನ್ನಷ್ಟೆ ನಿರ್ಧಾರವನ್ನು ಪ್ರಕಟಿಸಬೇಕಾಗಿದೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಈ ಬಾರಿ ಪಂಚ ರಥೋತ್ಸವ ನಡೆಯುವುದು ಸಂಶಯವಾಗಿದೆ.
ಕೊರೊನಾ ಜೊತೆ ಹಕ್ಕಿಜ್ವರದ ಭೀತಿ
ಇದೀಗ ಮಾರ್ಚ್ 31ರವರೆಗೂ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಈ ಕುರಿತ ಸೂಚನೆಗಳನ್ನೊಳಗೊಂಡ ಪತ್ರವನ್ನು ದೇವಾಲಯದ ಮುಂಭಾಗ ಅಂಟಿಸಲಾಗಿದೆ. ಜನ ಇದನ್ನು ಓದಿಕೊಂಡು ದೇವಾಲಯದ ಆವರಣದಿಂದಲೇ ದೇವರಿಗೆ ಕೈ ಮುಗಿದುಕೊಂಡು ಹಿಂತಿರುಗುತ್ತಿದ್ದಾರೆ. ಪ್ರತಿ ವರ್ಷವೂ ಪಟ್ಟಣದ ವ್ಯಾಪಾರಿಗಳು ಸೇರಿದಂತೆ ಭಕ್ತರು ರಥೋತ್ಸವಕ್ಕಾಗಿ ಕಾಯುತ್ತಿದ್ದರು. ಅಲ್ಲದೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ವೈರಸ್ ಭೀತಿ ಜತೆಗೆ ಮೈಸೂರಿನಲ್ಲಿ ಹರಡಿರುವ ಹಕ್ಕಿಜ್ವರ ಎಲ್ಲವೂ ಜನರಲ್ಲಿ ಭೀತಿಯನ್ನುಂಟು ಮಾಡಿರುವುದರಿಂದ ರಥೋತ್ಸವ ನಡೆಯುವುದು ಕಷ್ಟಸಾಧ್ಯವಾಗಿದೆ.
ವಿದೇಶದಿಂದ ಬಂದವರ ಪತ್ತೆಗೆ ಬಳ್ಳಾರಿಯ ಪ್ರತಿ ತಾಲೂಕಿಗೆ ರಾಪಿಡ್ ರೆಸ್ಪಾನ್ಸ್ ತಂಡ
ಚನ್ನಕೇಶವಸ್ವಾಮಿ ರಥೋತ್ಸವವೂ ರದ್ದು
ಈಗಾಗಲೇ ಹಾಸನದ ಬೇಲೂರಿನ ಚನ್ನಕೇಶವಸ್ವಾಮಿ ದೇಗುಲದಲ್ಲಿ ನಡೆದುಕೊಂಡು ಬರುತ್ತಿದ್ದ ರಥೋತ್ಸವವನ್ನು 900 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ರದ್ದುಗೊಳಿಸಲಾಗಿದೆ. ಅದರಂತೆ ನಂಜನಗೂಡಿನ ಪಂಚರಥೋತ್ಸವವೂ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ. ಸಾಮಾನ್ಯವಾಗಿ ನಂಜನಗೂಡು ಪಂಚ ರಥೋತ್ಸವ ಎಂದರೆ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಕೊರೊನಾ ಭೀತಿಯಿರುವ ಈ ಸಮಯದಲ್ಲಿ ಜನ ಸೇರಿದರೆ ಸೋಂಕು ಹರಡುವ ಸಾಧ್ಯತೆಯಿದೆ. ಸದ್ಯ ಮಾರ್ಚ್ 31ರವರೆಗೆ ದೇವಾಲಯಕ್ಕೆ ಯಾರೂ ಪ್ರವೇಶ ಮಾಡುವಂತಿಲ್ಲ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.