"ಮೈಸೂರಿನಲ್ಲಿ ಹೆಚ್ಚುತ್ತಿವೆ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು''
ಮೈಸೂರು, ಜುಲೈ 1: ಮೈಸೂರಿನಲ್ಲಿಂದು ಅತಿ ಹೆಚ್ಚು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಬರಲಿದೆ. ಈವರೆಗೆ ಬಂದ ಸಂಖ್ಯೆಗಳಲ್ಲಿಯೇ ಅತಿ ಹೆಚ್ಚು ಇರಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದರು.
Recommended Video
ಮೈಸೂರಿನಲ್ಲಿ ಇಂದು ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ದಿನೇ ದಿನೇ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದೆ. ಇದಕ್ಕೆ ನಾವು ಸಕಲ ರೀತಿಯಲ್ಲೂ ಸಜ್ಜಾಗಿದ್ದೇವೆ. ನರ್ಸ್ ಹಾಗೂ ಡಿ.ಗ್ರೂಪ್ ನೌಕರರ ಕೊರತೆ ಇದೆ. ಕೋವಿಡ್ ಆಸ್ಪತ್ರೆಯಲ್ಲಿ ಡಾಕ್ಟರ್ಗಳೇ ಬೇರೆ ಬೇರೆ ಕೆಲಸ ಮಾಡುವ ಸ್ಥಿತಿ ಬಂದಿದೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳಿಗೆ ಮೈಸೂರು ಡಿಸಿಯಿಂದ ಖಡಕ್ ಎಚ್ಚರಿಕೆ
ನಾವು ಹೆಚ್ಚು ಹೆಚ್ಚು ಸ್ಯಾಂಪಲ್ ಸಂಗ್ರಹ ಮಾಡುತ್ತಿದ್ದು, ಟ್ರಾವೆಲ್ ಹಿಸ್ಟರಿ ಇಲ್ಲದ ಪ್ರಕರಣಗಳು ಹೆಚ್ಚಾಗಿವೆ. ILI ಹಾಗೂ SARI ಪ್ರಕರಣಗಳು ಜಾಸ್ತಿಯಾಗಿದ್ದು, ಈ ಬಗ್ಗೆ ಟ್ರಾವೆಲ್ ಹಿಸ್ಟರಿ ಕಂಡುಹಿಡಿಯುವ ಕೆಲಸ ಆಗುತ್ತಿದೆ ಎಂದು ಮಾಹಿತಿ ನೀಡಿದರು.
ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಸೋಂಕಿತರ ಪಕ್ಕದಲ್ಲೇ ಸಾಮಾನ್ಯ ರೋಗಿ ಇದ್ದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅಭಿರಾಂ ಜಿ ಶಂಕರ್, ಇದು ನನ್ನ ಗಮನಕ್ಕೆ ಬಂದಿದೆ. ಇದು ಕೇವಲ ಕೆ.ಆರ್ ಆಸ್ಪತ್ರೆ ಅಲ್ಲ ಎಲ್ಲ ಕಡೆ ಇದೆ. ಈ ಸಮಸ್ಯೆ ಗಂಭೀರ ಸಮಸ್ಯೆ ಅಲ್ಲ. ಆಸ್ಪತ್ರೆಗೆ ದಾಖಲಾಗುವ ಎಲ್ಲರನ್ನೂ ಪರೀಕ್ಷೆ ಮಾಡುತ್ತೇವೆ ಎಂದರು.
ಪರೀಕ್ಷೆ ಸಮಯದಲ್ಲಿ ಸೋಂಕಿತರು ಅಂತ ಗೊತ್ತಾದ ತಕ್ಷಣ ಅವರನ್ನು ಶಿಫ್ಟ್ ಮಾಡ್ತೀವಿ. ಆ ಸೋಂಕಿತರನ್ನು ಶಿಫ್ಟ್ ಮಾಡುವ ಸಂದರ್ಭದಲ್ಲಿ ಸಾಮಾನ್ಯ ರೋಗಿಗಳು ಇದ್ದಿರಬಹುದು. ಇದನ್ನು ತಾಂತ್ರಿಕವಾಗಿ ನಿಯಂತ್ರಣ ಮಾಡೋದು ಕಷ್ಟ ಎಂದು ಸ್ಪಷ್ಟನೆ ನೀಡಿದರು.
ILI ಹಾಗೂ SARI ಕೇಸ್ ಗೊತ್ತಾಗುವುದೇ ಕೆ.ಆರ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ. ಬಂದ ರೋಗಿಗಳನ್ನು ತಕ್ಷಣ ಸೋಂಕಿತರು ಎಂದು ಗುರುತಿಸುವುದಕ್ಕೆ ಆಗಲ್ಲ. ಟೆಸ್ಟ್ ಮಾಡಿ ರಿಸಲ್ಟ್ ಬಂದ ಮೇಲೆ ಅವರನ್ನು ಶಿಫ್ಟ್ ಮಾಡುತ್ತೇವೆ. ಹಾಗಂತ ಸಾಮಾನ್ಯ ರೋಗಿನ ಅವರಿಂದ ತಕ್ಷಣ ಬೇರೆ ಮಾಡೋಕೆ ಆಗಲ್ಲ. ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಆಗೋವರೆಗೂ ಕಾಯಬೇಕಾಗುತ್ತದೆ. ಇನ್ಮುಂದೆ ಆ ಕೆಲಸ ಬೇಗ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡುತ್ತೇನೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.