ಮೈಸೂರಿನಲ್ಲಿ ಸೋಂಕು ಸಾಮುದಾಯಿಕವಾಗಿ ಹರಡಬಹುದು; ಜಿಲ್ಲಾಧಿಕಾರಿ ಕಳವಳ
ಮೈಸೂರು, ಜೂನ್ 25: ಕೊರೊನಾ ವೈರಸ್ ಈ ಬಾರಿ ಸಾಮುದಾಯಿಕವಾಗಿ ಹರಡುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಸಾಮುದಾಯಿಕವಾಗಿ ಹರಡುವ ಕುರಿತು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಕೆಲವರು ಸಾಮುದಾಯಿಕವಾಗಿ ಹಬ್ಬಿಲ್ಲ ಎನ್ನುತ್ತಿದ್ದಾರೆ. ಕೆಲವರು ಹಾಗೆ ಹಬ್ಬಿದೆ ಎನ್ನುತ್ತಿದ್ದಾರೆ. ಈ ಕುರಿತು ಯಾವುದೇ ಖಚಿತತೆ ಸಿಗುತ್ತಿಲ್ಲ. ಆದರೆ, ಮೈಸೂರಿನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಸಾಮುದಾಯಿಕವಾಗಿ ಹರಡುವ ಸಾಧ್ಯತೆ ಹೆಚ್ಚಾಗಿದೆ" ಎಂದು ಹೇಳಿದರು.
ಕ್ವಾರಂಟೈನ್ ಪೋಸ್ಟರ್ ಕಿತ್ತರೆ ಕ್ರಿಮಿನಲ್ ಕೇಸ್: ಮೈಸೂರು ಡಿಸಿ
"ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ಈ ಕುರಿತು ವಿಡಿಯೋ ಕಾನ್ಫರೆನ್ಸ್ ಇದೆ. ಆ ನಂತರ ಈ ಬಗ್ಗೆ ಇನ್ನಷ್ಟು ಮಾಹಿತಿ ಸಿಗಲಿದೆ" ಎಂದು ತಿಳಿಸಿದರು.
ಈ ನಡುವೆ ಮೈಸೂರಿನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಗ್ರಾಮಾಂತರ ಪ್ರದೇಶದಲ್ಲೂ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ. ತಿ.ನರಸೀಪುರ ತಾಲ್ಲೂಕಿನಲ್ಲಿ ಇಂದು 3 ಪ್ರಕರಣಗಳು ಪತ್ತೆಯಾಗಿವೆ.