ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದಾರೆ ಕೊರೊನಾ ವೈರಸ್ ಸೋಂಕಿತರು
ಮೈಸೂರು, ಜುಲೈ 7: ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸೋಂಕಿನಿಂದ ಮತ್ತೆ ಮೂವರು ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 8 ಕ್ಕೆ ಏರಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಸೋಮವಾರ ಮತ್ತೆ 45 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪ್ರಕರಣಗಳ ಸಂಖ್ಯೆ 481 ಕ್ಕೆ ಏರಿದೆ. 16 ಮಂದಿ ಚೇತರಿಸಿಕೊಂಡಿದ್ದು, ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 268 ಮಂದಿ ಗುಣಮುಖರಾಗಿದ್ದು, 205 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಿಂದ ಮೈಸೂರಿಗೆ ಬರುವವರಿಗೆ ಇನ್ಮುಂದೆ ನಿರ್ಬಂಧ?
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಮೂವರು ಭಾನುವಾರ ಮೃತಪಟ್ಟಿದ್ದಾರೆಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಚಾಮರಾಜನಗರ ಜಿಲ್ಲೆಯ 50 ವರ್ಷದ ವ್ಯಕ್ತಿ, ಜುಲೈ 2 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಗ್ರಹಾರದ 46 ವರ್ಷದ ಪುರುಷ ಜುಲೈ 2 ರಂದು ಹಾಗೂ ಕಲ್ಯಾಣಗಿರಿಯ 75 ವರ್ಷದ ವೃದ್ಧ ಜುಲೈ 3 ರಂದು ಕೆ.ಆರ್ ಆಸ್ಪತ್ರೆಗೆ ದಾಖಲಾಗಿದ್ದರು.
25 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ
ಪ್ರಾಥಮಿಕ ಸಂಪರ್ಕಿತರು 18 ಮಂದಿ, ಶೀತ, ಜ್ವರ ಮಾದರಿಯ ಅನಾರೋಗ್ಯ ಲಕ್ಷಣದಿಂದ (ಐಎಲ್ಐ) ಬಳಲುತ್ತಿದ್ದ ಮೂವರು, ಅಂತಾರಾಜ್ಯದಿಂದ ಬಂದ ಓರ್ವರು, ಬೇರೆ ಜಿಲ್ಲೆಯಿಂದ ಬಂದ ಇಬ್ಬರು ಹಾಗೂ ಯಾವುದೇ ಲಕ್ಷಣವಿಲ್ಲದ 19 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೆ.ಆರ್ ಆಸ್ಪತ್ರೆಯ ವೈದ್ಯರೋರ್ವರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆಯೂ ಏರಿಕೆಯಾಗಿದೆ. 25 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ತೀವ್ರ ಸಮಸ್ಯೆ ಎದುರಿಸುತ್ತಿರುವ ಸೋಂಕಿತರ ಚಿಕಿತ್ಸೆಗೆ ಆದ್ಯತೆ ನೀಡಿ ರೋಗ ಲಕ್ಷಣ ಇಲ್ಲದವರನ್ನು ಮನೆಯಲ್ಲೇ ಐಸೋಲೇಶನ್ ಮಾಡಲು ಚರ್ಚೆ ನಡೆಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು
ಮೈಸೂರು ಮಹಾನಗರ ಪಾಲಿಕೆ ಆವರಣಕ್ಕೂ ಕೊರೊನಾ ವೈರಸ್ ಕಾಲಿಟ್ಟಿದ್ದು, ಮಹಾನಗರ ಪಾಲಿಕೆ ಸಿಬ್ಬಂದಿಗೆ ಸೋಂಕು ತಗುಲಿದೆ. ಪಾಲಿಕೆಯ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಧೃಡಪಟ್ಟಿದೆ. ಹೀಗಾಗಿ ಮಹಾನಗರ ಪಾಲಿಕೆ ಆರೋಗ್ಯ ಇಲಾಖೆ ವಿಭಾಗವನ್ನು ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿಗಳಲ್ಲೂ ಕೊರೊನಾ ವೈರಸ್ ಸೋಂಕಿನ ಆತಂಕ ಹೆಚ್ಚಾಗಿದೆ. ಮಹಾನಗರ ಪಾಲಿಕೆ ಸಿಬ್ಬಂದಿಗಳ ನಿಕಟ ಸಂಪರ್ಕದಲ್ಲಿದ್ದವರಿಗೆ ಹೋಂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.
"ಮೈಸೂರಿನಲ್ಲಿ ಹೆಚ್ಚುತ್ತಿವೆ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು''
ಮೈಸೂರಲ್ಲಿ ಕೊರೊನಾ ವೈರಸ್ ಸೋಂಕಿತರು ಹೆಚ್ಚಾಗುತ್ತಿದ್ದಾರೆ
ಬೆಂಗಳೂರು ಕೊರೊನಾ ವೈರಸ್ ಪ್ರಕರಣಗಳು ಮೈಸೂರಿನ ಗ್ರಾಮಾಂತರ ಪ್ರದೇಶಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿದ್ದವರು ವಾಪಸ್ಸು ಊರುಗಳಿಗೆ ಬರುತ್ತಿರುವ ಹಿನ್ನೆಲೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ತಿ. ನರಸೀಪುರ ತಾಲ್ಲೂಕಿನಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರಿನಿಂದ ಆಗಮಿಸಿದ್ದ ತಂದೆ, ಮಕ್ಕಳಿಗೆ ಸೋಂಕು ತಗುಲಿದೆ. ತಲಕಾಡು ಗ್ರಾಮದ ಓರ್ವ ವ್ಯಕ್ತಿಗೂ ಕೊರೊನಾ ಪಾಸಿಟಿವ್ ದೃಢವಾಗಿದೆ.
ಸಾರ್ವಜನಿಕರಿಗೆ ಮಿನಿ ವಿಧಾನಸೌಧ ಪ್ರವೇಶ ನಿರ್ಬಂಧ
ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ಸಹೋದರ ಗ್ರಾಮ ಸೇವಕನಾಗಿ ತಾಲ್ಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸಿದ ಹಿನ್ನೆಲೆ ತಿ.ನರಸೀಪುರ ತಾಲ್ಲೂಕು ಕಚೇರಿ ಬಂದ್ ಮಾಡಲಾಗಿದೆ. ಮಿನಿ ವಿಧಾನಸೌಧದ ಎಲ್ಲಾ ಕೊಠಡಿಗಳನ್ನು ಮುಚ್ಚಲಾಗಿದೆ.
ಗ್ರಾಮ ಸೇವಕನನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದ್ದು, ಗಂಟಲು ದ್ರವ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಲಾಗಿದೆ. ಒಂದು ದಿನದ ಕಾಲ ಸಾರ್ವಜನಿಕರಿಗೆ ಮಿನಿ ವಿಧಾನಸೌಧ ಪ್ರವೇಶ ನಿರ್ಬಂಧಿಸಲಾಗಿದೆ. ಸ್ಯಾನಿಟೈಸ್ ಮಾಡಿದ ಬಳಿಕ ಸೀಲ್ ಡೌನ್ ಮಾಡುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿ.ನರಸೀಪುರ ತಾಲ್ಲೂಕು ತಹಶೀಲ್ದಾರ ನಾಗೇಶ್ ಮಾಹಿತಿ ನೀಡಿದರು.