ಹೋಮ್ ಕ್ವಾರಂಟೈನ್ ಗಳ ಓಡಾಟ: ಮೈಸೂರಿನಲ್ಲಿ ಆತಂಕ
ಮೈಸೂರು, ಏಪ್ರಿಲ್ 06: ಮೈಸೂರಿನ ಕೆಲವೆಡೆಗಳಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರುವ ಜ್ಯುಬಿಲಿಯಂಟ್ ಕಾರ್ಖಾನೆಯ ನೌಕರರೂ ಸೇರಿದಂತೆ ಹಲವರು ಮನೆಯಿಂದ ಹೊರಗಡೆ ಬಂದು ಓಡಾಡುತ್ತಿದ್ದು, ಸುತ್ತ ಮುತ್ತಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಮೈಸೂರಿನ ಅಗ್ರಹಾರ, ವಿಜಯನಗರ, ಗೋಕುಲಂ ಸೇರಿದಂತೆ ವಿವಿಧೆಡೆ ಇರುವ ಮನೆಗಳಲ್ಲಿ ಕ್ವಾರಂಟೈನ್ ನಲ್ಲಿರುವ ಕೊರೊನಾ ಸೋಂಕು ತಗುಲಿರಬಹುದಾದ ಶಂಕೆ ಇರುವವರು ಮನೆಯಿಂದ ಹೊರಬರುತ್ತಿದ್ದಾರೆ ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.
ದೂರು ಬಂದ ಸ್ಥಳಗಳಿಗೆ ನಿನ್ನೆ ಮುಂಜಾನೆಯೇ ತಕ್ಷಣ ಧಾವಿಸಿದ ಜಿಲ್ಲಾಡಳಿತದ ತಂಡ, ಸ್ವಗೃಹಗಳಲ್ಲಿ ಕ್ವಾರಂಟೈನ್ ಆಗಿದ್ದವರನ್ನು ಅಲ್ಲಿಂದ ವಾಹನಗಳಲ್ಲಿ ಕರೆದೊಯ್ದಿದ್ದು, ಜಿಲ್ಲಾಡಳಿತವೇ ವ್ಯವಸ್ಥೆ ಮಾಡಿಸಿದ್ದ ಕ್ವಾರಂಟೈನ್ ಲಾಡ್ಜ್ ಗಳಲ್ಲಿ ಇರಿಸಿದೆ. ಕ್ವಾರಂಟೈನ್ ನ ಉಳಿದ ಅವಧಿ ಪೂರ್ಣಗೊಳ್ಳುವವರೆಗೂ ಅವರನ್ನು ಲಾಡ್ಜ್ ನಲ್ಲಿಯೇ ಇರಿಸಲು ಕ್ರಮ ಕೈಗೊಂಡಿದೆ.
ಕೊರೊನಾ ಸೋಂಕು ಮೈಸೂರಿನಲ್ಲಿ ಕ್ಷಿಪ್ರವಾಗಿ ಹರಡುತ್ತಿರುವ ಕಾರಣ ಚಿಂತೆಗೀಡಾಗಿರುವ ಜಿಲ್ಲಾಡಳಿತ "ಲಾಕ್ ಡೌನ್' ಕ್ರಮವನ್ನು ಇನ್ನಷ್ಟು ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ನಿರ್ಧರಿಸಿದ್ದು, ಸಕಾರಣವಿಲ್ಲದೆ ರಸ್ತೆಗಿಳಿಯುವ ವಾಹನಗಳನ್ನು ಪೋಲೀಸರು ಮುಲಾಜಿಲ್ಲದೆ ಸೀಜ್ ಮಾಡುತ್ತಿದ್ದಾರೆ.
ನಗರದಲ್ಲಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿದೆ. ಇದರಿಂದ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವವರಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎಂಬುದು ಜಿಲ್ಲಾಡಳಿತದ ಚಿಂತನೆ. ಒಟ್ಟಿನಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆ ಪ್ರಕರಣ ಹೆಚ್ಚುತ್ತಲೇ ಇರುವುದರಿಂದ ಜನತೆ ಭಯಗೊಂಡಿದ್ದಾರೆ.