ಕೊರೊನಾ ಭೀತಿ: ಮನೆಯಲ್ಲೇ ಯೋಗ ಆಚರಣೆಗೆ ಮೈಸೂರು ಜಿಲ್ಲಾಧಿಕಾರಿ ಕರೆ
ಮೈಸೂರು, ಜೂನ್ 19: ಪ್ರತಿ ವರ್ಷ ಜೂನ್ 21 ರಂದು ಭಾರೀ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಅತ್ಯುತ್ಸಾಹದಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ವೈರಸ್ ಕರಿನೆರಳು ಆವರಿಸಿರುವುದರಿಂದ 'ಮನೆಯಲ್ಲೇ ಯೋಗ' ಘೋಷಣೆಯಡಿ ವಿಶ್ವ ಯೋಗ ದಿನಾಚರಣೆ ಆಚರಿಸಲು ಕರೆ ನೀಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರು ತಿಳಿಸಿದರು.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ವೈರಸ್ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಈ ವರ್ಷ ಸಾಮೂಹಿಕ ಯೋಗ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲಾಗಿದೆ ಎಂದರು. ಜೂನ್ 21 ರಂದು ನಡೆಯುವ ವಿಶ್ವ ಯೋಗ ದಿನಾಚರಣೆಯಂದು 'ಮನೆಯಲ್ಲಿ ಮತ್ತು ಮನೆಯವರೊಂದಿಗೆ ಯೋಗ' ಘೋಷಣೆಯಡಿ, ಮನೆ ಟೆರೇಸ್ ನಲ್ಲಿ ಯೋಗ ಮಾಡಲು ಕರೆ ನೀಡಿದರು. ಬರುವ ಭಾನುವಾರ ಬೆಳಿಗ್ಗೆ 7 ರಿಂದ 7.45 ರವರೆಗೆ ಯೋಗ ಮಾಡಬೇಕು ಎಮದು ತಿಳಿಸಿದರು.
ಮೈಸೂರಲ್ಲಿ ಸಕ್ರಿಯ ಕೊರೊನಾ ಸೋಂಕಿತರು ಎಷ್ಟಿದ್ದಾರೆ?
ಮೈಸೂರು ಯೋಗ ಫೆಡರೇಶನ್ ಮತ್ತು ಜಿಎಸ್ಎಸ್ ಯೋಗ ಸಂಸ್ಥೆ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಮೈಸೂರು ಯೋಗ ಒಕ್ಕೂಟ, ಮೈಸೂರು ಯೋಗ ಸ್ಪೋರ್ಟ್ಸ್ ಫೌಂಡೇಷನ್, ಬಾಬಾ ರಾಮದೇವ್ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಭಾಗಿತ್ವದಲ್ಲಿ ಮೈಸೂರಿನಲ್ಲಿ ವಿಶ್ವಯೋಗ ದಿನಾಚರಣೆ ನಡೆಯಲಿದೆ. ಮನೆಯಿಂದಲೇ ಯೋಗ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡುವವರಿಗೂ ಸರ್ಟಿಫಿಕೇಟ್ ನೀಡಲಾಗುವುದು ಎಂದು ಹೇಳಿದರು.
ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿಂದ ದೇಗುಲಗಳಲ್ಲಿ ಪ್ರಸಾದ ವಿತರಣೆ ಮಾಡದಂತೆ ನಿರ್ಬಂಧ ವಿಧಿಸಲಾಗಿದ್ದು, ಆಷಾಢ ಮಾಸದಲ್ಲಿ ಮೈಸೂರು ಜಿಲ್ಲೆಯಾದ್ಯಂತ ಯಾವುದೇ ದೇಗುಲದಲ್ಲೂ ಪ್ರಸಾದ ವಿತರಣೆ ಮಾಡುವಂತಿಲ್ಲ ಎಂದು ಸೂಚಿಸಿದರು.
ಕೋವಿಡ್ - 19 ಪರೀಕ್ಷೆ; ಮೈಸೂರು ಜಿಲ್ಲೆಯ ಜನರಿಗೊಂದು ಮನವಿ
ಆಷಾಢ ಮಾಸದ ಮಂಗಳವಾರದಂದೂ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮತ್ತೆ ಕೆಲವರು ಇಡೀ ಆಷಾಢ ಮಾಸದಲ್ಲಿ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಾಧಕ-ಬಾಧಕಗಳ ಕುರಿತು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದರು.