ನಿಯಂತ್ರಣಕ್ಕೆ ಸಿಗದ ಕೊರೊನಾ: ಮೈಸೂರಿನಲ್ಲಿ ಶುರುವಾಯಿತು ಬೆಡ್ಗಾಗಿ ಹಾಹಾಕಾರ
ಮೈಸೂರು, ಮೇ 8: ಮಹಾಮಾರಿ ಕೊರೊನಾ ಕಡಿವಾಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ, ಮೈಸೂರಿನಲ್ಲಿ ಕೋವಿಡ್ ರುದ್ರನರ್ತನ ಹೆಚ್ಚಾಗುತ್ತಲಿದ್ದು, ಆಸ್ಪತ್ರೆಯ ಹಾಸಿಗೆಗಾಗಿ ಹಾಹಾಕಾರ ಶುರುವಾಗಿದೆ.
ಮೈಸೂರು ಜಿಲ್ಲೆಯಲ್ಲಿಯೇ ದೊಡ್ಡ ಆಸ್ಪತ್ರೆ ಎಂದು ಕರೆಸಿಕೊಳ್ಳುವ ಕೆ.ಆರ್ ಆಸ್ಪತ್ರೆ ಭರ್ತಿಯಾಗಿದ್ದು, ಜನರು ಪರದಾಡುವಂತಾಗಿದೆ. ಕೆ.ಆರ್ ಆಸ್ಪತ್ರೆಯ ಕೋವಿಡ್ ಕೇರ್ನಲ್ಲಿ ಎಲ್ಲಾ 600 ಬೆಡ್ ಗಳು ಭರ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ 'ನೋ ಬೆಡ್ಸ್' ಬೋರ್ಡ್ ಹಾಕಲಾಗಿದೆ. ಇದು ಆತಂಕಕ್ಕೂ ಕಾರಣವಾಗಿದೆ.
ಕೆ.ಆರ್ ಆಸ್ಪತ್ರೆ ಮುಂದೆ ಮತ್ತೆ ನೋ ಬೆಡ್ಸ್ ಎಂದು ಬೋರ್ಡ್ ಹಾಕಿರುವುದರಿಂದ ಆಸ್ಪತ್ರೆ ಮುಂದೆ ಹಾಸಿಗೆಗಾಗಿ ಜನ ಕಾಯುತ್ತಿದ್ದು, ಇಡೀ ಮೈಸೂರು ಸುತ್ತಿದರೂ ಬೆಡ್ ಸಿಗುತ್ತಿಲ್ಲ. ಯಾರೂ ಕೂಡ ಅಡ್ಮಿಟ್ ಮಾಡಿಕೊಳ್ಳುತ್ತಿಲ್ಲ ಎಂದು ಆಸ್ಪತ್ರೆ ಮುಂದೆ ರೋಗಿಗಳ ಸಂಬಂಧಿಗಳ ಗೋಳು ಹೇಳತೀರದಾಗಿದೆ.
ಒಂದು ಕಡೆ ತಂದೆಯ ಪ್ರಾಣ ಉಳಿಸಿಕೊಳ್ಳಲು ಮಗ ಹರಸಾಹಸ ಪಡುತ್ತಿದ್ದರೆ, ಇನ್ನೊಂದೆಡೆ ತಾಯಿ ಕಾಪಾಡಿಕೊಳ್ಳಲು ಆ್ಯಂಬುಲೆನ್ಸ್ ಮುಂದೆಯೇ ಮಗ ಠಿಕಾಣಿ ಹೂಡಿದ್ದಾನೆ. ಪೋಷಕರನ್ನು ಕಾಪಾಡಿಕೊಳ್ಳಲು ಆಸ್ಪತ್ರೆ ಮುಂದೆ ಮಕ್ಕಳ ಪರದಾಟ ಮನಕಲಕುವಂತಿದ್ದು, ಇನ್ನು ಕಾರುಗಳಲ್ಲಿ ಹಾಗೂ ಆ್ಯಂಬುಲೆನ್ಸ್ ಗಳಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರಲ್ಲಿ ಹೆಚ್ಚಾಗಿರುವ ಕೊರೊನಾ 2ನೇ ಅಲೆ ಈ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದು ಜನರು ಎಚ್ಚೆತ್ತುಕೊಳ್ಳಬೇಕಿದೆ.
ಮೈಸೂರಲ್ಲಿ ಅಕ್ಸಿಜನ್ ವೆಂಟಿಲಟರ್ ಕೊರತೆಯೂ ಕಾಡುತ್ತಿದೆ. ಪ್ರೈವೇಟ್ ಆಸ್ಪತ್ರೆಗಳು ಸುಲಿಗೆಗೆ ಇಳಿದಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಮಸ್ಯೆ ಹೆಚ್ಚಾಗಿದ್ದು ಜನರ ಕಷ್ಟ ಹೇಳತೀರದಾಗಿದೆ.
ಕಳೆದೊಂದು ವಾರದಿಂದ ಸೋಂಕು ಏರುಗತಿಯಲ್ಲಿ ಉಲ್ಬಣಿಸುತ್ತಿದೆ. ಜನ ಎಚ್ಚೆತ್ತುಕೊಳ್ಳದಿದ್ರೆ ಪರಿಸ್ಥಿತಿ ಮತ್ತಷ್ಟು ಹದಗೆಡೋ ಸಾಧ್ಯತೆ ದಟ್ಟವಾಗಿದೆ.