ಮೈಸೂರಿನಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸ್ಥಿತಿಗತಿ ಹೇಗಿದೆ?
ಮೈಸೂರು, ಜುಲೈ 9: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮತ್ತೆರಡು ಸಾವು ಸಂಭವಿಸಿದ್ದು, ಮೃತರ ಸಂಖ್ಯೆ 14ಕ್ಕೆ ಏರಿದೆ. ಜಿಲ್ಲೆಯಲ್ಲಿ ನಿನ್ನೆ 59 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಲ್ಯಾಣಗಿರಿಯ 48 ವರ್ಷದ ಮಹಿಳೆಯೋರ್ವರು ಮೃತಪಟ್ಟಿದ್ದು, ಅವರು ಇತರೆ ಕಾಯಿಲೆಗಳಿಂದಲೂ ಬಳಲುತ್ತಿದ್ದರೆಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ನಿನ್ನೆ ಜಿಲ್ಲೆಯಲ್ಲಿ 59 ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲಿ ಒಂದೇ ದಿನ ಪತ್ತೆಯಾದ ಅತ್ಯಧಿಕ ಸಂಖ್ಯೆಯಾಗಿದೆ. ಇದುವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 589ಕ್ಕೆ ಏರಿದ್ದು 18 ಮಂದಿ ಗುಣಮುಖರಾಗಿದ್ದಾರೆ.
ಮೈಸೂರಿನಲ್ಲಿ ವಕೀಲರಿಗೆ ಸೋಂಕು; 2 ದಿನ ಕೋರ್ಟ್ ಬಾಗಿಲು ಬಂದ್
37 ಪ್ರದೇಶಗಳ ಸೀಲ್ ಡೌನ್
ಓರ್ವ ಗರ್ಭಿಣಿ, ಬಾಣಂತಿ, ಮೂವರು ಪೊಲೀಸರು, ನಾಲ್ವರು ಆರೋಗ್ಯ ಕಾರ್ಯಕರ್ತರು, 23 ಮಂದಿ ಪ್ರಾಥಮಿಕ ಸಂಪರ್ಕಿತರು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ (ಸರಿ) 4ಮಂದಿ, ಶೀತ ಜ್ವರ ಮಾದರಿಯ ಅನಾರೋಗ್ಯ ಲಕ್ಷಣದಿಂದ (ಐಎಲ್ಐ) ಬಳಲುತ್ತಿದ್ದ 15 ಮಂದಿ, ಅಂತರರಾಜ್ಯ ಹಾಗೂ ಬೇರೆ ಜಿಲ್ಲೆಯಿಂದ ಬಂದ 8 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ 2,389 ಮಂದಿಯನ್ನು 14 ದಿನಗಳ ಹೋಂ ಕ್ವಾರೆಂಟೈನ್ ಮಾಡಲಾಗಿದೆ. ಇದುವರೆಗೆ 24,571 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಜಿಲ್ಲೆಯಲ್ಲಿ ಕಂಟೈನ್ ಮೆಂಟ್ ವಲಯಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು ನಿನ್ನೆ 37 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 322 ಮಂದಿ ಗುಣಮುಖರಾಗಿದ್ದಾರೆ. ಇದೀಗ 253 ಸಕ್ರಿಯ ಪ್ರಕರಣಗಳಿವೆ.ಸಮುದಾಯಕ್ಕೆ ಹರಡಿರುವ ಭೀತಿ
ಮೈಸೂರಿನಲ್ಲಿ ಕೊರೊನಾ ಸಮುದಾಯಕ್ಕೆ ಹಬ್ಬಿರುವ ಭೀತಿ ಎದುರಾಗಿದ್ದು, ನಾಲ್ಕು ಪಾಸಿಟಿವ್ ಪ್ರಕರಣಗಳು ಆತಂಕ ಸೃಷ್ಟಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿರುವ ನಾಲ್ವರು ವ್ಯಕ್ತಿಗಳಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದ್ದು ಈ ನಾಲ್ವರು ಸೋಂಕಿತರ ಟ್ರಾವಲ್ ಹಿಸ್ಟರಿ ಭಾರೀ ಭೀತಿ ಹುಟ್ಟಿಸಿದೆ. ಈ ನಾಲ್ವರು ಸೋಂಕಿತರು ಭೇಟಿ ನೀಡಿದ್ದ ಸ್ಥಳದಲ್ಲಿನ ಸಾರ್ವಜನಿಕರು ಸ್ವಯಂ ಆಗಿ ಕ್ವಾರಂಟೈನ್ ಆಗುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಜತೆಗೆ ಸೋಂಕಿತರು ಓಡಾಡಿರುವ ದಿನಾಂಕ, ಸಮಯವನ್ನು ಬಿಡುಗಡೆ ಮಾಡಿದ್ದಾರೆ. ನಾಲ್ಕು ಜನ ಸೋಂಕಿತರ ಸಂಪರ್ಕದವರನ್ನು ಹುಡುಕಲು ಮೈಸೂರು ಜಿಲ್ಲಾಡಳಿತ ಪತ್ರಿಕಾ ಪ್ರಕಟಣೆ ಮೊರೆ ಹೋಗಿದೆ.
ಜನರ ಹಿತದೃಷ್ಟಿಯಿಂದ ಕಾರ್ಯಕ್ರಮ ನಡೆಸಿ: ಡಿಸಿ
ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಸಲುವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನದಟ್ಟಣೆ ಕಾರ್ಯಕ್ರಮಗಳು ಹಾಗೂ ಜನ ಸೇರುವುದನ್ನು ತಡೆಯಬೇಕಿದೆ. ಇದಕ್ಕಾಗಿ ಗುದ್ದಲಿ ಪೂಜೆ, ಉದ್ಘಾಟನೆಗಳು ಹಾಗೂ ಇತರೆ ಸಮಾರಂಭಗಳನ್ನು ಕೈಬಿಡುವಂತೆ ಹಾಗೂ ಅನಿವಾರ್ಯ ಪರಿಸ್ಥಿತಿಯಲ್ಲಿ ಸಾಂಕೇತಿಕವಾಗಿ 20 ಜನ ಮೀರದಂತೆ ಕಾರ್ಯಕ್ರಮಗಳನ್ನು ನಡೆಸಲು ಜಿಲ್ಲಾಧಿಕಾರಿ ಕೋರಿದ್ದಾರೆ.
ನಾಳೆಯಿಂದ ಎಚ್.ಡಿ.ಕೋಟೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ
ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡದಂತೆ ಈಗಾಗಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವ ಜಿಲ್ಲಾಧಿಕಾರಿ, ನಾಳೆಯಿಂದ ಎಚ್.ಡಿ.ಕೋಟೆ ತಾಲೂಕಿಗೆ ಹೊರರಾಜ್ಯ/ವಿದೇಶ/ಹೊರಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದಾರೆ. ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹೊರರಾಜ್ಯ ಮತ್ತು ವಿದೇಶದಿಂದ ಬರುವ ಪ್ರವಾಸಿಗರಿಗೆ ಹೋಟೆಲ್, ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ವಸತಿಗೃಹಗಳಲ್ಲಿ ಸೌಕರ್ಯ ನೀಡದಂತೆ ಆದೇಶ ಹೊರಡಿಸಲಾಗಿದೆ.