ಹುಲಿಗೆ ಕೊರೊನಾ ಸೋಂಕು: ಮೈಸೂರು ಮೃಗಾಲಯದಲ್ಲಿ ಕಟ್ಟೆಚ್ಚರ
ಮೈಸೂರು, ಏಪ್ರಿಲ್ 06: ಕೊರೊನಾ ವೈರಸ್ ಸೋಂಕು ವಿಶ್ವಾದಾದ್ಯಂತ ಭೀತಿ ಸೃಷ್ಟಿಸಿರುವ ಬೆನ್ನಲ್ಲೇ ಪ್ರಾಣಿಗಳಿಗೂ ಕೊರೊನಾ ಹರಡುವ ಭಯ ಎದುರಾಗಿದೆ.
ಎರಡು ದಿನಗಳ ಹಿಂದಷ್ಟೆ ಅಮೇರಿಕದ ಮೃಗಾಲಯದಲ್ಲಿ ಹುಲಿಯೊಂದಕ್ಕೆ ಕೊರೊನಾ ಸೋಂಕು ದೃಢಪಟ್ಟ ವರದಿಗಳು ಬಹಿರಂಗಗೊಳ್ಳುತ್ತಿರುವಂತೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿಯೂ ಮುಂಜಾಗ್ರತೆ ವಹಿಸಲಾಗಿದೆ.
ಈ ಕುರಿತು ದೂರವಾಣಿ ಮೂಲಕ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಅವರು, ""ಈಗಾಗಲೇ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದ್ದು, ಮೃಗಾಲಯ ಸಿಬ್ಬಂದಿಗಳನ್ನು ಹೊರತುಪಡಿಸಿ ಯಾರಿಗೂ ಒಳಗೆ ಪ್ರವೇಶ ಇಲ್ಲ'' ಎಂದು ಹೇಳಿದರು.
""ಸುರಕ್ಷತೆ ದೃಷ್ಟಿಯಿಂದ ಸಿಬ್ಬಂದಿಗಳಿಗೂ ಸಹ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಮೃಗಾಲಯದ ಎಲ್ಲಾ ಸಿಬ್ಬಂದಿಗಳಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಕೊಡಲಾಗಿದೆ. ನಮ್ಮ ಮೃಗಾಲಯದಲ್ಲಿ ಒಂದು ಪ್ರಾಣಿಗೂ ಮತ್ತೊಂದು ಪ್ರಾಣಿಗೂ ನಡುವೆ ಸಾಕಷ್ಟು ಅಂತರ ಇಡಲಾಗಿದೆ. ಪ್ರಾಣಿಗಳಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ ನೋಡಿಕೊಳ್ಳಲಾಗುತ್ತಿದೆ'' ಎಂದರು.