ಮೈಸೂರಿನಲ್ಲಿ ಕೊರೊನಾ ಬಂದ 30ಕ್ಕೂ ಹೆಚ್ಚು ಮಂದಿ ನಾಪತ್ತೆ?
ಮೈಸೂರು, ಜುಲೈ 27: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲಿದ್ದು, ಜಿಲ್ಲಾದ್ಯಂತ ಹಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ಈ ನಡುವೆ ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತವೂ ಕ್ರಮಗಳನ್ನು ಕೈಗೊಂಡಿದೆ.
ಆದರೆ ಇವೆಲ್ಲದರ ನಡುವೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಗಳು ತಪ್ಪು ವಿಳಾಸ, ತಪ್ಪು ಮೊಬೈಲ್ ನಂಬರ್ ನೀಡಿ ಜಿಲ್ಲಾಡಳಿತದ ಹಾದಿ ತಪ್ಪಿಸುತ್ತಿರುವ ಅನುಮಾನ ಕಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಮೊನ್ನೆಯಷ್ಟೆ ಕೊರೊನಾ ಪಾಸಿಟಿವ್ ಬಂದಿದ್ದ ಮೈಸೂರು ನಗರದ ಹೆಬ್ಬಾಳು ನಿವಾಸಿಯೊಬ್ಬ ಜಿಲ್ಲಾಧಿಕಾರಿಗಳ ಮೊಬೈಲ್ ನಂಬರನ್ನೇ ನೀಡಿದ್ದ ಸಂಗತಿ ಬೆಳಕಿಗೆ ಬಂದಿತ್ತು.
ಎಸ್ಕೇಪ್ ಆಗಲು ಮೈಸೂರು ಡಿಸಿ ನಂಬರ್ ಕೊಟ್ಟು ಯಾಮಾರಿಸಿದ ಸೋಂಕಿತ
ಅದೇ ರೀತಿ ಇನ್ನಷ್ಟು ಮಂದಿ ಈ ರೀತಿ ತಪ್ಪು ಮಾಹಿತಿಗಳನ್ನು ನೀಡಿ ನಾಪತ್ತೆಯಾಗಿರಬಹುದು ಎಂಬುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಮೂಲಗಳ ಪ್ರಕಾರ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಬಂದ ಅಂದಾಜು 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೋವಿಡ್-19 ಪರೀಕ್ಷೆ ಮಾಡಿಸುತ್ತಿರುವ ಜನರು ತಮ್ಮ ಮನೆಯ ವಿಳಾಸ ಹಾಗೂ ಫೋನ್ ನಂಬರ್ ನೀಡುವಾಗ ತಪ್ಪು ಮಾಹಿತಿ ನೀಡಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಆದರೆ ಕೊರೊನಾ ಪಾಸಿಟಿವ್ ಬಂದವರು ತಪ್ಪು ಮಾಹಿತಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್, ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜನರು ಸಹಕರಿಸಬೇಕು, ಸೂಕ್ತ ಮಾಹಿತಿ ನೀಡಬೇಕು. ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತಕ್ಕೆ ಜನತೆಯ ಸಹಕಾರ ಅಗತ್ಯ ಎಂದು ಕೇಳಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಡಿಎಚ್ ಒ ಡಾ.ವೆಂಕಟೇಶ್, ಮುಂದಿನ ದಿನಗಳಲ್ಲಿ ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಗಳು ನೀಡುವ ಮಾಹಿತಿಯ ನಿಖರತೆಯನ್ನು ಪರಿಶೀಲಿಸಲಾಗುವುದು. ಈ ರೀತಿ ತಪ್ಪು ಮಾಹಿತಿ ನೀಡುವ ವ್ಯಕ್ತಿಗಳ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕಿದೆ ಎಂದಿದ್ದಾರೆ.