ಹಾಲು ಕೊಳ್ಳೋರು ಇಲ್ಲ; ಮೈಮುಲ್ ಗೂ ಬರೆ ಎಳೆಯಿತು ಕೊರೊನಾ
ಮೈಸೂರು, ಏಪ್ರಿಲ್ 06: ಕೊರೊನಾ ವೈರಸ್ ನಿಂದಾಗಿ ವಿಧಿಸಲಾಗಿರುವ ಲಾಕ್ ಡೌನ್, ಹಾಲು ಮಾರಾಟದ ಮೇಲೂ ಪರಿಣಾಮ ಬೀರಿದೆ. ನಂದಿನಿ ಹಾಲಿನ ಮಾರಾಟದಲ್ಲಿ ಸಾಕಷ್ಟು ಏರುಪೇರಾಗಿದೆ.
ಕೊರೊನಾ ಕ್ಷೀರೋದ್ಯಮದಲ್ಲೂ ಬಿಕ್ಕಷ್ಟು ಸೃಷ್ಟಿಸಿದೆ. ದಿನನಿತ್ಯ ನಂದಿನಿಯಲ್ಲಿ ಬರೋಬ್ಬರಿ 20 ಸಾವಿರ ಲೀಟರ್ ಹಾಲು ಉಳಿಯುತ್ತಿದ್ದು, ಉಳಿಕೆ ಹಾಲನ್ನು ಏನು ಮಾಡಬೇಕೆಂದು ಮೈಮುಲ್ ತಲೆಕೆಡಿಸಿಕೊಂಡಿದೆ. ಅಂಗಡಿ, ಮಳಿಗೆ ಮಾರುಕಟ್ಟೆ ಎಲ್ಲವೂ ಬಂದ್ ಆಗಿರುವುದರಿಂದ ಹಾಲಿನ ಮಾರಾಟವೂ ಕುಸಿದಿದೆ. ಹೀಗಾಗಿ ನಿತ್ಯವೂ ಕೊಳೆಗೇರಿ, ನಿರ್ಗತಿಕರಿಗೆ ಹಾಲನ್ನು ವಿತರಣೆ ಮಾಡುತ್ತಿದೆ.
ದಿನನಿತ್ಯ ಉಳಿಯುತ್ತಿದೆ 20 ಸಾವಿರ ಲೀಟರ್ ಹಾಲು
ಮೈಸೂರು ಜಿಲ್ಲೆಯಲ್ಲಿ ನಿತ್ಯವೂ ಬರೋಬ್ಬರಿ 4.90 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ಸಾಮಾನ್ಯ ದಿನಗಳಲ್ಲಿ 2.30 ಲಕ್ಷ ಲೀಟರ್ ಮಾರಾಟ ಆಗುತ್ತಿತ್ತು. ಆದರೆ ಈಗ 2.10 ಲಕ್ಷ ಲೀಟರ್ ಮಾತ್ರ ಮಾರಾಟ ಆಗುತ್ತಿದೆ. ಪ್ರತಿ ದಿನ 20 ಸಾವಿರ ಹಾಲು ಉಳಿಯುತ್ತಿದೆ. ಆದ್ದರಿಂದ ಈ ಇಪ್ಪತ್ತು ಸಾವಿರ ಲೀಟರ್ ಹಾಲನ್ನು ಖರ್ಚು ಮಾಡುವುದೇ ತಲೆನೋವಾಗಿದೆ.
ಕೊರೊನಾ ಎಫೆಕ್ಟ್: ಉಚಿತ ಹಾಲು ಪೂರೈಸಲು ಕೆಎಂಎಫ್ಗೆ ಯಡಿಯೂರಪ್ಪ ಸೂಚನೆ
ಕೊಳೆಗೇರಿ, ನಿರ್ಗತಿಕರಿಗೆ ಹಾಲು ಹಂಚಿಕೆ
ಹಾಸ್ಟೆಲ್, ಕಾಲೇಜು, ಹೋಟೆಲ್ ಬಂದ್ ಆಗಿರುವುದರಿಂದ ಸಹಜವಾಗೇ ಹಾಲಿಗೂ ಬೇಡಿಕೆ ಕಡಿಮೆಯಾಗಿದೆ. ದಿನನಿತ್ಯ ಬರುವ ಹಾಲಿನಲ್ಲಿ ಇಪ್ಪತ್ತು ಸಾವಿರ ಲೀಟರ್ ಹಾಲು ಉಳಿಯುತ್ತಿದ್ದು, ನಿತ್ಯವೂ ಕೊಳಗೇರಿ, ನಿರ್ಗತಿಕರಿಗೂ ಹಾಲು ವಿತರಣೆ ಮಾಡಲಾಗುತ್ತಿದೆ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ತಿಳಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ನಿತ್ಯವೂ 2.20 ಲಕ್ಷ ಲೀ. ಹಾಲು ಉಳಿಯುತ್ತಿದ್ದು, ಅದನ್ನು ಪೌಡರ್ ಮಾಡುತ್ತಿದ್ದೇವೆ ಎಂದಿದ್ದಾರೆ.
ರೈತರಿಗೆ ನೀಡುತ್ತಿದ್ದ ಸಹಾಯ ಧನವೂ ಇಳಿಕೆ
ಕೊರೊನಾ ರೈತರಿಗೆ ಮತ್ತಷ್ಟು ಬಿಕ್ಕಟ್ಟು ಉಂಟು ಮಾಡಿದೆ. ರೈತರಿಗೆ ನೀಡುತ್ತಿದ್ದ ಸಹಾಯ ಧನದಲ್ಲೂ ಇಳಿಕೆಯಾಗುವುದಾಗಿ ತಿಳಿದುಬಂದಿದೆ. ಇದರಿಂದ ಹೈನುಗಾರಿಕೆ ಮೇಲೂ ಪರಿಣಾಮ ಬೀರಿದೆ. ಹಾಲು ಹಾಕಿದ ರೈತರಿಗೆ ಬೇಗ ಹಣ ಕೊಡಲು ಸಾಧ್ಯವಿಲ್ಲ ಎಂದು ಅಶೋಕ್ ಮಾಹಿತಿ ನೀಡಿದ್ದಾರೆ. ಜ.16ರಂದು ಹಾಲಿನ ದರ ಏರಿಕೆಯಾಗಿತ್ತು. ಹೀಗಾಗಿ ರೈತರಿಂದ ನಾವು 30 ರೂ.ಗಳಿಗೆ ಪ್ರತಿ ಲೀಟರ್ ಖರೀದಿ ಮಾಡುತ್ತಿದ್ದೆವು. ಈಗ ಕೊರೊನಾದಿಂದಾಗಿ ಹಾಲು ಮಾರಾಟ ಆಗುತ್ತಿಲ್ಲ. ಹೀಗಾಗಿ ತಾತ್ಕಾಲಿಕವಾಗಿ 27.50 ರೂ.ಗಳಿಗೆ ಖರೀದಿ ಮಾಡುತ್ತೇವೆ. 80 ಸಾವಿರ ಲೀ. ಚನ್ನರಾಯಪಟ್ಟಣ, 80 ಸಾವಿರ ಲೀ. ಬೆಂಗಳೂರು ಯಲಹಂಕ ಮದರ್ ಡೈರಿ ಹಾಗೂ 70 ಸಾವಿರ ಲೀ. ತಮಿಳುನಾಡಿನ ಕೃಷ್ಣಗಿರಿ ಡೈರಿಗೆ ಕಳುಹಿಸುತ್ತಿದ್ದೇವೆ. ಉಳಿದ ಹಾಲು ಪೌಡರ್ ಆಗುವುದರಿಂದ ಒಕ್ಕೂಟಕ್ಕೆ ಬೇಗ ಹಣ ಸಿಗಲ್ಲ. ಹೀಗಾಗಿ ರೈತರಿಗೆ ನೀಡಲು ವಿಳಂಬ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಲಾಕ್ ಡೌನ್; ಏಪ್ರಿಲ್ 14 ರವರೆಗೆ ಉಚಿತ ಹಾಲು ವಿತರಣೆ
ಕೊರೊನಾದಿಂದ 4- 5 ಕೋಟಿ ರೂ. ನಷ್ಟ
ಹಾಲು ಆದಾಯದ ಮೂಲವಾಗಿದೆ. ಆದರೆ ಮನೆ ಮನೆಗೆ ಹಾಲು ಕೊಡಲು ಪೊಲೀಸರು ಬಿಡುತ್ತಿಲ್ಲ. ನಿತ್ಯವೂ 15- 20 ಸಾವಿರ ಲೀಟರ್ ಹೆಚ್ಚು ಹಾಲು ಡೈರಿಗೆ ಬರುತ್ತಿದೆ. ಆದರೆ ಹಾಲು, ಮೊಸರು, ಮಜ್ಜಿಗೆ, ಲಸ್ಸಿ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ. ಪೇಡ, ಮೈಸೂರು ಪಾಕ್, ಬರ್ಫಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಇದೆಲ್ಲದರ ಪರಿಣಾಮ ತಿಂಗಳಿಗೆ 4-5 ಕೋಟಿ ರೂ. ನಷ್ಟ ಸಂಭವಿಸಿದೆ ಎಂದರು ಮೈಮುಲ್ ಎಂಡಿ ಅಶೋಕ್.