Breaking; ಕಲ್ಯಾಣ ಮಂಟಪ ವಿವಾದ, ಸಾ. ರಾ. ಮಹೇಶ್ಗೆ ಕ್ಲೀನ್ ಚಿಟ್
ಮೈಸೂರು, ಜೂನ್ 14; ಕೆ. ಆರ್. ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಒಡೆತನದ ಸಾರಾ ಕನ್ವೆಂಷನ್ ಹಾಲ್ ಕುರಿತ ಆರೋಪ ಪ್ರತ್ಯಾರೋಪಕ್ಕೆ ಕಡೆಗೂ ತೆರೆ ಬಿದ್ದಿದೆ. ರೋಹಿಣಿ ಸಿಂಧೂರಿ ವರ್ಗಾವಣೆ ಬಳಿಕ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.
ಸಾರಾ ಕನ್ವೆಂಷನ್ ಹಾಲ್ ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿದೆ ಎಂಬ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರೋಪದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ್ದ ಶಾಸಕರು ಈ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದರು.
ರೋಹಿಣಿ ಸಿಂಧೂರಿ ರಾಜೀನಾಮೆ ಕೊಡ್ತೀರಾ?; ಸಾ. ರಾ. ಮಹೇಶ್
ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ನಾಲ್ವರು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ವರದಿ ನೀಡಲು ನಿರ್ದೇಶಿಸಿದ್ದರು. ಸಮಿತಿ ಸಮಗ್ರವಾಗಿ ಪರಿಶೀಲಿಸಿ ಅಧ್ಯಯನ ಮಾಡಿದ ಬಳಿಕ ಸಾರಾ ಕನ್ವೆಂಷನ್ ಹಾಲ್ಅನ್ನು ಯಾವುದೇ ರೀತಿಯ ರಾಜಕಾಲುವೆ ಮೇಲೆ ನಿರ್ಮಿಸಲಾಗಿಲ್ಲ ಎಂದು ವರದಿ ನೀಡುವ ಮೂಲಕ ಕ್ಲೀನ್ ಚಿಟ್ ನೀಡಿದೆ.
ರೋಹಿಣಿ ಸಿಂಧೂರಿ ಹಚ್ಚಿದ 'ಭೂಮಾಫಿಯಾ’ ಬೆಂಕಿ ಆರಿಲ್ಲ!
ಸೋಮವಾರ ಸಂಜೆ ತುರ್ತು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸಾ. ರಾ. ಮಹೇಶ್ ದಾಖಲೆ ಪ್ರದರ್ಶನ ಮಾಡಿ, ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಇಂದು ನೀಡಿರುವ ಸಾರಾ ಚೌಲ್ಟ್ರಿ ವರದಿ ಓದಿದ ಅವರು, ಸಮೀಕ್ಷೆ ಮ್ಯಾಪ್ ತೋರಿಸಿ ಸ್ಪಷ್ಟನೆ ನೀಡಿದರಲ್ಲದೆ ಹಳ್ಳದ ಮೇಲೆ ಚೌಲ್ಟ್ರಿ ನಿರ್ಮಿತವಾಗಿಲ್ಲ. ಹಳ್ಳದ ಜಾಗವನ್ನು ಒತ್ತುವರಿ ಮಾಡಿಲ್ಲ. ಕೆಲವು ಕಡೆ 72.73.74 ಅಳತೆಯಲ್ಲಿ ಕಂಡು ಬರುತ್ತದೆ ಎಂದು ವರದಿಯಲ್ಲಿ ಬಂದಿದೆ ಎಂದರು.
ರೋಹಿಣಿ ಸಿಂಧೂರಿ ತಮ್ಮ ನಡವಳಿಕೆ ತಿದ್ದಿಕೊಳ್ಳಲಿ: ಮಾಜಿ ಸಚಿವ ಎ.ಮಂಜು
"6 ಸಾವಿರ ಅಡಿ ರಿಂಗ್ ರೋಡ್ಗೆ ನನ್ನದೇ ಜಾಗ ಕೊಟ್ಟಿದ್ದೇನೆ. ಮೈಸೂರಿನ ಋಣಕ್ಕಾಗಿ ಎರಡು ಕಡೆ ಜಾಗ ಬಿಟ್ಟಿದ್ದೇನೆ. ರಸ್ತೆಗೆ ಎರಡು ಕಡೆ ನನ್ನ ಜಾಗವನ್ನೇ ಬಿಟ್ಟಿದ್ದೇನೆ. ಇದಕ್ಕೆ ಯಾವುದೇ ಪರಿಹಾರವನ್ನು ಪಡೆದಿಲ್ಲ" ಎಂದು ಸಾ. ರಾ. ಮಹೇಶ್ ಹೇಳಿದರು.
"ನಾನು 30 ವರ್ಷಗಳ ಹಿಂದೆ ಎಕರೆಗೆ 90 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದೆ. ಎರಡು ಎಕರೆ ಅಕ್ರಮ ಅಂತಾ ಹೇಳಿದರು. ನಾನು ಖರೀದಿ ಮಾಡಿದ್ದು 4 ಎಕರೆ. ಈ ಬಗ್ಗೆ ಅವರಿಗೇ ಸರಿಯಾದ ಮಾಹಿತಿ ಇಲ್ಲ. ಲಿಂಗಾಂಬುದಿಪಾಳ್ಯ ಬಫರ್ಝೋನ್ ವ್ಯಾಪ್ತಿ ಸಂಬಂಧ ಪತ್ರ ಬರೆದಿದ್ದಾರೆ. 2018ರ ಸರ್ಕಾರದ ತಿದ್ದುಪಡಿ ಕಾಯ್ದೆ ಪ್ರಕಾರ 30 ಮೀಟರ್ ಇದೆ. ಆದರೆ, ರೋಹಿಣಿ ಸಿಂಧೂರಿ 2016ರ ಕಾಯ್ದೆ ಪ್ರಕಾರ ಆದೇಶಗಳನ್ನು ಹೊರಡಿಸಿದ್ದಾರೆ" ಎಂದು ಟೀಕಿಸಿದರು.
"ನಿಮ್ಮ ಕರ್ತವ್ಯ ಲೋಪದ ಬಗ್ಗೆ ಹೇಳಿದ್ದಕ್ಕೆ ಸೇಡು ತೀರಿಸಿಕೊಳ್ಳುತ್ತಿದ್ದೀರಾ?. ನಾನು ರಾಜಕಾಲುವೆ ಒತ್ತುವರಿ ಮಾಡಿದ್ದರೆ ಹಿಂದೆ ಮುಂದೆ ಹಳ್ಳಕೊಳ್ಳ ಇರುತ್ತೆ ಎನ್ನುವ ಕನಿಷ್ಟ ಜ್ಞಾನವೂ ಇಲ್ಲವೇ?. ದಿಶಾಂಕ್ ಸರ್ವರ್ ಮೂಲಕ ಮ್ಯಾಪ್ ತೆಗೆದುಕೊಂಡು ಬಣ್ಣ ಹಚ್ಚಿ ಇದೇ ಒತ್ತುವರಿ ಆಗಿರೋದು ಅಂತ ಹೇಳುತ್ತಾರೆ" ಎಂದು ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದರು.
Recommended Video
"ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿರುವುದು. ಆದರೆ ಅದನ್ನು ಮುಚ್ಚಿಡುವ ಸಲುವಾಗಿ ಭೂಮಾಫಿಯಾ ಆರೋಪ ಹೊರಿಸುತ್ತಿದ್ದಾರೆ" ಎಂದು ಆರೋಪಿಸಿದರು.