ಏಷಿಯನ್ ಪೇಂಟ್ಸ್ ಎದುರು ಮುಂದುವರಿದ ರೈತರ ಪ್ರತಿಭಟನೆ
ಮೈಸೂರು, ಜನವರಿ 14: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿರುವ ಏಷಿಯನ್ ಪೇಂಟ್ಸ್ ಕಾರ್ಖಾನೆ ಗೇಟ್ ಬಂದ್ ಮಾಡಿ ಸೋಮವಾರ ಮುಂಜಾನೆಯಿಂದಲೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾರ್ಖಾನೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರು, ʻನಮ್ಮ ಭೂಮಿ ನಮಗೆ ವಾಪಸ್ ಕೊಡಿʼ ಎಂದು ಕಳೆದ 50 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಗೇಟ್ ಬಂದ್ ಮಾಡಿ, ಅದರ ಮುಂಭಾಗ ಮಣ್ಣು ಸುರಿದು ಮುಳ್ಳಿನ ಬೇಲಿಯನ್ನು ಹಾಕಿದ್ದಾರೆ. ಅಲ್ಲದೇ, ಸುತ್ತಮುತ್ತ ದನ-ಕರುಗಳನ್ನು ಕಟ್ಟಿಹಾಕಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಂಜನಗೂಡು ಘಟಕದಲ್ಲಿ ಕನ್ನಡಿಗರಿಗೆ ಆದ್ಯತೆ : ಏಷಿಯನ್ ಪೈಂಟ್ಸ್ ಸ್ಪಷ್ಟನೆ
ಏಷಿಯನ್ ಪೇಂಟ್ಸ್ ಕಾರ್ಖಾನೆಗೆ ಭೂಮಿ ನೀಡಿದ 95 ರೈತ ಕುಟುಂಬದವರಿಗೆ ಕಾಯಂ ಉದ್ಯೋಗ ನೀಡುವಂತೆ ಒತ್ತಾಯಿಸಿದ್ದರು. ಆದರೆ, ಅವರಿಗೆ ನೇಮಕಾತಿ ಪತ್ರ ನೀಡಿಲ್ಲ.
ಕಳೆದ ವಾರ ಇಲ್ಲಿಗೆ ಭೇಟಿ ನೀಡಿದ್ದ ಸಂಸದ ಪ್ರತಾಪ ಸಿಂಹ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಮುಂದಿನ ೪-೫ ದಿನಗಳಲ್ಲಿ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿ ರೈತರ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ ಎಂದು ಭರವಸೆ ನೀಡಿದ್ದರೂ, ಇನ್ನೂ ಕೂಡ ಸಮಸ್ಯೆ ಬಗೆಹರಿದಿಲ್ಲ.