ರಾಜ್ಯ ಬಜೆಟ್ನಲ್ಲಿ ಮೈಸೂರಿಗೆ ಸಿಕ್ಕಿದ್ದು ತೆಂಗಿನ ಚಿಪ್ಪು: ಕಾಂಗ್ರೆಸ್ ವ್ಯಂಗ್ಯ
ಮೈಸೂರು, ಮಾರ್ಚ್ 9: "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ರಾಜ್ಯ ಬಜೆಟ್ನಲ್ಲಿ ಮೈಸೂರಿಗೆ ಈ ಬಾರಿ 100 ಕೋಟಿ ತೆಗೆದುಕೊಂಡು ಬರಲಿ ಸಾಕು ಎಂದು ನಾನೇ ಚಾಲೆಂಜ್ ಮಾಡಿದ್ದೆ, ಆದರೆ ಬಜೆಟ್ನಲ್ಲಿ ಮೈಸೂರಿಗೆ ಸಿಕ್ಕಿದ್ದು ಚಿಪ್ಪು ಮಾತ್ರ'' ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದರು.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಬಜೆಟ್ನಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಮತ್ತು ರೈಲ್ವೆ ಟರ್ಮಿನಲ್'ಗೆ ರಾಜ್ಯ ಸರ್ಕಾರದ ಪಾಲಿನ ಹಣ ಬರುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದರು. ಆದರೆ ಬಜೆಟ್ನಲ್ಲಿ ಮೈಸೂರಿನ ವಿಮಾನ ನಿಲ್ದಾಣದ ಪ್ರಸ್ತಾಪವೇ ಆಗಿಲ್ಲ. ಹಾಸನ ವಿಮಾನ ನಿಲ್ದಾಣ, ಶಿವಮೊಗ್ಗ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಹಣ ನೀಡಿದ್ದೀರಿ. ಸಂಸದ ಪ್ರತಾಪ್ ಸಿಂಹ ಅವರೇ ಬರೀ ಸುಳ್ಳುಗಳನ್ನು ಹೇಳಿಕೊಂಡು ಇನ್ನೆಷ್ಟು ದಿನ ಇರುತ್ತೀರಿ? ಅಂತ ಕಿಡಿಕಾರಿದರು.
ಮೈಸೂರಿಗೆ ನಿರಾಸೆ ಉಂಟುಮಾಡಿದೆ
ಈ ಬಾರಿಯ ಬಜೆಟ್ ಮೈಸೂರಿಗೆ ನಿರಾಸೆ ಉಂಟುಮಾಡಿದೆ. ಕಳೆದ ಹತ್ತು-ಹದಿನೈದು ದಿನಗಳಿಂದ ಮೈಸೂರು ಭಾಗದ ಸಚಿವರು, ಸಂಸದರು, ಶಾಸಕರು 15 ಬೇಡಿಕೆ ಸಲ್ಲಿಸಿದ್ದರು. ಆದರೆ 15 ಬೇಡಿಕೆಗಳಲ್ಲಿ ಒಂದಕ್ಕೂ ಮಾನ್ಯತೆ ನೀಡಿಲ್ಲ. ಯಡಿಯೂರಪ್ಪನವರು ಜಾತಿವಾರು ಬಜೆಟ್ ಮಂಡಿಸಿದ್ದಾರೆ. ಇದು ಬಡತನದಲ್ಲಿರುವವರನ್ನು ಮೇಲೆತ್ತುವ ಬಜೆಟ್ ಅಲ್ಲ ಎಂದು ಟೀಕಿಸಿದರು. ಮೈಸೂರು ಭಾಗದ ಬಿಜೆಪಿ ನಾಯಕರ ಬೇಡಿಕೆ ನಡುವೆಯೂ ಬಜೆಟ್ನಲ್ಲಿ ಮೈಸೂರಿಗೆ ಸಿಕ್ಕಿದ್ದು ಚಿಪ್ಪು ಮಾತ್ರ. ಸಂಪೂರ್ಣವಾಗಿ ಮೈಸೂರನ್ನು ಬಜೆಟ್ನಲ್ಲಿ ಕಡೆಗಣಿಸಲಾಗಿದೆ. ಮೈಸೂರು ಭಾಗದ ಬಿಜೆಪಿ ಮುಖಂಡರು ಯಾರೊಬ್ಬರೂ ಮೈಸೂರಿನ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಡಿಯೂರಪ್ಪ ಬಜೆಟ್ ಸಾಕಷ್ಟು ಬೇಸರ ಮೂಡಿಸಿದೆ, ಮುಂದಿನ ದಿನದಲ್ಲಿ ಈ ಬಗ್ಗೆ ಸ್ಥಳೀಯ ಮುಖಂಡರು ಧ್ವನಿ ಎತ್ತಲಿ ಎಂದು ಆಗ್ರಹಿಸಿದರು.
ಮೈಸೂರು; ಭೂಮಿ ಕೊಟ್ಟವರಿಗೆ ಉದ್ಯೋಗ ಕೊಟ್ಟ ಏಷಿಯನ್ ಪೇಂಟ್ಸ್
ಕುಮಾರಸ್ವಾಮಿಗೆ ಧನ್ಯವಾದ ಯಾಕ?
ಇದೇ ವೇಳೆ ಮಾಜಿ ಸಚಿವರ ಸಿಡಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಬಾಂಬೆಗೆ ಹೋಗಿದ್ದವರು ಬೆತ್ತಲೆ ಬೆಲ್ಲಿ ಡ್ಯಾನ್ಸ್ ನೋಡಿದ್ದಾರೆ. ಆ ವಿಡಿಯೋಗಳು ಬಿಜೆಪಿ ಬಳಿಯಿವೆ. ಹೀಗಾಗಿ ಸಿಡಿ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ನಡೆಸಬೇಕೆಂದು ಆಗ್ರಹಿಸಿದ ಅವರು, ರಮೇಶ್ ಜಾರಕಿಹೊಳಿ, ಎಚ್.ಡಿ ಕುಮಾರಸ್ವಾಮಿಗೆ ಧನ್ಯವಾದ ಯಾಕೆ ಹೇಳಿದರು ಗೊತ್ತಿಲ್ಲ. ಸಿಡಿ ನಕಲಿ ಎಂದ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ಯಾಕೆ ಕೊಟ್ಟಿರಿ? ಇದುವರೆಗೂ ನೀವು ಯಾಕೆ ದೂರು ನೀಡಲಿಲ್ಲ?'' ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನಿಸಿದರು.
ಬಾಂಬೆಗೆ ಹೋದವರ ವೀಕ್ನೆಸ್
"ಈ ಸಿಡಿಯ ನಿರ್ದೇಶನ, ರಚನೆ ಎಲ್ಲದೂ ಬಿಜೆಪಿಯದ್ದೆ. ಸಿ.ಪಿ ಯೋಗೇಶ್ವರ್ ಕೇಳಿ ಸಿಡಿ ರಚನೆ ಹೇಗೆ ಮಾಡುತ್ತಾರೆ ಎಂದು ಅವರೇ ಮೈಸೂರಿನಲ್ಲಿ ಹೇಳಿದ್ದಾರೆ. ಬಾಂಬೆಗೆ ಹೋದವರಿಗೆ ಒಂದು ನಿಮಿಷವೂ ಬೇಸರವಾಗದಂತೆ ನೋಡಿಕೊಳ್ಳಲಾಗಿದೆ. ಎಲ್ಲಾ ಥರದ ಡ್ಯಾನ್ಸ್ ನೋಡಿದ್ದಾರೆ, ಡ್ಯಾನ್ಸ್ ಮಾಡಿದ್ದಾರೆ. ಅವರ ಎಲ್ಲಾ ಸಿಡಿಗಳು ಬಿಜೆಪಿ ಬಳಿ ಇವೆ. ಬಾಂಬೆಗೆ ಹೋದವರ ವೀಕ್ನೆಸ್ ಆಧಾರದ ಮೇಲೆ ಎಲ್ಲರ ಜುಟ್ಟನ್ನು ಬಿಜೆಪಿಯವರು ಹಿಡಿದಿದ್ದಾರೆ'' ಎಂದರು.
ಯೋಗೇಶ್ವರ್ ಬಳಿಯೇ ಸಿಡಿಗಳು ಇವೆ
"ನಳಿನ್ ಕುಮಾರ್ ಕಟೀಲ್ ಜೋಕರ್ ಥರ ಮಾತಾಡುತ್ತಿದ್ದಾರೆ. ಒಳ್ಳೆದ್ದಕ್ಕೂ, ಕೆಟ್ಟದ್ದಕ್ಕೂ, ಮಕ್ಕಳಾಗಿದ್ದಕ್ಕೂ ಎಲ್ಲಕ್ಕೂ ಕಾಂಗ್ರೆಸ್ ಹೊಣೆ ಮಾಡುತ್ತೀರಾ? ನೀವು ಒಬ್ಬ ಬಿಜೆಪಿ ಅಧ್ಯಕ್ಷರಾ? ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿ 24 ಗಂಟೆಯಲ್ಲಿ ಈ ಪ್ರಕರಣದ ಅಸಲಿ ಕಥೆಯನ್ನು ಪೊಲೀಸರು ಬಯಲಿಗೆ ತರುತ್ತಾರೆ. ಸಿಪಿ ಯೋಗೇಶ್ವರ್ ಬಳಿಯೇ ಸಿಡಿಗಳು ಇವೆ ಅಂತಾ ಹೇಳುತ್ತಾರೆ. ದಿನೇಶ್ ಕಲ್ಲಹಳ್ಳಿ ಯಾವ ಪಕ್ಷದ ಒಡನಾಡಿ, ಯಾವ ಮುಖಂಡನ ಹಿಂಬಾಲಕ ಎಂಬುದು ತನಿಖೆಯಾಗಲಿ'' ಅಂತ ಎಂ.ಲಕ್ಷ್ಮಣ್ ಆಗ್ರಹಿಸಿದರು.