ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರರಿಂದ 5 ಸಾವಿರ ಕೋಟಿ ರೂ. ಲೂಟಿ: ಕಾಂಗ್ರೆಸ್ ಆರೋಪ
ಮೈಸೂರು, ಆಗಸ್ಟ್ 26: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಸೂಪರ್ ಸಿಎಂ ಆಗಿ ಲೂಟಿ ಮಾಡುತ್ತಿದ್ದು, ಕಳೆದ ಒಂದು ವರ್ಷದಲ್ಲಿ 5 ಸಾವಿರ ಕೋಟಿ ರೂ. ಹಣ ಸಂಗ್ರಹಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.
ಬುಧವಾರ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಅವರು ಹಾಲಿ ಸರ್ಕಾರದ ಸೂಪರ್ ಸಿಎಂ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕರೇ ಬರೆದಿರುವ ಪತ್ರದಲ್ಲಿ ಆರೋಪಿಸಲಾಗಿದೆ ಎಂದು ಬಿಜೆಪಿ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರ ಬಿಡುಗಡೆ ಮಾಡಿದರು.
ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ದೊಡ್ಡದು, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಎಚ್.ವಿಶ್ವನಾಥ್
ಬಿಜೆಪಿ ಶಾಸಕರೆ ಸಹಿ ಮಾಡಿರುವ ಪತ್ರದಲ್ಲಿ ಬಿ.ವೈ ವಿಜಯೇಂದ್ರ ಕುರಿತು ಗಂಭೀರ ಆರೋಪ ಮಾಡಿ, ಬಿಜೆಪಿ ಹೈಕಮಾಂಡ್ ಗೆ ಪತ್ರವನ್ನು ಬರೆದಿದ್ದಾರೆ ಎನ್ನಲಾಗಿರುವ ಪತ್ರ ಅದಾಗಿದೆ.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ, ವಿಜಯೇಂದ್ರ ಅವರು ನಡೆಸಿರುವ ಲೂಟಿಗೆ ಸಂಬಂಧಿಸಿದಂತೆ ಆಡಿಯೋ ಕ್ಲೀಪಿಂಗ್, ವಿಡಿಯೋ ಕ್ಲೀಪಿಂಗ್ ಗಳನ್ನು ನಾವು ಕ್ರೂಢೀಕರಿಸಿದ್ದು, ಸೆಪ್ಟೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ದೆಹಲಿಯಲ್ಲಿ ಆಡಿಯೋ ಬಿಡುಗಡೆ ಮಾಡಲಿದ್ದೇವೆ ಎಂದರು.
ಸಿಎಂ ಪುತ್ರ ವಿಜಯೇಂದ್ರ ಅವರು 32 ಜನರ ಕೂಟ ಮಾಡಿಕೊಂಡು, ಪರ್ಯಾಯ ಸರ್ಕಾರ ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದು, ಏಳು ಜನ ಶಾಸಕರ ಸಹಿ ಹಾಕಿರುವ ಪತ್ರ ಇದಾಗಿದೆ. ಹೀಗಾಗಿ ಈ ಪತ್ರದಲ್ಲಿ ಮಾಡಲಾಗಿರುವ ಆರೋಪದ ಕುರಿತು ಪರಿಶೀಲಿಸಬೇಕಿದೆ. ಇದಕ್ಕಾಗಿ 10 ದಿನಗಳ ಗಡುವು ಸಹ ನೀಡಲಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ಅಥವಾ ವಿಶೇಷ ತನಿಖೆ ನಡೆಸಬೇಕಿದೆ ಎಂದು ತಿಳಿಸಿದರು.