ಇದು ರಾಯಲ್ ಸರ್ಕಾರ; ರಾಯಲ್ ಆಗಿ ಬದುಕುವವರಿಗೆ ಮಾತ್ರ ಇಲ್ಲಿ ಅವಕಾಶ
ಮೈಸೂರು, ಫೆಬ್ರವರಿ 15: ದಿನನಿತ್ಯ ಬಳಕೆಯ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸ್ಕೂಟರ್ ತಲೆಕೆಳಗಾಗಿ ನಿಲ್ಲಿಸಿ ವಿಪಕ್ಷ ಕಾಂಗ್ರೆಸ್ ವಿನೂತನವಾಗಿ ಪ್ರತಿಭಟನೆ ನಡೆಸಿತು.
ಮಾಜಿ ಶಾಸಕ ಎಂ.ಕೆ ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಮೈಸೂರು ನಗರದ ಆರ್.ಟಿ.ಒ ವೃತ್ತದಲ್ಲಿ ಕೇಂದ್ರ ಸರ್ಕಾರದ ಘೋಷಣೆ ಕೂಗಿ ಪ್ರತಿಭಟನೆ ಮಾಡಲಾಯಿತು.
ಅಡುಗೆ ಇಂಧನ ಬೆಲೆ ಏರಿಕೆ: ಕೇಂದ್ರದಿಂದ ಜನ ಸಾಮಾನ್ಯರ ಲೂಟಿ ಎಂದ ರಾಹುಲ್
ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಬೆಲೆ ಏರಿಕೆ ವಿರೋಧಿಸಿ ಸ್ಕೂಟರ್, ಗ್ಯಾಸ್ ಸಿಲಿಂಡರ್ ಗಳಿಗೆ ಹೂವಿನ ಹಾರ ಹಾಕಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಇದೇನಾ ಅಚ್ಚೇ ದಿನ್? ಎಂದು ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನೆಸಿದ ಪ್ರತಿಭಟನಾಕಾರರು, ಪ್ರಧಾನಿ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
ಇದೊಂದು ರಾಯಲ್ ಸರ್ಕಾರ, ರಾಯಲ್ ಆಗಿ ಬದುಕುವವರಿಗೆ ಮಾತ್ರ ಇಲ್ಲಿ ಅವಕಾಶವಿದೆ. ನಮ್ಮಂಥ ಬಡವರು ಯಾರೂ ಬದುಕೋಕೆ ಆಗುವುದಿಲ್ಲ. ದಿನಬೆಳಗಾದರೆ ಯಾವ ಆದೇಶ ಬರುತ್ತದೋ ಅಂತ ಕಾಯಬೇಕಿದೆ. ಇವರೇನು ಸರ್ಕಾರ ನಡೆಸುತ್ತಿದ್ದಾರೆಯೇ ಎಂದು ಪಾಲಿಕೆ ಸದಸ್ಯೆ ಶೋಭಾ ಸುನೀಲ್ ಕೇಳಿದರು.
ಟಿವಿ, ಫ್ರಿಡ್ಜ್, ಬೈಕ್ ಉಳ್ಳವರ BPL ಕಾರ್ಡ್ ವಾಪಸ್ ಗೆ ಆಹಾರ ಸಚಿವ ಉಮೇಶ್ ಕತ್ತಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಪಾಲಿಕೆ ಸದಸ್ಯೆ ಶೋಭಾ ಸುನಿಲ್, ಜನರನ್ನು ಕಷ್ಟಕ್ಕೆ ನೂಕುವ ಮನಸ್ಥಿತಿ ಇವರಿಗಿದೆ ಎಂದು ಆಕ್ರೋಶ ಹೊರಹಾಕಿದರು.