ಸಿದ್ದರಾಮಯ್ಯ, ಡಿಕೆಶಿಗೆ ಮಾಡಲು ಏನೂ ಕೆಲಸ ಇಲ್ಲ; ಎಸ್ಟಿಸ್
ಮೈಸೂರು, ಜನವರಿ 03; "ಪಾದಯಾತ್ರೆ ಒಂದು ಚುನಾವಣಾ ಗಿಮಿಕ್ ಆಗಿದ್ದು, ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ಗೆ ಮಾಡಲು ಏನು ಕೆಲಸ ಇಲ್ಲ" ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಟೀಕಿಸಿದರು.
ಸೋಮವಾರ ಮೈಸೂರಿನಲ್ಲಿ ಮಾತನಾಡಿದ ಸಚಿವರು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ವ್ಯಂಗ್ಯವಾಡಿದರು. "ಇಷ್ಟು ವರ್ಷ ಅವರು ಏನು ಮಾಡಲಿಲ್ಲ. ಸಮ್ಮಿಶ್ರ ಸರ್ಕಾರ ಇದ್ದಾಗಲೂ ಯೋಜನೆ ಬಗ್ಗೆ ಮಾತನಾಡಲಿಲ್ಲ" ಎಂದರು.
ವಿಶೇಷ ಲೇಖನ; ಬಿಜೆಪಿ ವಿರುದ್ಧದ 'ಕೈ’ ಹೋರಾಟಕ್ಕೆ ಮೇಕೆದಾಟು ಮುನ್ನುಡಿ
"ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ರಾಜ್ಯಾದ್ಯಂತ ಪ್ರವಾಸ ಮಾಡಿ ಆಗು ಹೋಗುಗಳನ್ನು ಸರ್ಕಾರದ ಗಮನಕ್ಕೆ ತರೋದು ಬಿಟ್ಟು, ಈಗ ರಾಜಕೀಯ ಕಾರಣಕ್ಕೆ ಪಾದಯಾತ್ರೆ ಗಿಮಿಕ್ ಮಾಡುತ್ತಿದ್ದಾರೆ. ಇದು ಜನರಿಗೆ ಅರ್ಥವಾಗುತ್ತದೆ" ಎಂದು ಸಚಿವರು ಹೇಳಿದರು.
'ಸುಳ್ಳಿನ ಯಾತ್ರೆʼ ಹೊರಟವರು; ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಎಚ್ಡಿಕೆ ಟ್ವೀಟ್
"ಜನರ ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ಕೈ ಬಿಡಿ. ಕೋವಿಡ್ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಬೇರೆ ರಾಜ್ಯಗಳಲ್ಲಿ, ವಿದೇಶದಲ್ಲೂ ಪ್ರಕರಣ ಹೆಚ್ಚಾಗಿದೆ. ಎರಡನೇ ಅಲೆಯಲ್ಲಿ ಸಾಕಷ್ಟು ಅನಾಹುತ ಆಗಿದೆ. ಅದು ಮೂರನೇ ಅಲೆಯಲ್ಲಿ ಆಗಬಾರದು. ಕಾಂಗ್ರೆಸ್ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಜನರ ಹಿತದೃಷ್ಟಿಯಿಂದ ಪಾದಯಾತ್ರೆ ಕೈ ಬಿಡಬೇಕು" ಎಂದು ಸಚಿವರು ಮನವಿ ಮಾಡಿದರು.
ಮೇಕೆದಾಟು ಯೋಜನೆ; ಮತ್ತೊಮ್ಮೆ ನಿಲುವು ಸ್ಪಷ್ಟಪಡಿಸಿದ ಸಿಎಂ
ಲಾಕ್ ಡೌನ್ ವಿಚಾರ; ಲಾಕ್ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಎಸ್. ಟಿ. ಸೋಮಶೇಖರ್, "ಕೇಂದ್ರ ಹಾಗೂ ತಜ್ಞರ ಸಲಹೆ ಮೇರೆಗೆ ಲಾಕ್ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಅವರು ಕಠಿಣ ಕ್ರಮ ಸೇರಿ ಏನೇ ಸಲಹೆ ಕೊಟ್ಟರು ಪಾಲಿಸುತ್ತೇವೆ" ಎಂದರು.
"ಸದ್ಯಕ್ಕೆ ಬೇರೆ ರಾಜ್ಯದಷ್ಟು ನಮ್ಮಲ್ಲಿ ಸಮಸ್ಯೆ ಆಗಿಲ್ಲ. ಜನರು ಸಹಕಾರ ನೀಡುತ್ತಿದ್ದಾರೆ. ಎರಡು ದಿನಕ್ಕೊಮ್ಮೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ತಜ್ಞರ ಜೊತೆ ಸಭೆ ನಡೆಯುತ್ತಿದೆ. ಎರಡನೇ ಅಲೆಯಿಂದ ಆದ ಅನಾಹುತದಿಂದ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ" ಎಂದು ಹೇಳಿದರು.
ಲಸಿಕಾ ಅಭಿಯಾನಕ್ಕೆ ಚಾಲನೆ; ರಾಜ್ಯಾದ್ಯಂತ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ ನೀಡಿದರು. ನಗರದ ಮಹಾರಾಣಿ ಕಾಲೇಜಿನಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. 100 ಜನ ನುರಿತ ನರ್ಸ್ ಗಳ ತಂಡದೊಂದಿಗೆ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಯಿತು.
ದಿನಕ್ಕೆ 20 ಸಾವಿರ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕ ರಾಮ್ ದಾಸ್, ಮೇಯರ್ ಸುನಂದ ಪಾಲನೇತ್ರ, ಶಾಸಕ ನಾಗೇಂದ್ರ, ಜಿಲ್ಲಾಧಿಕಾರಿ ಬಗಾದಿ ಗೌತಮ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಡಿ. ಕೆ. ಶಿವಕುಮಾರ್ ಹೇಳಿಕೆ; ಮೈಸೂರಿನಲ್ಲಿ ಸೋಮವಾರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಮಿನಿಸ್ಟರ್ಗಳು ಏನೇನೋ ಮಾತನಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ರಾಜ್ಯಕ್ಕೂ ಹಿತವಾಗಲಿ" ಎಂದರು.
ಚಾಮುಂಡಿಬೆಟ್ಟದಲ್ಲಿ ಮಾತನಾಡಿದ ಅವರು, "ಪಾದಯಾತ್ರೆಗೆ ಬಿಜೆಪಿ ನಾಯಕರು ಈಗ ಗಿಮಿಕ್ ಅಂತಿದ್ದಾರೆ. ಆದರೆ ವಾಜಪೇಯಿ ಕಾಲದಲ್ಲಿ ಅಡ್ವಾಣಿಯವರು ರಥಯಾತ್ರೆ ಮಾಡಿದ್ದರು. ದೇವೆಗೌಡರು ಸಹ ಹಿಂದೆ ಬೇಕಾದಷ್ಟು ಯಾತ್ರೆಗಳನ್ನು ಮಾಡಿದ್ದಾರೆ ಹಾಗಾದರೆ ಅದಕ್ಕೆ ಏನಂತ ಹೇಳಬೇಕು?" ಎಂದು ಪ್ರಶ್ನಿಸಿದರು.
"ಕುಮಾರಸ್ವಾಮಿ ಅವರು ಯಾತ್ರೆ ಮಾಡುತ್ತೀನಿ ಅಂತಾ ಇದ್ದಾರೆ. ಯಡಿಯೂರಪ್ಪ 5 ತಂಡ ಮಾಡಿಕೊಂಡು ಯಾತ್ರೆ ಮಾಡುತ್ತೇನೆ ಎನ್ನುತ್ತಾರೆ. ಇದಕ್ಕೆಲ್ಲ ಏನ್ ಅಂತ ಹೇಳಬೇಕು?. ಎಲೆಕ್ಷನ್ ಟೈಮ್ ನಲ್ಲಿ ಕೊರೊನಾ ಇರಲಿಲ್ಲ. ಇಡೀ ದೇಶದಲ್ಲಿ ಎಲ್ಲೂ ಕೊರೊನಾ ಇರಲಿಲ್ಲವಾ? ಈಗ ಮಾತನಾಡುತ್ತಿರುವವರಿಗೆ ಒಳ್ಳೆಯದಾಗಲಿ" ಎಂದರು.