ಪರಂ, ಎಚ್ ಡಿಕೆ ವಿರುದ್ಧ ಮೈಸೂರಲ್ಲಿ ಕಿಡಿ ಕಾರಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್
ಮೈಸೂರು, ನವೆಂಬರ್ 10 : ಟಿಪ್ಪು ಜಯಂತಿ ಆಚರಣೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರು ಹಾಜರಾದ ಹಿನ್ನೆಲೆಯಲ್ಲಿ ಮೈತ್ರಿ ಸರಕಾರದ ವಿರುದ್ದವೇ ಮೈಸೂರಿನ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅಸಮಾಧಾನ ಹೊರಹಾಕಿದ್ದಾರೆ.
ನಗರದ ಕಲಾಮಂದಿರದಲ್ಲಿ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮದ ವೇದಿಕೆಯಲ್ಲಿಯೇ ತಮ್ಮ ಬೇಸರ ಹೊರಹಾಕಿದ ಅವರು, ಎಚ್.ಡಿ.ಕುಮಾರಸ್ವಾಮಿ ಅನಾರೋಗ್ಯದ ಕಾರಣ ಹೇಳಿ ಗೈರಾದರೆ, ಪರಮೇಶ್ವರ್ ವಿದೇಶ ಪ್ರವಾಸ ಮಾಡುವ ಮೂಲಕ ಟಿಪ್ಪು ಜಯಂತಿಗೆ ಗೈರಾಗಿ ನಮ್ಮ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ಕಿಡಿ ಕಾರಿದರು.
ಟಿಪ್ಪು ಜಯಂತಿ:LIVE:ಯಾರನ್ನು ಮೆಚ್ಚಿಸಲು ಟಿಪ್ಪು ಜಯಂತಿ ಮಾಡುತ್ತಿಲ್ಲ: ಶಿವಕುಮಾರ್
ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶವಿದೆ. ಈ ರೀತಿಯ ಪೊಲೀಸ್ ಬಂದೋಬಸ್ತ್ ನಿಂದ ಆಚರಣೆ ಮಾಡುತ್ತಿರುವುದು ನಮ್ಮ ಸಮುದಾಯಕ್ಕೆ ಅವಮಾನ ಮಾಡಿದಂತೆ. ಟಿಪ್ಪು ಜಯಂತಿಗೆ ಇಷ್ಟೊಂದು ನಿರ್ಬಂಧ ವಿಧಿಸುವ ಅಗತ್ಯವಿಲ್ಲ. ಸಿಎಂ ಹಾಗೂ ಡಿಸಿಎಂ ಬೇರೆ ಜಯಂತಿಯಲ್ಲಿ ತೋರಿಸುವ ಉತ್ಸಾಹವನ್ನು ಟಿಪ್ಪು ಜಯಂತಿ ಆಚರಣೆಯಲ್ಲೂ ತೋರಿಸಬೇಕು ಎಂದು ಆಗ್ರಹಿಸಿದರು.
ಇನ್ನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಜಿಟಿ ದೇವೇಗೌಡ, ಸಂವಿಧಾನವನ್ನು ದೇಶದ ಎಲ್ಲ ಜನಾಂಗದವರು ಒಪ್ಪಿದ್ದಾರೆ. ಎಲ್ಲ ಜನಾಂಗದವರ ಜಯಂತಿಯನ್ನು ಮಾಡುವಾಗ ಟಿಪ್ಪು ಜಯಂತಿ ಮಾಡುವುದರಲ್ಲಿ ತಪ್ಪೇನಿದೆ? ಟಿಪ್ಪು ಜಯಂತಿಯನ್ನು ರಾಜಕೀಯವಾಗಿ ಬಳಸುವುದರಿಂದ ಯಾವುದೇ ಶಕ್ತಿ ಬರುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.
'ಟಿಪ್ಪು' ಜಪದಲ್ಲಿ ಕಳೆದುಕೊಂಡಿದ್ದೇ ಹೆಚ್ಚು: ರಾಜಕಾರಣಿಗಳಲ್ಲಿ ಕಾಡುತ್ತಿದೆಯೇ ಭಯ?
ಕೋಮು ಗಲಭೆ ಮಾಡುವವರಿಗೆ ಮುಂದಿನ ದಿನಗಳಲ್ಲಿ ತಾವು ಮಾಡಿದ ತಪ್ಪು ಏನೆಂದು ಅರಿವಾಗುತ್ತದೆ. ನಾವೆಲ್ಲರೂ ಭಾರತಾಂಬೆಯ ಮಕ್ಕಳು. ಟಿಪ್ಪು ಮಹಾನ್ ವ್ಯಕ್ತಿ ಮತ್ತು ಕನ್ನಡ ಪ್ರೇಮಿ. ಟಿಪ್ಪು ಸುಲ್ತಾನ್ ಕಾಲದಲ್ಲಿ ಆಡಳಿತ ಭಾಷೆ ಕನ್ನಡವೇ ಅಗಿತ್ತು ಎಂದರು.
ಕೋಮುವಾದದ ಕನ್ನಡಕ ಕಳಚಿಟ್ಟು ಟಿಪ್ಪುವನ್ನು ನೋಡಿ: ಬಿಜೆಪಿಗೆ ಸಿದ್ದರಾಮಯ್ಯ ಸಲಹೆ
ಟಿಪ್ಪು ತನ್ನ 15ನೇ ವಯಸ್ಸಿನಲ್ಲಿ ಯುದ್ಧದಲ್ಲಿ ಭಾಗವಹಿಸಿ, ಸೇನೆಯ ಮುಖ್ಯಸ್ಥ ಹುದ್ದೆಗೆ ಏರಿದ್ದ ವ್ಯಕ್ತಿ. 9 ವರ್ಷ ಬ್ರಿಟಿಷರ ವಿರುದ್ಧ ನಾಡು- ನುಡಿ ರಕ್ಷಣೆಗಾಗಿ ಹೋರಾಟ ಮಾಡಿದ್ದನ್ನು ನಾವು ಮರೆಯಬಾರದು. ಮೈಸೂರು ಸಂಸ್ಥಾನದಲ್ಲಿ ಕೆರೆಗಳನ್ನು ಕಟ್ಟಿಸಿದ ಟಿಪ್ಪು ಕೊಡುಗೆ ಕಡಿಮೆ ಏನಿಲ್ಲ.
ಟಿಪ್ಪು ಜೀವನ ಚರಿತ್ರೆ ಓದುವುದರಿಂದ ನಾವು ದೊಡ್ಡ ದೊಡ್ಡ ನಾಯಕರಾಗಬಹುದು. ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉತ್ತಮ ಕೊಡುಗೆ ನೀಡಿದ ಟಿಪ್ಪು ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.