ಕೊರೊನಾ ನಿಯಂತ್ರಣ ವಿಚಾರದಲ್ಲಿ ಮೈಸೂರು ಜಿಲ್ಲೆ ಅನಾಥವಾಗಿದೆ
ಮೈಸೂರು, ಆಗಸ್ಟ್ 31: ಕೊರೊನಾ ನಿಯಂತ್ರಣ ವಿಚಾರದಲ್ಲಿ ಮೈಸೂರು ಜಿಲ್ಲೆ ಅನಾಥವಾಗಿದ್ದು, ಸೋಂಕು ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಗಂಭೀರವಾಗಿ ಆರೋಪಿಸಿದರು.
Recommended Video
ಮೈಸೂರಿನ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಕಾಯಿಲೆಯ ರೋಗಿಗಳು ಸಹ ಬೆಡ್ ಗಳಿಗಾಗಿ ಪರದಾಡುತ್ತಿದ್ದಾರೆ. ಮೈಸೂರಿನಲ್ಲಿ ಈವರೆಗೆ ಖಾಸಗಿ ಆಸ್ಪತ್ರೆಗಳ ಜೊತೆ ಮೀಟಿಂಗ್ ಮಾಡಿಲ್ಲ. ಕೊರೊನಾ ವೈರಸ್ ನಡುವೆಯೂ ಸರ್ಕಾರ ವರ್ಗಾವಣೆ ದಂಧೆಗಿಳಿದಿದೆ ಎಂದು ಟೀಕಿಸಿದರು.
ಪ್ರತಾಪ ಸಿಂಹ 'ಬ್ಲೂ ಫಿಲಂ ಹೀರೋ': ಕಾಂಗ್ರೆಸ್ ವಕ್ತಾರನ ಆರೋಪ
ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಸರ್ಕಾರ ಕೇವಲ ಪ್ರಚಾರಕ್ಕಾಗಿ ಮುಖಪುಟದ ಜಾಹೀರಾತುಗಳನ್ನು ನೀಡುತ್ತಿದೆ. ಆದರೆ ಜಾಹೀರಾತಿನ ಉದ್ದೇಶ ಈವರೆಗೆ ಈಡೇರಿಲ್ಲ. ಹಾಸಿಗೆ, ದಿಂಬು, ಗ್ಲೌಸ್, ಉಪಕರಣ ಖರೀದಿಯಲ್ಲೂ ಕೋಟ್ಯಂತರ ಭ್ರಷ್ಟಾಚಾರ ನಡೆದಿದೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ಅಧರ್ಮದ ಕೆಲಸ ಮಾಡುತ್ತಿದೆ. ಮೈಸೂರನ್ನು ಅನಾಥವಾಗಿ ಬಿಡದೆ ಮುಖ್ಯಮಂತ್ರಿಗಳು ಗಮನಹರಿಸಬೇಕು ಎಂದರು.
ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಲ್ಲ
ಸದ್ಯದ ಪರಿಸ್ಥಿತಿಯಲ್ಲಿ ದಸರಾವನ್ನು ಸರಳವಾಗಿ ಆಚರಿಸಬೇಕು. ಸಂಪೂರ್ಣವಾಗಿ ದಸರಾ ಆಚರಿಸದೆ ಇರಬಾರದು. ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಲ್ಲ, ದಸರಾ ನಾಡ ಹಬ್ಬ ಎಂದರು.
ರಾಜಧಾನಿಯಲ್ಲಿ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಪ್ರತಿಕ್ರಿಯಿಸಿ, ಡ್ರಗ್ಸ್ ಮಾಫಿಯಾ ಒಂದು ದೊಡ್ಡ ಇಂಡಸ್ಟ್ರಿ ರೀತಿ ಬೃಹದಾಕಾರವಾಗಿ ಬೆಳೆದಿದೆ. ಈ ಸಂಬಂಧ ನಾನು ಬೆಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದೆ. ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕಿ ಅಂತ ವೈಯಕ್ತಿಕವಾಗಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ನಿಶ್ಚಿತವಾಗಿ ಕೆಲ ಯುವಕರು ಗಾಂಜಾ ಅಫೀಮಿಗೆ ಬಲಿಯಾಗಿದ್ದಾರೆ
ಸಿನಿಮಾ ಇಂಡಸ್ಟ್ರಿಗೂ ಡ್ರಗ್ಸ್ ಮಾಫಿಯಾ ನಂಟು ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಸಿನಿಮಾ ರಂಗದ ನಂಟು ಕಡಿಮೆ. ಆದರೆ ಸಿನಿಮಾ ರಂಗ ಇರಲಿ, ವಿದ್ಯಾರ್ಥಿಗಳಾಗಿರಲಿ ಇದು ಮನುಷ್ಯತ್ವಕ್ಕೆ ಧಕ್ಕೆ ತರುವ ಕೆಲಸ ಎಂದರು. ಕೆ.ಜೆ ಹಳ್ಳಿ ಗಲಭೆಕೋರರು ಗಾಂಜಾ ಸೇವನೆ ಆರೋಪಕ್ಕೆ ಪ್ರತಿಕ್ರಿಯಿಸಿ, ನಿಶ್ಚಿತವಾಗಿ ಕೆಲ ಯುವಕರು ಗಾಂಜಾ ಅಫೀಮಿಗೆ ಬಲಿಯಾಗಿದ್ದಾರೆ ಎಂದರು.
ವಿದ್ಯಾರ್ಥಿಗಳನ್ನು ಡ್ರಗ್ಸ್ ಗೆ ಅಡಿಕ್ಟ್ ಮಾಡಿಸುವ ದೊಡ್ಡ ಮಾಫಿಯಾ ಇದೆ
ಡಿ.ಜೆ ಹಳ್ಳಿ ವಿಚಾರದಲ್ಲಿ ಗಾಂಜಾ ಸೇವಿಸಿರಲಿ, ಬಿಡಲಿ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಶಾಲಾ-ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳನ್ನು ಡ್ರಗ್ಸ್ ಗೆ ಅಡಿಕ್ಟ್ ಮಾಡಿಸುವ ದೊಡ್ಡ ಮಾಫಿಯಾ ಇದೆ. ಪೊಲೀಸರು ಸೀರಿಯಸ್ ಆದರೆ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕಬಹುದು. ಪೊಲೀಸರು ಪ್ರಮಾಣ ಮಾಡಿ ಹೊರಟರೆ ನೂರಕ್ಕೆ ನೂರರಷ್ಟು ಕಡಿವಾಣ ಹಾಕಬಹುದು.
ಡ್ರಗ್ಸ್ ಮಾಫಿಯಾಗೆ ಪೊಲೀಸರ ಕಾವಲಿದೆ
ಪೊಲೀಸರಿಗೆ ಗೊತ್ತಿಲ್ಲದೆ ಯಾವ ದಂಧೆಯೂ ನಡೆಯಲ್ಲ ಎನ್ನುವ ಮೂಲಕ ಡ್ರಗ್ಸ್ ಮಾಫಿಯಾಗೆ ಪೊಲೀಸರ ಕಾವಲಿದೆ ಎಂದು ಪರೋಕ್ಷವಾಗಿ ಆರೋಪಿಸಿದರು. ಕಾಂಗ್ರೆಸ್ ಸತ್ಯಶೋಧನಾ ಸಮಿತಿಯಿಂದ ವರದಿ ಸಲ್ಲಿಕೆಗೆ ಪ್ರತಿಕ್ರಿಯಿಸಿ, ವರದಿ ಸಲ್ಲಿಸಲು ಯಾವುದೇ ವಿಳಂಬ ಮಾಡಿಲ್ಲ. ನಾವು ಒಂದು ತಿಂಗಳೊಳಗೆ ವರದಿ ಪಡೆಯುತ್ತೇವೆ ಎಂದು ಹೇಳಿದ್ದೇವೆ. ಶೀಘ್ರದಲ್ಲೇ ಕೆಪಿಸಿಸಿಗೆ ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಲಿದೆ ಎಂದರು.