ಜಿಟಿ ಹರೀಶ್ ಸ್ಪರ್ಧೆಗೆ ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ವಿರೋಧ!
ಮೈಸೂರು, ಸೆಪ್ಟೆಂಬರ್ 01; ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಜಿ. ಟಿ. ದೇವೇಗೌಡರ ಪುತ್ರ ಹರೀಶ್ ಗೌಡ ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅಪ್ಪ-ಮಗ ಕಾಂಗ್ರೆಸ್ ಸೇರುವ ವಿಚಾರ ಮೈಸೂರು ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಜಿ. ಟಿ. ದೇವೇಗೌಡ ಮಗನ ರಾಜಕೀಯ ಭವಿಷ್ಯಕ್ಕಾಗಿಯೇ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಮುಂದಿನ ಚುನಾವಣೆಯಲ್ಲಿ ಜಿ. ಟಿ. ದೇವೇಗೌಡರು ಚಾಮುಂಡೇಶ್ವರಿಯಲ್ಲಿ ಕಣಕ್ಕಿಳಿದರೆ ಪುತ್ರನಿಗೆ ಕೆ. ಆರ್. ನಗರ ಅಥವ ಚಾಮರಾಜ ಕ್ಷೇತ್ರದಲ್ಲಿ ಟಿಕೆಟ್ ಸಿಗಲಿದೆ ಎಂಬ ಸುದ್ದಿ ಹಬ್ಬಿದೆ.
ಜೆಡಿಎಸ್ ಮುಖಂಡ ಜಿಟಿ ದೇವೇಗೌಡರಿಗೆ ಡಿಸಿಎಂ ಸ್ಥಾನದ ಆಫರ್!
ಇನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಕುರಿತು ಟ್ವೀಟ್ ಮಾಡಿದ್ದು, "ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಜತೆ ಚರ್ಚಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್ ಜತೆಗೆ ಚರ್ಚಿಸುವುದಾಗಿ ತಿಳಿಸಿದ್ದೇನೆ. ಸದ್ಯಕ್ಕೆ ನಡೆದಿರುವುದು ಇಷ್ಟೇ ಬೆಳವಣಿಗೆ. ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಮುಂದಿನ ಬೆಳವಣಿಗೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ಜಿಡಿಟಿ ಕಾಂಗ್ರೆಸ್ಗೆ; ಸಿದ್ದರಾಮಯ್ಯ ಮಹತ್ವದ ಟ್ವೀಟ್!
ಕೆ. ಆರ್. ನಗರ ಕ್ಷೇತ್ರವನ್ನು ಜಿ. ಟಿ. ದೇವೇಗೌಡರ ಪುತ್ರನಿಗೆ ಬಿಟ್ಟುಕೊಡಲು ಸ್ಥಳೀಯ ಮುಖಂಡ ರವಿಶಂಕರ್ ವಿರೋಧ ವ್ಯಕ್ತಪಡಿಸಿದ್ದಾರೆ. "ಯಾರಿಗೂ ಕ್ಷೇತ್ರವನ್ನು ಬಿಟ್ಟುಕೊಡಲ್ಲ. ನಾನೇ 2023ಕ್ಕೆ ಕೆ. ಆರ್. ನಗರ ಶಾಸಕ" ಎಂದು ಅವರು ಹೇಳಿದ್ದಾರೆ.
ಶಾಸಕ ಜಿ.ಟಿ ದೇವೇಗೌಡ ಸವಾಲಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು
ಈಗ ಚಾಮರಾಜ ಕ್ಷೇತ್ರದಲ್ಲಿಯೂ ಸಹ ಜಿ. ಟಿ. ಹರೀಶ್ ಸ್ಪರ್ಧೆಗೆ ವಿರೋಧ ವ್ಯಕ್ತವಾಗುತ್ತಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡ ಕೆ. ಹರೀಶ್ ಗೌಡ ಈ ಕುರಿತು ಮಾತನಾಡಿದ್ದಾರೆ. "ಚಾಮರಾಜದಲ್ಲಿ ನನಗೆ ಟಿಕೆಟ್. ರಾಜಕೀಯದಲ್ಲಿ ತುಂಬಾ ನೋವು ತಿಂದಿದ್ದೀನಿ" ಎಂದು ತಿಳಿಸಿದ್ದಾರೆ.
"15 ವರ್ಷದಿಂದ ನಾನು ಚಾಮರಾಜ ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದೇನೆ. ಕ್ಷೇತ್ರದ ಜನರಿಗೆ ಹರೀಶ್ ಗೌಡ ಯಾರೂ ಅಂತ ತಿಳಿದಿಲ್ಲ. ಜನರ ಸೇವೆಗಾಗಿ ಸರ್ಕಾರಿ ಕೆಲಸವನ್ನು ಬಿಟ್ಟು ಬಂದಿದ್ದೇನೆ. ನನಗೆ ಟಿಕೆಟ್ ಕೈತಪ್ಪುವುದಿಲ್ಲ" ಎಂದು ಕೆ. ಹರೀಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಜಿ. ಟಿ. ದೇವೇಗೌಡರು, "ನಾನು ಕಾಂಗ್ರೆಸ್ಗೆ ಬಂದರೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನಾನು ಕ್ಷೇತ್ರದಲ್ಲಿ ಹಾಲಿ ಶಾಸಕ, ನನ್ನ ಪುತ್ರನಿಗೂ ಟಿಕೆಟ್ ಕೇಳಿದ್ದೇನೆ" ಎಂದು ತಿಳಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಜಿ. ಟಿ. ದೇವೇಗೌಡರು ಕಾಂಗ್ರೆಸ್ನಿಂದ ಚಾಮುಂಡೇಶ್ವರಿಯಲ್ಲಿ ಕಣಕ್ಕಿಳಿದರೆ ಪುತ್ರ ಹರೀಶ್ ಕೆ. ಆರ್. ನಗರ, ಚಾಮರಾಜ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಹೈಕಮಾಂಡ್ ನಾಯಕರು ಅಪ್ಪ-ಮಗ ಇಬ್ಬರಿಗೂ ಟಿಕೆಟ್ ನೀಡಲು ಒಪ್ಪಿಗೆ ನೀಡಲಿದ್ದಾರೆಯೇ? ಕಾದು ನೋಡಬೇಕು.
ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನಗೊಂಡ ಬಳಿಕ ಶಾಸಕ ಜಿ. ಟಿ. ದೇವೇಗೌಡ ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದರು. ಅವರು ಪಕ್ಷ ಬಿಡಲಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಹಬ್ಬಿದ್ದವು. ಕಳೆದ ಮಂಗಳವಾರ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ.
"ಜಿ. ಟಿ. ದೇವೇಗೌಡರು ಪಕ್ಷವನ್ನು ತೊರೆದರೆ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಜೆಡಿಎಸ್ಗೆ ಯಾವ ಶಾಕ್ ಸಹ ಆಗೋಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರು ಕಾಂಗ್ರೆಸ್ ವಲಯದಲ್ಲಿ ಜಿ. ಟಿ. ದೇವೇಗೌಡರ ಆಗಮನದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.