ಮೈಸೂರು ಜಿಪಂನಲ್ಲಿ ಅಧಿಕಾರಕ್ಕಾಗಿ ಜೆಡಿಎಸ್-ಕಾಂಗ್ರೆಸ್ ಕಸರತ್ತು
ಮೈಸೂರು, ಫೆಬ್ರವರಿ 21 : ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಇದೇ ಶನಿವಾರ ನಡೆಯಲಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ಹಾಗೂ ದಳದಲ್ಲಿ ಕಸರತ್ತು ಈಗಾಗಲೇ ಆರಂಭವಾಗಿದೆ.
ಜಿಪಂನಲ್ಲಿ ಪ್ರಸ್ತುತ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿದೆ. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಜಾ.ದಳ, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಈ ಮೈತ್ರಿ ಮುಂದುವರಿಸುವುದಕ್ಕೆ ಪೂರಕವಾಗಿ ರಾಜಕೀಯ ಚಟುವಟಿಕೆ ನಡೆಯುತ್ತಿದೆ.
ಮೈಸೂರು ಜಿ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿ
ಈ ಹಿನ್ನೆಲೆಯಲ್ಲಿ ಜಿಪಂನಲ್ಲಿ ಕೂಡ ಉಭಯ ಪಕ್ಷಗಳೇ ಅಧಿಕಾರ ನಡೆಸುವಂತಾದರೆ ಸೂಕ್ತ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ಚುನಾವಣೆ ಹಿನ್ನೆಲೆ ಸಂಸದ ಧ್ರುವನಾರಾಯಣ್ ನೇತೃತ್ವದಲ್ಲಿ ಸಭೆ ನಡೆಯಿತು.
ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ. ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ. ರಾ ಮಹೇಶ್ ಅವರು ಜಿಪಂ ಅಧ್ಯಕ್ಷರ ಚುನಾವಣೆ ಸಂಬಂಧ ಸಭೆ ನಡೆಸಿ ಚರ್ಚಿಸಿದ್ದಾರೆ. ಆದರೆ ದಳದ ಕೆಲ ಸದಸ್ಯರು ಕಾಂಗ್ರೆಸ್ ಜತೆಗೆ ಮೈತ್ರಿ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದೆ ಎಂಬುದು ಅವರ ಆರೋಪ.
ಅಭಿಪ್ರಾಯ ಸಂಗ್ರಹ
ಸಂಸದ ಧ್ರುವನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಯಿತು. ಬಹುತೇಕ ಮಂದಿ ಕಾಂಗ್ರೆಸ್ ಗೆ ಅಧ್ಯಕ್ಷ ಸ್ಥಾನ ನೀಡುವಂತೆ ಒಕ್ಕೋರಲಿನಿಂದ ಆಗ್ರಹಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷೆ ಹಾಗೂ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪುಷ್ಪಾ ಅಮರನಾಥ್ , ಕೆ ಆರ್ ನಗರ ಕಾಂಗ್ರೆಸ್ ಮುಖಂಡ ರವಿಶಂಕರ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಹಾಜರಿದ್ದರು.
ಸೂಚನೆ ಸಿಗಲಿದೆ
ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ ದೇವೇಗೌಡ , ಸಚಿವ ಸಾ ರಾ ಮಹೇಶ್ ಅವರ ನೇತೃತ್ವದಲ್ಲಿ ಇಂದು ಸಂಜೆ 4ಕ್ಕೆ ಜಾತ್ಯತೀತ ಜನತಾ ದಳದ ಸದಸ್ಯರು ಹಾಗೂ ಮುಖಂಡರ ಸಭೆ ನಡೆಯಲಿದೆ. ಈ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಜಿಪಂನಲ್ಲಿ ಕಾಂಗ್ರೆಸ್- ದಳ ಮೈತ್ರಿ ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂಬ ಸೂಚನೆ ಸಿಗಲಿದೆ.
ಮೈಸೂರು ಜಿಲ್ಲಾ ಪಂಚಾಯತ್ ನಲ್ಲೂ ಮೈತ್ರಿಯಲ್ಲಿ ಬಿರುಕು ಸಾಧ್ಯತೆ!
ಕಳೆದ ಅವಧಿಯಲ್ಲಿಯೂ ಮೈತ್ರಿ
ಜಿಪಂ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದೆ. ಮೈಸೂರಿನಲ್ಲಿ ಕಳೆದ ಅವಧಿಯಲ್ಲಿ ಮೈತ್ರಿಯಾಗಿದ್ದು, ಜಾ.ದಳದ ನಯಿಮಾ ಸುಲ್ತಾನ್ ನಜೀರ್ ಅಹಮದ್ ಅಧ್ಯಕ್ಷರಾಗಿದ್ದು, ಬಿಜೆಪಿಯ ನಟರಾಜ್ ಉಪಾಧ್ಯಕ್ಷರಾಗಿದ್ದರು. ಉಭಯ ಪಕ್ಷಗಳ ಒಪ್ಪಂದದ ಅನ್ವಯ 20 ತಿಂಗಳ ನಂತರ ಅಧ್ಯಕ್ಷರ ರಾಜೀನಾಮೆ ನೀಡಬೇಕಿತ್ತು. ಆದರೆ ಅವರು ಎರಡು ಬಾರಿ ರಾಜೀನಾಮೆ ನೀಡಿ ವಾಪಸ್ ಪಡೆದಿದ್ದರು. ಅಂತಿಮವಾಗಿ 30 ತಿಂಗಳ ಅಧಿಕಾರ ಅನುಭವಿಸಿದ ನಂತರ ರಾಜೀನಾಮೆ ಸಲ್ಲಿಸಿದ್ದರು. ಉಪಾಧ್ಯಕ್ಷ ನಟರಾಜು ಅವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಫೆಬ್ರವರಿ 23ಕ್ಕೆ ಚುನಾವಣೆ
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಾರಾ ನಂದೀಶ್ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇದರ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದ್ದರೂ, ಕಾರಣಾಂತರಗಳಿಂದ ಎರಡು ಬಾರಿ ಮುಂದೂಡಲ್ಪಟ್ಟಿತ್ತು. ಇದೀಗ ಫೆಬ್ರವರಿ 23ಕ್ಕೆ ಚುನಾವಣೆ ನಡೆಯಲಿದೆ.