ಕೈ ಪಾಳಯದಲ್ಲಿ ನಿಲ್ಲದ ಮೈತ್ರಿ ಕಿತ್ತಾಟ: ಮೈಸೂರು ನಗರಾಧ್ಯಕ್ಷರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೆಪಿಸಿಸಿಗೆ ಪತ್ರ
ಮೈಸೂರು, ಮಾರ್ಚ್ 1: ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಗಿದು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ದೋಸ್ತಿ ಮಾಡಿಕೊಂಡು ಅಧಿಕಾರದ ಗದ್ದುಗೆ ಏರಿದ್ದರೂ, ಮೈತ್ರಿ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಉಲ್ಬಣಿಸಿರುವ ಭಿನ್ನಮತ ಮಾತ್ರ ಕಡಿಮೆಯಾಗಿಲ್ಲ.
ಮೈಸೂರು ಮಹಾನಗರ ಪಾಲಿಕೆ ಆಡಳಿತದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನಡುವೆ ಕೊನೆ ಕ್ಷಣದಲ್ಲಿ ಮೈತ್ರಿ ಮಾಡಿಕೊಂಡು, ಪಾಲಿಕೆ ಚುಕ್ಕಾಣಿ ಹಿಡಿಯುವಲ್ಲಿ ಎರಡೂ ಪಕ್ಷಗಳ ನಾಯಕರು ಯಶಸ್ವಿಯಾಗಿದ್ದರು. ಆದರೆ ಇದೇ ಮೈತ್ರಿ ವಿಚಾರ ಉಭಯ ಪಕ್ಷಗಳಲ್ಲಿ ಭಿನ್ನಮತ ಸ್ಪೋಟಕ್ಕೆ ಕಾರಣವಾಗಿದೆ. ಮುಖ್ಯವಾಗಿ ಕಾಂಗ್ರೆಸ್ನಲ್ಲಿ ದೊಡ್ಡಮಟ್ಟದ ಸಂಚಲನ ಮೂಡಿಸಿರುವ ಮೈತ್ರಿ ಗೊಂದಲ ದಿನಕ್ಕೊಂದು ರೂಪ ಪಡೆಯುತ್ತಿದ್ದು, ಸದ್ಯಕ್ಕೆ ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
"ಗಂಡುಮಗು ಆದ್ರೆ ಓಕೆ, ಹೆಣ್ಣುಮಗು ಬೇಡ ಎಂದ್ರೆ ಹೇಗೆ?: ಅಮಾನತು ಮಾಡಿದ್ರೂ ನಾನು ಹೆದರಲ್ಲ"
ಪ್ರಮುಖವಾಗಿ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡು ಮೇಯರ್ ಸ್ಥಾನ ಬಿಟ್ಟುಕೊಟ್ಟು ಹಿರಿಯ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಶಾಸಕ ತನ್ವೀರ್ ಸೇಠ್ ಮೇಲಿನ ಅಸಮಾಧಾನದ ಕಿಚ್ಚು, ಈಗಾಗಲೇ ಕೆಪಿಸಿಸಿ ಅಂಗಳ ತಲುಪಿದೆ. ಇದರ ಬೆನ್ನಲ್ಲೇ ಇದೀಗ, ಮೈಸೂರು ಕಾಂಗ್ರೆಸ್ ನಗರಾಧ್ಯಕ್ಷರ ವಿರುದ್ಧವೂ ಅಸಮಾಧಾನ ವ್ಯಕ್ತವಾಗಿದ್ದು, ಮೈಸೂರು ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಆರ್.ಮೂರ್ತಿ ವಿರುದ್ಧ ಸೂಕ್ತ ಕ್ರಮಕ್ಕೆ ಕೆಪಿಸಿಸಿ ಸದಸ್ಯ ಎನ್.ಭಾಸ್ಕರ್ ಒತ್ತಾಯಿಸಿದ್ದಾರೆ. ""ಮೇಯರ್ ಚುನಾವಣೆ ನಡಾವಳಿಗಳನ್ನು ಬಹಿರಂಗಪಡಿಸಿದ್ದಕ್ಕೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಒಂದು ಗುಂಪಿನ ಜೊತೆಗೆ ಪತ್ರಿಕಾಗೋಷ್ಠಿ ನಡೆಸಿರುವುದು ಸರಿಯಲ್ಲ ಎಂದು ಆರೋಪಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ತನ್ವೀರ್ ಸೇಠ್ ವಿರುದ್ಧ ಧಿಕ್ಕಾರ ಕೂಗಿದ್ದಕ್ಕೆ ನಗರಾಧ್ಯಕ್ಷರೇ ನೇರ ಹೊಣೆ'' ಎಂದು ಕೆಪಿಸಿಸಿ ಸದಸ್ಯ ಎನ್.ಭಾಸ್ಕರ್ ಆರೋಪಿಸಿದ್ದಾರೆ.
ಮೈಸೂರು ಕೈ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ: ಶಾಸಕ ತನ್ವೀರ್ ಸೇಠ್ ಉಚ್ಚಾಟನೆಗೆ ಆಗ್ರಹ
ಅಲ್ಲದೇ, ನಗರಾಧ್ಯಕ್ಷ ಆರ್.ಮೂರ್ತಿ ಅವರು ಕಾಂಗ್ರೆಸ್ ಸಂಸ್ಕೃತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಶಾಸಕ ತನ್ವೀರ್ ಸೇಠ್ ಡೀಲ್ ಮಾಡಿಕೊಂಡು ಜೆಡಿಎಸ್ ಪಕ್ಷಕ್ಕೆ ಮೇಯರ್ ಸ್ಥಾನ ಬಿಟ್ಟುಕೊಟ್ಟಿದ್ದಾರೆಂದು ಹೇಳುವ ಮೂಲಕ ಪಕ್ಷದಲ್ಲಿ ಒಡಕು ಮೂಡಿಸಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಸದಸ್ಯ ಎನ್.ಭಾಸ್ಕರ್ ಅವರು ದೂರು ನೀಡಿ, ಪತ್ರವನ್ನು ಸಹ ಬರೆದಿದ್ದಾರೆ.