ಕಾಂಗ್ರೆಸ್ಗೆ ಚುನಾವಣೆ ಎದುರಿಸುವ ಶಕ್ತಿಯೇ ಇಲ್ಲ: ನಳಿನ್ ಕುಮಾರ್ ಕಟೀಲ್
ಮೈಸೂರು, ಅಕ್ಟೋಬರ್ 15: ಪರಿಶಿಷ್ಟ ಜಾತಿಗೆ ಸೇರಿದ ಶಾಸಕನ ಮನೆಗೆ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ಸಿಗರೇ ಮಾಡಿದ್ದಾರೆ. ಅವರನ್ನು ಬಂಧಿಸಿ ಅಂತ ಹೇಳಲು ಆ ಪಕ್ಷದ ಅಧ್ಯಕ್ಷರಿಗೆ ಆಗುತ್ತಿಲ್ಲ. ಇಂಥವರು ಚುನಾವಣೆಯನ್ನು ಹೇಗೆ ಎದುರಿಸುತ್ತಾರೆ, ಕಾಂಗ್ರೆಸ್ ಗೆ ಚುನಾವಣೆ ಎದುರಿಸುವ ಶಕ್ತಿಯೂ ಇಲ್ಲ ಎಂದು ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.
ರಾಜ್ಯ ಬಿಜೆಪಿ ಪಧಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕಟೀಲ್, ""ಉಪ ಚುನಾವಣೆ ನಡೆಯುವ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಪರ ಒಲವಿದೆ. ಎರಡೂ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ವಿಧಾನ ಪರಿಷತ್ತಿನಲ್ಲೂ ನಾಲ್ಕು ಸ್ಥಾನ ನಮ್ಮದಾಗಲಿದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಸಿದ್ಧತೆಗಳು ಆಗಿವೆ. ಕರ್ನಾಟಕದಲ್ಲಿ 224 ಕ್ಷೇತ್ರ ನಮ್ಮ ಗುರಿ. ಆ ಗುರಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯೋನ್ಮುಖರಾಗುತ್ತೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಭೇಟಿ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ಬಿಗಿ ಬಂದೋಬಸ್ತ್
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಕೇಡರ್ ಗಳೇ ಲೀಡರ್ ಗಳಾಗುವ ದೇಶದ ಏಕೈಕ ಪಕ್ಷ ಬಿಜೆಪಿ ಎಂದು ಬಣ್ಣಿಸಿದರು. ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಹುದ್ದೆ ಸಿಕ್ಕಿರುವುದು ರೋಮಾಂಚನ ಉಂಟು ಮಾಡುತ್ತದೆ ಎಂದರು.
ರಾಮ ಮಂದಿರ ಐದು ಶತಮಾನದ ಕನಸು
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಪಂಚಕ್ಕೇ ಮಾದರಿ ಎನ್ನುವಂತಹ ಆಡಳಿತ ಕೊಡುತ್ತಿದ್ದಾರೆ. ಕಿಸಾನ್ ಸಮ್ಮಾನ್, ಕಾರ್ಮಿಕರ ಪರಿಹಾರ, ವಸತಿ ಯೋಜನೆ, ಪಿಂಚಣಿ, ಸಬ್ಸಿಡಿ ಎಲ್ಲವನ್ನೂ ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದ್ದೇವೆ. ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆ. ರಾಮ ಮಂದಿರ ಐದು ಶತಮಾನದ ಕನಸು. ಕೆಲವರು ನನ್ನ ಹೆಸರಿನಲ್ಲೇ ರಾಮ ಇದೆ ಅಂತ ಎನ್ನುತ್ತಿದ್ದಾರೆ. ಆದರೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಹಕಾರ ನೀಡಿರಲಿಲ್ಲ. ಈಗ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಆಗಿದೆ. ಅದು ಭಾರತದ ಅಸ್ಮಿತೆಯ ಪ್ರತೀಕ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಹಣ ನೇರವಾಗಿ ಫಲಾನುಭವಿ ಖಾತೆ ತಲುಪುತ್ತಿದೆ
ತಡೆಯೊಡ್ಡು, ವಿಳಂಬಿಸು, ದಾರಿ ತಪ್ಪಿಸು ಇದು ಕಾಂಗ್ರೆಸ್ ಆಡಳಿತ ಮಂತ್ರ. ಅಭಿವೃದ್ಧಿಯ ಮಹಾಪರ್ವ ಇದು ಬಿಜೆಪಿ ಆಡಳಿತ ಮಂತ್ರ. 1986 ರ ಕಾಲದಲ್ಲಿ ಕೇಂದ್ರದಿಂದ ಬಂದ ಎಲ್ಲ ಹಣ ಕಳ್ಳರ ಪಾಲಾಗುತ್ತಿತ್ತು. ಈಗ ಫಲಾನುಭವಿಗಳ ಹಣ ನೇರವಾಗಿ ಫಲಾನುಭವಿ ಖಾತೆ ತಲುಪುತ್ತಿದೆ. ಇದು ಪರಿವರ್ತನೆಯ ಕಾಲ ಅಲ್ಲವೇ ಎಂದು ಪ್ರಶ್ನಿಸಿದರು.
ನಮ್ಮ ಸೇನಾನಿಗಳು ಗ್ರೇಟ್
ಅಲೆಗ್ಸಾಂಡರ್ ದಿ ಗ್ರೇಟ್ ಅಂತ ನಮಗೆ ಪಾಠ ಹೇಳಿಕೊಡಲಾಗಿತ್ತು ನಮ್ಮ ಪಠ್ಯ ಕ್ರಮದಲ್ಲಿ. ತನ್ನ ದೇಶದ ಮೇಲೆ ಅಕ್ರಮಣ ಮಾಡಿದವರನ್ನು ಯಾವ ದೇಶವೂ ಗ್ರೇಟ್ ಅನ್ನಲ್ಲ. ಆದರೆ ನಾವು ಅದನ್ನು ಹೇಳುತ್ತಿದ್ದೆವು. ಇದಕ್ಕೆಲ್ಲ ತಿಲಾಂಜಲಿ ಇಟ್ಟು ನಮ್ಮ ರಾಜರನ್ನು ಗೌರವಿಸುತ್ತಿದ್ದೇವೆ. ನಮ್ಮ ಸೇನಾನಿಗಳನ್ನು ಗ್ರೇಟ್ ಎಂದು ಹೇಳಿ ಕೊಡುವ ಹೊಸ ಪಠ್ಯ ನೀತಿ ಜಾರಿ ಮಾಡುತ್ತಿದ್ದೇವೆ ಎಂದು ಸಿ.ಟಿ ರವಿ ಹೇಳಿದರು.
ಕಾಂಗ್ರೆಸ್ ಗೆ ನೈತಿಕತೆ ಎಲ್ಲಿದೆ
ಪ್ರಜಾಪ್ರಭುತ್ವ ಹೆಸರಿನಲ್ಲಿ ವಂಶ ಪಾರಂಪರ್ಯ ರಾಜಕಾರಣ ಮಾಡಲಾಗುತ್ತಿತ್ತು, ಆದರೆ ಬಿಜೆಪಿ ಇದನ್ನು ತಡೆದಿದೆ. ಪ್ರಜಾಪ್ರಭುತ್ವದ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್ ಗೆ ಎಲ್ಲಿದೆ? ಉಳಿದ ಪಕ್ಷಗಳ ಬಗ್ಗೆ ನಾನು ಮಾತಾಡಲ್ಲ. ಏಕೆಂದರೆ ಅವರದು ದೊಡ್ಡ ಗೌಡರು, ಸಣ್ಣ ಗೌಡರು, ಮರಿಗೌಡರು ಅನ್ನುವುದೇ ನೀತಿ. ಬಿಜೆಪಿ ಯಾವತ್ತೂ ಇಂತಹ ರಾಜಕಾರಣ ಮಾಡಲ್ಲ ಎಂದು ಸ್ಪಷ್ಟಪಡಿಸಿದರು. ಸಭೆಯಲ್ಲಿ ಸಚಿವ ಎಸ್.ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಎಂಎಲ್ಸಿ ಎಚ್.ವಿಶ್ವನಾಥ್, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಎಸ್.ಎ ರಾಮದಾಸ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.