ಹುಣಸೂರು ಉಪ ಸಮರದಲ್ಲಿ ಗೆಲುವು; ದೇವೇಗೌಡರ ನೆನೆದ ಕೈ ಅಭ್ಯರ್ಥಿ
ಮೈಸೂರು, ಡಿಸೆಂಬರ್ 9: ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಹುಣಸೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್ ವಿಶ್ವನಾಥ್ ಗೆ ಭಾರೀ ಮುಖಭಂಗವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಜಯಭೇರಿ ಬಾರಿಸಿದ್ದಾರೆ.
ಉಪ ಚುನಾವಣೆ ಘೋಷಣೆಯಾದ ದಿನದಿಂದಲೂ ಗೆಲುವಿಗಾಗಿ ಮೂರು ಪಕ್ಷದ ಅಭ್ಯರ್ಥಿಗಳು ಭಾರೀ ಕಸರತ್ತು ನಡೆಸಿದ್ದರು. ಆದರೆ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿದ್ದ ಬಿಜೆಪಿ ಕನಸು ನುಚ್ಚುನೂರಾಗಿದೆ. ಈ ಕ್ಷೇತ್ರದ ಫಲಿತಾಂಶ ಕೇವಲ ಹುಣಸೂರು ಮಾತ್ರವಲ್ಲದೆ ರಾಜ್ಯದ ಗಮನ ಸೆಳೆದಿತ್ತು.
ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿ
ಜಿದ್ದಾಜಿದ್ದಿನ ಚುನಾವಣಾ ಕಾಳಗದಲ್ಲಿ ಮತದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ 92,725 ಮತಗಳನ್ನು ಪಡೆದರೆ ಇವರಿಗೆ ತೀವ್ರ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಎಚ್.ವಿಶ್ವನಾಥ್ 52,998 ಹಾಗೂ ಜೆಡಿಎಸ್ ನ ದೇವರಹಳ್ಳಿ ಸೋಮಶೇಖರ್ 32,895 ಮತ ಪಡೆಯಲಷ್ಟೇ ಶಕ್ತರಾದರು. ಇದರೊಂದಿಗೆ ಉಪ ಸಮರದಲ್ಲಿ ಮೇಲುಗೈ ಸಾಧಿಸಿದ ಕೈ ಅಭ್ಯರ್ಥಿ ಮಂಜುನಾಥ್ 39,727 ಮತಗಳ ಅಂತರದಲ್ಲಿ ಗೆಲುವಿನ ನಗೆಬೀರಿದರು. ಆರಂಭದ 2 ಸುತ್ತುಗಳಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಮುನ್ನಡೆ ಸಾಧಿಸಿದರು. ಆದರೆ ನಂತರದಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ಸು ಕಂಡ ಎಚ್.ಪಿ.ಮಂಜುನಾಥ್ ನಂತರದ ಎಲ್ಲಾ ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.
ಹುಣಸೂರು ವಿಧಾನಸಭೆ ಚುನಾವಣೆ: ಎಚ್. ವಿಶ್ವನಾಥ್ಗೆ ಸೋಲಿನ ಕಹಿ
ದೇವೇಗೌಡರ ನೆನೆದ ಕಾಂಗ್ರೆಸ್ ಅಭ್ಯರ್ಥಿ
ನನ್ನ ಗೆಲುವಿಗೆ ಹುಣಸೂರು ಕ್ಷೇತ್ರದ ಮತದಾರರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವ ಜಿ.ಟಿ ದೇವೇಗೌಡ ಹಾಗೂ ಅವರ ಪುತ್ರ ಹರೀಶ್ ಗೌಡ ಕಾರಣರಾಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಹೇಳಿದ್ದಾರೆ. "ಎಚ್. ವಿಶ್ವನಾಥ್ ಹುಣಸೂರು ಶಾಸಕರಾಗಿ ಆಯ್ಕೆಯಾದ ನಂತರ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಇದರ ಪರಿಣಾಮ ಹುಣಸೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದವು. ನಾನು ಈ ಮೊದಲು ಶಾಸಕನಾಗಿದ್ದಾಗ ಕೈಗೆತ್ತಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದವು.ಇದೇ ಕಾರಣದಿಂದ ಜನರು ವಿಶ್ವನಾಥ್ ಅವರನ್ನು ಸೋಲಿಸಿ, ನನ್ನನ್ನು ಆಯ್ಕೆ ಮಾಡಿದ್ದಾರೆ" ಎಂದು ಗೆಲುವಿಗೆ ಸಂತಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಹುಣಸೂರು ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸುತ್ತೇನೆ. ಜನರ ಸಮಸ್ಯೆಗಳನ್ನು ನಿವಾರಿಸಲು ಮುಂದಾಗುತ್ತೇನೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ
ಮತ ಎಣಿಕೆ ಪ್ರಕ್ರಿಯೆ ಆರಂಭದಿಂದಲ್ಲೂ ಗೆಲುವಿನ ವಿಶ್ವಾಸದಲ್ಲಿದ್ದ ಕೈ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿತ್ತು. ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ .ಮಂಜುನಾಥ್ ಗೆಲುವಿಗೆ ಸಂಭ್ರಮಿಸಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೇವಲ ಹುಣಸೂರಿನಲ್ಲಿ ಮಾತ್ರವಲ್ಲದೇ ಮೈಸೂರಿನಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮೈಸೂರಿನ ರೈಲ್ವೆ ನಿಲ್ದಾಣ ಹತ್ತಿರವಿರುವ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಹೊಡೆದು ಸಂಭ್ರಮಿಸಿದರು.
ರಿಲ್ಯಾಕ್ಸ್ ಮೂಡಿನಲ್ಲಿ ಕೈ ಅಭ್ಯರ್ಥಿ; ದ್ವೇಷದ ರಾಜಕಾರಣಕ್ಕೆ ಬೇಸರ
ದೇವರಿಗೆ ನಮನ ಸಲ್ಲಿಸಿದ ಕೈ ಅಭ್ಯರ್ಥಿ
ಭಾರೀ ಪೈಪೋಟಿಯಿಂದ ಕೂಡಿದ್ದ ಉಪ ಸಮರದಲ್ಲಿ ಗೆಲುವು ನಿಚ್ಚಳವಾಗುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಸಾಯಿಬಾಬಾ ಮಂದಿರಕ್ಕೆ ತೆರಳಿ, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.