ಉಪಚುನಾವಣೆ ಗೆಲ್ಲುವ ಭ್ರಮೆಯಲ್ಲಿ ಕಾಂಗ್ರೆಸ್ - ಬಿಎಸ್ವೈ
ನಂಜನಗೂಡು ಹಾಗೂ ಗುಂಡ್ಲುಪೇಟೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಣ ಬಲ ಹಾಗೂ ಜಾತಿಬಲದಿಂದ ಗೆಲ್ಲುವ ಭ್ರಮೆಯಲ್ಲಿದೆ. ಆದರೆ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ - ಬಿ ಎಸ್ ಯಡಿಯೂರಪ್ಪ
ಮೈಸೂರು, ಮಾರ್ಚ್ 17: ನಂಜನಗೂಡು ಹಾಗೂ ಗುಂಡ್ಲುಪೇಟೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಣ ಬಲ ಹಾಗೂ ಜಾತಿಬಲದಿಂದ ಗೆಲ್ಲುವ ಭ್ರಮೆಯಲ್ಲಿದೆ. ಆದರೆ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. [ನಂಜನಗೂಡು ಉಪಚುನಾವಣೆ: ಪಕ್ಷೇತರರಿಂದ ನಾಮಪತ್ರ ಸಲ್ಲಿಕೆ]
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಯಡಿಯೂರಪ್ಪ ಶುಕ್ರವಾರ ಭೇಟಿ ನೀಡಿದರು. ಈ ಸಂದರ್ಭ ಸುತ್ತೂರು ಶ್ರೀಗಳೊಂದಿಗೆ ಕುಶಲೋಪರಿ ಮಾತುಕತೆ ನಡೆಸಿ ನಂತರ ಮಾಧ್ಯಮಗಳ ಜತೆ ಮಾತನಾಡಿದರು. [ನಂಜನಗೂಡು ಉಪಚುನಾವಣೆ: ಕದನ ಕಲಿಗಳಿಗೆ ಪ್ರತಿಷ್ಠೆಯ ಕಣ]
ಸಿಬಿಐ ತನಿಖೆಗೆ ಕೊಟ್ಟರೆ ಬಣ್ಣ ಬಯಲು
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಯಡಿಯೂರಪ್ಪ, ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಕಾಣಿಕೆ ವಿಚಾರವನ್ನು ಸಿಬಿಐ ತನಿಖೆಗೆ ವಹಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಣ್ಣ ಬಯಲಾಗಲಿದೆ. ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಮಾಡಿರುವ ಆರೋಪ ಸತ್ಯಾಂಶದಿಂದ ಕೂಡಿದೆ ಎಂದು ಹೇಳಿದರು.
ಕಲಾಪಕ್ಕೆ ಅಡ್ಡಿ
"ಇದೇ ಕಾರಣಕ್ಕಾಗಿ ಡೈರಿಯಲ್ಲಿದ್ದ ಮಾಹಿತಿ ಯಡಿಯೂರಪ್ಪಗೆ ಹೇಗೆ ಗೊತ್ತಾಯಿತು ಎಂದು ಪ್ರಶ್ನೆ ಮಾಡುತ್ತಿದ್ದಾರೆ," ಎಂದರು.
ಇನ್ನು ವಿಧಾನಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿ ಕಲಾಪಕ್ಕೆ ಅಡ್ಡಿ ಪಡಿಸುತ್ತಿದೆ ಎಂಬ ಪ್ರಶ್ನೆಗೆ "ಲೋಕಸಭೆಯ ಅಧಿವೇಶನದ ವೇಳೆ ಕಾಂಗ್ರೆಸ್ ನ ಸದಸ್ಯರು ಮಾಡುತ್ತಿರುವುದೇನು ?" ಎಂದು ಪತ್ರಕರ್ತರಿಗೇ ಮರು ಪ್ರಶ್ನೆ ಹಾಕಿದರು.
ನಿರಂಜನ್ ಮೇಲೆ ಅನುಕಂಪವಿರಲಿ
ಉಪಚುನಾವಣೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು ಗುಂಡ್ಲುಪೇಟೆ ಕ್ಷೇತ್ರದ ಮತದಾರರು ಅನುಕಂಪ ತೋರಬೇಕಿರುವುದು ಬಿಜೆಪಿ ಅಭ್ಯರ್ಥಿ ನಿರಂಜನ್ ಮೇಲೆ. ದಿವಂಗತ ಎಚ್.ಎಸ್. ಮಹದೇವ ಪ್ರಸಾದ್ ಅವರಿಗೆ 22 ವರ್ಷಗಳ ಕಾಲ ಅಧಿಕಾರ ನೀಡಿದ್ದೀರಿ. ನಿರಂಜನ್ ಎರಡು ಬಾರಿ ಸೋತಿದ್ದು, ಅವರ ತಂದೆ ಕೂಡ ಎರಡು ಬಾರಿ ಸೋತಿದ್ದಾರೆ. ಹೀಗಾಗಿ ನಿರಂಜನ್ ಮೇಲೆ ಅನುಕಂಪ ತೋರಿಸಿ ಮತ ಹಾಕಬೇಕಿದೆ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಗೆಲ್ಲುವ ಭ್ರಮೆ
ಕಾಂಗ್ರೆಸ್ ಹೆಚ್ಚು ಸಚಿವರು, ಶಾಸಕರನ್ನು ಪ್ರಚಾರಕ್ಕೆ ಕಳುಹಿಸಿದರೆ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ. ಕಾಂಗ್ರೆಸ್ ಎರಡೂ ಕ್ಷೇತ್ರದಲ್ಲಿ ಹಣ ಬಲ ಹಾಗೂ ಜಾತಿಬಲದಿಂದ ಗೆಲ್ಲುವ ಭ್ರಮೆಯಲ್ಲಿದೆ. ಆದರೆ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದ್ವೇಷದ ರಾಜಕಾರಣ
ಸರ್ಕಾರ ನಂಜನಗೂಡಿಗೆ 500 ಕೋಟಿಯಷ್ಟು ಅನುದಾನ ನೀಡಿದೆ. ಆದರೆ ಗುಂಡ್ಲುಪೇಟೆಗೆ ಯಾವುದೇ ಅನುದಾನ ನೀಡಿಲ್ಲ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಅಂತ ಇದರಲ್ಲೇ ತಿಳಿಯುತ್ತದೆ. ಸರ್ಕಾರದ ವೈಫಲ್ಯಗಳನ್ನು ಇಟ್ಟುಕೊಂಡು ನಾವು ಚುನಾವಣೆ ಎದುರಿಸುತ್ತೇವೆ ಎಂದು ಅವರು ತಿಳಿಸಿದರು.