ಮೈಸೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಕಾಂಗ್ರೆಸ್ – ಜೆಡಿಎಸ್ ಮುಖಂಡರು
ಮೈಸೂರು, ಏಪ್ರಿಲ್ 13 : ಬಹುದಿನಗಳಿಂದ ಕಾಂಗ್ರೆಸ್ ಗೆ ತಲೆ ನೋವಾದ ಜೆಡಿಎಸ್ ಮುನಿಸು ನಿನ್ನೆ ಮೈಸೂರಿನಲ್ಲಿ ಸಮಾವೇಶದಲ್ಲಿ ಅಲ್ಪ ಪ್ರಮಾಣಕ್ಕೆ ಕಳಚಿದಂತೆ ಕಂಡಿತು.
ಹೌದು ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಪರಸ್ಪರ ಕೈಹಿಡಿದುಕೊಂಡು ಒಗ್ಗಟ್ಟಿನ ಮಂತ್ರ ಜಪಿಸಿದರು.
ಜಂಟಿ ಪ್ರಚಾರ ಸಮಾವೇಶ: ಬೆಂಗಳೂರಲ್ಲಿ ದೋಸ್ತಿಗಳ ಶಕ್ತಿ ಪ್ರದರ್ಶನ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಪರ ಪ್ರಚಾರಕ್ಕೆ ಆಯೋಜಿಸಿದ್ದ ಜೆಡಿಎಸ್-ಕಾಂಗ್ರೆಸ್ ಜಂಟಿ ಸಮಾವೇಶದಲ್ಲಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಒಳಗೊಂಡಂತೆ ಉಭಯ ಪಕ್ಷಗಳ ಮುಖಂಡರು ಪಾಲ್ಗೊಂಡರು.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ನಮ್ಮ ಉದ್ದೇಶ
ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿ, ಕೋಮುವಾದಿ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದ್ದೇವೆ. ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಸುವ ಗುರಿಯೊಂದಿಗೆ ಲೋಕಸಭೆ ಚುನಾವಣೆಯನ್ನು ಜತೆಯಾಗಿ ಎದುರಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಟ್ಟ ಆಡಳಿತ ವ್ಯವಸ್ಥೆಯನ್ನು ತೊಡೆ ದುಹಾಕಬೇಕೆಂಬ ನಿರ್ಣಯ ಕೈಗೊಂಡು ಒಟ್ಟಾಗಿದ್ದೇವೆ. ಜಿ.ಟಿ.ದೇವೇಗೌಡ ಒಳಗೊಂಡಂತೆ ಎಲ್ಲರೂ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡಲಿದ್ದಾರೆ ಎಂದರು.
ದೇಶದ ಹಿತ ಕಾಪಾಡಲು ಜೊತೆಗಿದ್ದೇವೆ
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನೀವು ಎಚ್.ಡಿ.ದೇವೇಗೌಡರ ಜತೆ ಕೈಜೋಡಿಸಿದ್ದು ಏಕೆ ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದಾರೆ. ನಾವಿಬ್ಬರು ಒತೆಯಾಗಿ ಮುಂದಡಿ ಇಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಅವರಿಗೆ ಉತ್ತರಿಸಿದ್ದೇನೆ. ದೇಶದ ಹಿತ ಕಾಪಾಡಲು ಜತೆಯಾಗಿದ್ದೇವೆ. ಇದರಲ್ಲಿ ವಿಶೇಷವಾದುದು ಏನೂ ಇಲ್ಲ. ಮೋದಿ ಆಡಳಿತದ ಐದು ವರ್ಷಗಳಲ್ಲಿ ದಲಿತರು, ಅಲ್ಪ ಸಂಖ್ಯಾತರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಗೋರಕ್ಷಣೆ ಹೆಸರಿನಲ್ಲಿ ಹಲವು ದಲಿತರು ಮತ್ತು ಮುಸ್ಲಿಮರ ಹತ್ಯೆ ನಡೆದಿದೆ. ಪ್ರಜಾಪ್ರಭುತ್ವ ಇದ್ದರೆ ಮಾತ್ರ ಈ ದೇಶಕ್ಕೆ ಉಳಿಗಾಲವಿದೆ. ಮೋದಿ ಮತ್ತೆ ಪ್ರಧಾನಿಯಾದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಕಾದಿದೆ ಎಂದು ಎಚ್ಚರಿಸಿದರು.
ನಾಗಮಂಗಲದ ಜಂಟಿ ಸಮಾವೇಶದಲ್ಲಿ ಚೆಲುವಣ್ಣ ಗೈರು: ಗೌಡ್ರು ಹೇಳಿದ್ದೇನು?
ಮೋದಿ ಚೌಕೀದಾರ್ ಅಲ್ಲ, ಭ್ರಷ್ಟಾಚಾರದ ಭಾಗೀದಾರ್
ಮೋದಿ ಸಾಧನೆ. ಮೋದಿ ಚೌಕಿದಾರ್ ಅಲ್ಲ, ಭ್ರಷ್ಟಾಚಾರದಲ್ಲಿ ಬಾಗೀದಾರ್. ಬಾಯಿ ಬಡಾಯಿ, ಸಾಧನೆ ಶೂನ್ಯ. ಚುನಾವಣೆ ವೇಳೆ ಕಾಂಗ್ರೆಸ್-ಜೆಡಿಎಸ್ ಮುಖಂಡರ ಮೇಲೆ ಐಟಿ ದಾಳಿ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಮನೆಯಲ್ಲಿ ಹಣವಿಲ್ಲವೇ? ಶಾಸಕರಿಗೆ ಹಣದ ಆಮಿಷ ನೀಡಿದ್ದರ ವಿರುದ್ಧ ಪೊಲೀಸರು, ಐಟಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಾನು ಮುಖ್ಯ ಮಂತ್ರಿಯಾಗಿದ್ದಾಗ ಚುನಾವಣಾ ಪೂರ್ವದಲ್ಲಿ ನೀಡಿದ್ದ 165 ಭರವಸೆಗಳನ್ನೂ ಈಡೇರಿಸಿದ್ಧೇನೆ. ಮೋದಿ ಹೇಳಿದ್ದರಲ್ಲಿ ಒಂದೂ ಮಾಡಿಲ್ಲ. ಮೋದಿ ಮಹಾನ್ ಸುಳ್ಳುಗಾರ. ಬಿಟ್ಟರೆ ಸಂಸದ ಪ್ರತಾಪ ಸಿಂಹ 2ನೇ ಸುಳ್ಳುಗಾರ. ಕಾಂಗ್ರೆಸ್ ಮಾಡಿದ ಕೆಲಸವನ್ನೆಲ್ಲಾ ತನ್ನದೆಂದು ಪುಸ್ತಕದಲ್ಲಿ ಪ್ರಕಟಿಸಿದ್ದಾರೆ ಎಂದು ಏಕವಚನದಲ್ಲೇ ಮೋದಿ ಹಾಗೂ ಪ್ರತಾಪ ಸಿಂಹರನ್ನು ಸಿದ್ದರಾಮಯ್ಯ ಜರಿದರು.
ಕಾಂಗ್ರೆಸ್ , ಜೆಡಿಎಸ್ ನಾಯಕರಿಗೆ ಹಣದ ಆಮಿಷ
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಹಣದ ಆಮಿಷ ಒಡ್ಡಿ ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಲೇ ಇದೆ. ಅವರ ಯಾವುದೇ ಕುತಂತ್ರವೂ ಫಲಿಸದು. ಸಮ್ಮಿಶ್ರ ಸರ್ಕಾರ ಐದು ವರ್ಷವೂ ಆಡಳಿತ ನಡೆಸಲಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಮೈತ್ರಿ ಸರ್ಕಾರವನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಪಾಲ್ಗೊಂಡಿರಲಿಲ್ಲ. ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್, ಸಚಿವ ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಸದಸ್ಯರಾದ ಸಿ.ಎಂ.ಇಬ್ರಾಹಿಂ, ಧರ್ಮಸೇನಾ, ಎಐಸಿಸಿ ಕಾರ್ಯದರ್ಶಿ ವಿಷ್ಣುನಾದನ್, ಶಾಸಕರಾದ ತನ್ವೀರ್ ಸೇಠ್, ಯತೀಂದ್ರ ಸಿದ್ದರಾಮಯ್ಯ, ಅಶ್ವಿನ್ ಕುಮಾರ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮೇಯರ್ ಪುಷ್ಪಲತಾ ಜಗನ್ನಾಥ್ ಸೇರಿದಂತೆ ಕಾಂಗ್ರೆಸ್ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.