ತಿ.ನರಸೀಪುರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಹೆಚ್ಚಿದ ಕೈ-ಕಮಲ ಆಕಾಂಕ್ಷಿಗಳು
ಮೈಸೂರು, ನವೆಂಬರ್27: ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ತಿ.ನರಸೀಪುರ ವಿಧಾನಸಭಾ ಕ್ಷೇತ್ರ ಈ ಬಾರಿ ಗಮನಸೆಳೆಯುತ್ತಿದೆ. ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಾ. ಹೆಚ್. ಸಿ. ಮಹದೇವಪ್ಪ ಅವರು ಕಳೆದ ಬಾರಿಯ ಸೋಲಿನ ಆಘಾತದಿಂದ ಇನ್ನೂ ಹೊರ ಬಂದಂತೆ ಕಾಣುತ್ತಿಲ್ಲ.
ತಾನು ಸ್ಪರ್ಧಿಸದೇ ಮಗ ಸುನೀಲ್ ಬೋಸ್ ಅವರಿಗೆ ಕ್ಷೇತ್ರ ಬಿಟ್ಟು ಕೊಟ್ಟು ಮಗನ ರಾಜಕೀಯ ಭವಿಷ್ಯಕ್ಕೆ ನೀರೆರೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹಾಗೆಂದು ಅವರು ಕೂಡ ಸ್ಪರ್ಧೆಯ ಆಕಾಂಕ್ಷಿಯೆ ಆಗಿದ್ದಾರೆ.
ಗುಜರಾತ್ ಚುನಾವಣೆ: ಸೂರತ್ನಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ, ಆಪ್ಗೆ ಬೆಂಬಲ
ಕಳೆದ ಚುನಾವಣೆಯ ಸೋಲಿನ ಬಳಿಕ ಪಕ್ಷ ಚಟುವಟಿಕೆಯಲ್ಲಿ ಅಷ್ಟೇನು ಕಾಣಿಸಿಕೊಳ್ಳದ ಮಹದೇವಪ್ಪ ಅವರು ಚುನಾವಣೆಗೆ ಇನ್ನು ಐದಾರು ತಿಂಗಳು ಇರುವಾಗ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ಗಮನಿಸಿದರೆ ಮತ್ತೆ ತಿ.ನರಸೀಪುರದಲ್ಲಿ ಜೆಡಿಎಸ್ ಅನ್ನು ಬದಿಗೆ ಸರಿಸಿ ಕಾಂಗ್ರೆಸ್ ಅನ್ನು ಪ್ರತಿಷ್ಠಾಪಿಸಲೇ ಬೇಕೆಂಬ ಹಠಕ್ಕೆ ಬಿದ್ದಂತೆ ಕಾಣಿಸುತ್ತಿದೆ.
ಚುನಾವಣೆ ಅಂಗಳಕ್ಕಿಳಿದ ಸುನೀಲ್ ಬೋಸ್
ಡಾ. ಹೆಚ್. ಸಿ. ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರು ಕೂಡ ಈಗ ಅಂಗಳಕ್ಕೆ ಇಳಿದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಯಾರಿಗೆ ಕಾಂಗ್ರೆಸ್ನಿಂದ ಟಿಕೆಟ್ ಸಿಗುತ್ತದೋ ಗೊತ್ತಿಲ್ಲ. ಕೊನೆಗೆ ಮಹದೇವಪ್ಪ ಅವರಿಗೆ ಟಿಕೆಟ್ ನೀಡಿ ಸ್ಪರ್ಧಿಸುವಂತೆ ಕೈ ನಾಯಕರು ಆದೇಶ ಹೊರಡಿಸಿದರೂ ಅಚ್ಚರಿಯಿಲ್ಲ.
ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಬಹಳಷ್ಟು ಬೆಳವಣಿಗೆ ನಡೆದಿದೆ. ಬಹುಶಃ ಕಳೆದ ಐದು ವರ್ಷಗಳಲ್ಲಿ ಮತದಾರರ ಸೆಳೆಯುವ ಮತ್ತು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದರೆ ಒಳಿತಾಗುತ್ತಿತ್ತು. ಆದರೆ ಅದ್ಯಾವುದೂ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ನ ನಾಯಕರಿಂದ ಆಗಿಲ್ಲ. ಹೀಗಾಗಿ ಈ ಬಾರಿ ಹಾಲಿ ಶಾಸಕ ಅಶ್ವಿನ್ ಕುಮಾರ್ ವಿರುದ್ಧ ಗೆಲುವು ಅಷ್ಟು ಸುಲಭವಲ್ಲ ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲದ ವಿಚಾರವಲ್ಲ.
ಜೆಡಿಎಸ್ನಿಂದ ಮತ್ತೆ ಅಶ್ವಿನ್ ಕುಮಾರ್ ಸ್ಫರ್ಧೆ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್ನಲ್ಲಿ ಹಾಲಿ ಶಾಸಕ ಅಶ್ವಿನ್ ಕುಮಾರ್ ಅವರಿಗೆ ಟಿಕೆಟ್ ಪಕ್ಕಾ ಆಗಿರುವುದರಿಂದ ಜೆಡಿಎಸ್ನಲ್ಲಿ ಯಾವುದೇ ಗೊಂದಲ ಕಾಣಿಸುತ್ತಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪರಿಸ್ಥಿತಿ ಹಾಗಿಲ್ಲ. ಅಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಕಳೆದ ಚುನಾವಣೆಯನ್ನು ಗಮನಿಸಿದರೆ ಈ ಕ್ಷೇತ್ರದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಆದರೂ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಅಚ್ಚರಿ ಮೂಡಿಸಿದೆ.
ಚುನಾವಣೆಯಲ್ಲಿ ಸ್ಫರ್ಧಿಸಲು ಬಿಜೆಪಿಗರ ದಂಡು
ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಬಿಜೆಪಿಯಿಂದ ಕಣಕ್ಕಿಳಿಯಲು ಮಾಜಿ ಶಾಸಕ ಎಲ್.ಎನ್. ಭಾರತೀಶಂಕರ್, ನಿಲಸೋಗೆಯ ಬಿಜೆಪಿ ಮುಖಂಡ ದಿ.ಪುಟ್ಟಬಸವಯ್ಯ ಸೋದರ ಸಂಬಂಧಿ ವೈದ್ಯ ಡಾ.ರೇವಣ್ಣ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬೆಂಬಲಿತ ಕನಕಪುರ ಎಸ್.ಅರವಿಂದ, ಸಾಮ್ರಾಟ್ ಸುಂದರೇಶನ್ ಮತ್ತು ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಪುತ್ರಿ ಪೂರ್ಣಿಮಾ ಪ್ರಸಾದ್ ಹೀಗೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಸುನೀಲ್ ಬೋಸ್ಗೆ ಟಿಕೆಟ್ ಸಿಗುತ್ತಾ..?
ಕಾಂಗ್ರೆಸ್ನಲ್ಲಿ ಪ್ರಫುಲ್ ಚಂದ್ರ, ಯುವ ಮುಖಂಡ ನೂತನ್, ಡಾ.ಪುಷ್ಪ ಅಮರ್ ನಾಥ್ , ಮೂಗೂರು ಚಿನ್ನಸ್ವಾಮಿ ಹೀಗೆ ಹಲವರು ಸ್ಪರ್ಧಾ ಆಕಾಂಕ್ಷಿಗಳಾಗಿದ್ದಾರೆ. ಇವರ ಪೈಕಿ ಸುನೀಲ್ ಬೋಸ್ ಅವರಿಗೆ ಟಿಕೆಟ್ ಸಿಗುತ್ತಾ..? ಮಗ ಎಂಎಲ್ಎ ಆಗುವ ತಂದೆ ಮಹದೇವಪ್ಪ ಅವರ ಬಯಕೆ ಈಡೇರುತ್ತಾ ಗೊತ್ತಿಲ್ಲ. ಕಳೆದ ಬಾರಿ ಮಗ ಸುನೀಲ್ ಬೋಸ್ ಅವರನ್ನು ನಂಜನಗೂಡು ಅಥವಾ ವರುಣಾದಿಂದ ಕಣಕ್ಕಿಳಿಸಬೇಕೆಂದು ಬಯಸಿದ್ದರು. ಈ ಬಾರಿ ತಾವು ಸ್ಪರ್ಧಿಸುತ್ತಿದ್ದ ಕ್ಷೇತ್ರವನ್ನೇ ಬಿಟ್ಟು ಕೊಡುವ ನಿರ್ಧಾರಕ್ಕೆ ಬಂದಿದ್ದಾರೆ.
ಜೆಡಿಎಸ್ಗೆ ಪ್ರಬಲ ಪೈಪೋಟಿ ನೀಡಲು ಬಿಜೆಪಿ ಸಜ್ಜು
ಕ್ಷೇತ್ರದ ಕಾಂಗ್ರೆಸ್ನಲ್ಲಿ ನಾಯಕರ ನಡುವೆ ಶೀತಲ ಸಮರವಿದೆ. ಹೀಗಾಗಿ ಕಾಂಗ್ರೆಸ್ನಿಂದ ಕಣಕ್ಕೆ ಯಾರನ್ನು ಇಳಿಸುತ್ತಾರೆ ಎಂಬುದರ ಮೇಲೆ ಬಿಜೆಪಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಈ ಬಾರಿ ಪ್ರಬಲ ಪೈಪೋಟಿ ನೀಡಲೇ ಬೇಕೆಂಬುದು ಬಿಜೆಪಿ ನಾಯಕರ ಇರಾದೆಯಾಗಿರುವುದರಿಂದ ಕೊನೆಗಳಿಗೆಯಲ್ಲಿ ಗೆಲ್ಲುವ ಕುದುರೆಯನ್ನು ತಂದು ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಮೂರು ಪಕ್ಷಗಳಿಗೂ ಗೆಲುವು ಅಗತ್ಯವಾಗಿರುವುದರಿಂದ ಗೆಲುವಿಗಾಗಿ ಏನೆಲ್ಲ ತಂತ್ರಗಳನ್ನು ಮಾಡಬಹುದೋ ಅದೆಲ್ಲವನ್ನು ಮಾಡಲು ಮೂರು ಪಕ್ಷಗಳು ತಯಾರಾಗಿವೆ. ಆದರೆ ಸ್ಪರ್ಧಿಸುವ ಅಭ್ಯರ್ಥಿಗಳು ಯಾರಿರಬಹುದು ಎಂಬುದೇ ಜನರಲ್ಲಿರುವ ಕುತೂಹಲವಾಗಿದೆ.