ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ ನಾಳೆಯೇ ತೆರೆ ಬೀಳಲಿದೆ
ಮೈಸೂರು, ಜೂನ್ 15: "ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಎಲ್ಲಾ ಗೊಂದಗಳಿಗೆ ನಾಳೆ (ಬುಧವಾರ) ತೆರೆ ಬೀಳಲಿದೆ,'' ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೆಲವರು ನಾಯಕತ್ವ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳಿಗೂ ನಾಳೆ ತೆರೆ ಬೀಳಲಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬರುತ್ತಿದ್ದು, ಅವರು ಎಲ್ಲರಿಗೂ ತಿಳಿ ಹೇಳಲಿದ್ದಾರೆ,'' ಎಂದರು.
ನಾಯಕತ್ವ ಬದಲಾವಣೆಯ ಗುಸುಗುಸು ನಡುವೆ ಬಿಎಸ್ವೈ ಭರ್ಜರಿ ರಣತಂತ್ರ
"ಪಕ್ಷದಲ್ಲಿ ಗೊಂದಲಗಳಿದ್ದರೆ ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕು, ಆ ನಿಟ್ಟಿನಲ್ಲಿ ಅರುಣ್ ಸಿಂಗ್ ಸೂಚನೆ ನೀಡಲಿದ್ದಾರೆ. ಹೀಗಾಗಿ ನಾಯಕತ್ವ ಬದಲಾವಣೆ ವಿಷಯದ ಕುರಿತಂತೆ ಪಕ್ಷದಲ್ಲಿರುವ ಎಲ್ಲಾ ಗೊಂದಲಗಳಿಗೆ ಬುಧವಾರವೇ ತೆರೆ ಬೀಳುವ ಸಾಧ್ಯತೆ ಇದೆ.''
ಕೆಲವು ಜನ ಹೊರಗಿನಿಂದ ಬಂದಿದ್ದರಿಂದ ಸಮಸ್ಯೆ ಆಗಿದೆ ಎಂಬ ಕೆ.ಎಸ್ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ. ಪಾಟೀಲ್, "17 ಜನ ಬಿಜೆಪಿಗೆ ಬಂದ ಕಾರಣದಿಂದ ಸರ್ಕಾರ ಬಂದಿದೆ. ಸರ್ಕಾರ ಬಂದಿರುವ ಕಾರಣ ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ. ಈಶ್ವರಪ್ಪ ಆ ರೀತಿ ಹೇಳಿಕೆ ಕೊಟ್ಟಿದ್ದರೆ ಅದು ಸರಿಯಲ್ಲ. ಅವರು ಆ ರೀತಿ ಮಾತನಾಡಿಲ್ಲ ಎಂದುಕೊಳ್ಳುತ್ತೇನೆ,'' ಎಂದು ತಿರುಗೇಟು ನೀಡಿದರು.
ಇದೇ ವೇಳೆ ಶಾಸಕ ಮುನಿರತ್ನ ಒಂದು ವಾರದಲ್ಲಿ ಸಚಿವರಾಗುತ್ತಾರೆ ಎಂಬ ವಿ. ಸೋಮಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡದ ಅವರು, "ನನಗೆ ಈ ವಿಚಾರ ಗೊತ್ತಿಲ್ಲ. ಆದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದು, ಅವರಿಗೂ ಸಚಿವ ಸ್ಥಾನ ಸಿಗಬೇಕಿದೆ,'' ಎಂದಷ್ಟೇ ಹೇಳಿದರು.