ಬಹುರೂಪಿ ಬೆನ್ನಲ್ಲೇ ರಂಗಾಯಣದ ಹಾಲಿ-ಮಾಜಿ ನಿರ್ದೇಶಕರ ತಿಕ್ಕಾಟ
ಮೈಸೂರು, ಫೆಬ್ರವರಿ 13: ಪ್ರತಿಷ್ಠಿತ ರೆಪರ್ಟರಿ ರಂಗಾಯಣದ ಪ್ರಮುಖ ಕಾರ್ಯಕ್ರಮ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಬೆನ್ನಲ್ಲೇ ಟಿಪ್ಪು ವಿವಾದಕ್ಕೆ ಸಂಬಂಧಿಸಿದಂತೆ ರಂಗಾಯಣದ ಹಾಲಿ ಹಾಗೂ ಮಾಜಿ ನಿರ್ದೇಶಕರ ನಡುವೆ ತಿಕ್ಕಾಟ ಏರ್ಪಟ್ಟಿದೆ.
ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮದಲ್ಲಿ ರಂಗಾಯಣದ ಹಾಲಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಟಿಪ್ಪು ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ), ಅಡ್ಡಂಡ ಕಾರ್ಯಪ್ಪ ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ್ದರು.
ರಂಗಾಯಣದಲ್ಲಿ ಬಹುರೂಪಿಯ ಗುಂಗಿಗೆ ಮನಸೋತ ರಂಗಾಸಕ್ತರು
ನನ್ನ ಹೇಳಿಕೆಗೆ ಈಗಲೂ ಬದ್ಧ: ರಂಗಾಯಣದ ಮಾಜಿ ನಿರ್ದೇಶಕರ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅಡ್ಡಂಡ ಕಾರ್ಯಪ್ಪ, "ಟಿಪ್ಪು ಬಗ್ಗೆ ನಾನು ನೀಡಿದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಟಿಪ್ಪು ಕೊಡಗಿಗೆ ಅಸಹ್ಯ, ಮೈಸೂರಿಗೆ ಹೆಮ್ಮೆ. ನಾನು ರಂಗಾಯಣ ಎಂಬ ಸುಂದರ ಅರಣ್ಯ ಕಾಂಡದಲ್ಲಿರುವ ಆನೆ. ಯಾರೋ ಬೊಗಳುವುದಕ್ಕೆ ಉತ್ತರ ಕೊಡಬೇಕಾಗಿಲ್ಲ. ನಾಯಿ ಬೊಗಳಿದ ತಕ್ಷಣ ಆನೆ ಓಡಿಹೋಗಲ್ಲ. ಟಿಪ್ಪುವಿನಿಂದ ಕಷ್ಟ ಅನುಭವಿಸಿರುವುದು ನನ್ನ ಕುಟುಂಬ. ಇದು ನನ್ನ ಅಭಿವ್ಯಕ್ತಿ ಸ್ವಾತಂತ್ರದ ಮಾತೇ ಹೊರತು, ರಂಗಾಯಣದ ನಿರ್ದೇಶಕನ ಮಾತಲ್ಲ. ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡಿದ್ದನ್ನು ರಂಗಾಯಣದ ಒಳಗೆ ತರುತ್ತಿದ್ದಾರೆ ಇದು ಸರಿಯಲ್ಲ. ಇಲ್ಲಿ ಯಾವುದೇ ಬಲಪಂಕ್ತೀಯ, ಬಿಜೆಪಿಯ ವಿಚಾರಗಳನ್ನು ಕಂಡೀದ್ದೀರಾ?" ಎಂದು ಪ್ರಶ್ನಿಸಿದ ಅವರು, ಬಹುರೂಪಿಗೆ ವಿವಾದ ಎಳೆದು ತರುತ್ತಿರುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಈತ ಡೊಂಗಿ ಗಾಂಧಿ ವಾದಿ: "ಜನಾರ್ಧನ್ ಒಬ್ಬ ಕುಡುಕ, ಕುಡುಕರಾಗಿ ಕುಳಿತು ಕಾಲ ಕಳೆದವ. ರಂಗಾಯಣದಲ್ಲಿ ಮಜಾ ಮಾಡಿದವ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಗ ಸತ್ತಾಗ ರಂಗಾಯಣದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡಿ, ರಂಗಾಯಣ ವೇದಿಕೆ ದುರ್ಬಳಕೆ ಮಾಡಿಕೊಂಡವ. ನಾನು ಕೊಡಗಿನಿಂದ ಬಂದವನು. ನಾನೊಬ್ಬ ದೇಶ ಭಕ್ತ. ಅವರಿಗೆ ದೇಶ ಬೇಡ. ಮಜಾ ಮಾಡುವವರು ಬೇಕು. ಈತ ಡೊಂಗಿ ಗಾಂಧಿ ವಾದಿ" ಎಂದು ಜನ್ನಿ ವಿರುದ್ಧ ಹರಿಹಾಯ್ದಿದ್ದಾರೆ.