ಕುರಿ, ಕಂಬಳಿ ಯಾವುದೇ ಜಾತಿಯ ಸ್ವತ್ತಲ್ಲ; ಎಚ್. ವಿಶ್ವನಾಥ್
ಮೈಸೂರು, ಅಕ್ಟೋಬರ್ 26; "ಕುರಿ, ಕಂಬಳಿ ಸಮುದಾಯದ ಸೊತ್ತು. ಯಾವುದೇ ಜಾತಿಯ ಸ್ವತ್ತಲ್ಲ" ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಎಚ್. ವಿಶ್ವನಾಥ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳವಾರ ಮೈಸೂರು ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಹಾನಗಲ್ ಉಪಚುನಾವಣೆಗೆ ಮತ ಕೇಳುವಾಗ ಕುರುಬರು, ಕಂಬಳಿ ಸೇರಿದಂತೆ ಬೇಡವಾದ ವಿಚಾರ ಪ್ರಸ್ತಾಪ ಆಗುತ್ತಿದೆ. ಬೇಡವಾದ ವಿಚಾರಗಳೇ ಜನರನ್ನು ಕೆಣಕುತ್ತಿರುವುದು. ಇದು ಚುನಾವಣೆಗೆ, ರಾಜಕಾರಣಿಗಳಿಗೆ ಶೋಭೆ ತರುವಂತಹದ್ದಲ್ಲ" ಎಂದರು.
ಹೌದು, ನಾನು ಜಾತಿವಾದಿ ಏನೀಗ; ಸಿದ್ದರಾಮಯ್ಯ ಟ್ವೀಟ್
"ಕಾಗಿನೆಲೆ ಪೀಠಕ್ಕೆ ಯಾರೇ ಹೋದರೂ ಕಂಬಳಿ ಹೊದಿಸಿ ಗೌರವ ತೋರಿಸುತ್ತಾರೆ. ಅದೇ ರೀತಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಹೊದಿಸಿದ್ದಾರೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದಲ್ಲ. ಅದನ್ನೇ ಸಿದ್ದರಾಮಯ್ಯ ಬಹಳ ದೊಡ್ಡ ಅಪರಾಧ ಎನ್ನುವಂತೆ ಮಾತಾಡುತ್ತಿದ್ದಾರೆ" ಎಂದು ದೂರಿದರು.
ಕುರುಬ ಸಮುದಾಯದ ಸ್ವಾಮೀಜಿಗೆ ಟಾಂಗ್ ನೀಡಿದ ಸಿದ್ದರಾಮಯ್ಯ
"ಅವ ಏನ್ ಕುರುಬನೇನ್ರಿ? ಅಂತ ಏಕ ವಚನದಲ್ಲಿ ಮಾತಾನಾಡುತ್ತಿರುವುದು ಯಾರಿಗೂ ಶೋಭೆ ತರವಂತದ್ದಲ್ಲ. ಜನ ಸಂಪ್ರದಾಯವಾಗಿ ಕಂಬಳಿ ಹೊದಿಸಿದ್ದನ್ನು ಪ್ರಶ್ನೆ ಮಾಡುವುದು ಬಹಳ ಸಣ್ಣತನ" ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಕುರುಬ ಸಮಾಜದಿಂದ ಸಿದ್ದರಾಮಯ್ಯಗೆ ಬಹಿಷ್ಕಾರದ ಎಚ್ಚರಿಕೆ!
"ಕುರಿ, ಕಂಬಳಿ ಸಮುದಾಯದ ಸೊತ್ತು. ಯಾವುದೇ ಜಾತಿಯ ಸ್ವತ್ತಲ್ಲ. ನೀವು ಸಂಕುಚಿತವಾದಂತೆ ಕುರುಬರು ಐಸೋಲೇಟ್ ಆಗಿ ಬಿಡುತ್ತಾರೆ. ಕುರುಬರು ಏಕಾಂಗಿಯಾಗುವ ಅಪಾಯವಿದೆ. ಇದನ್ನು ನೀವು ಗಮನದಲ್ಲಿ ಇಟ್ಟುಕೊಂಡು ಮಾತನಾಡಿ. ಮನುಷ್ಯ ಏಕವಚನದಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳನ್ನು ಸಂಭೋದಿಸೋದು ಎಷ್ಟು ಸರಿ?. ನಾನು ಮಾತನಾಡೋದೇ ಹೀಗೆ ಅಂತೀರಿ. ಹಾಗಾದರೆ ಏನ್ಲಾ ರಾಹುಲ್ ಗಾಂಧಿ ಅನ್ನಿ. ನಿಮ್ಮ ಅಧಿನಾಯಕಿಗೆ ಏನಮ್ಮ ಅನ್ನಿ" ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು.
"ಸಿದ್ದರಾಮಯ್ಯ ನೀವೂ ಕೂಡ ಮುಖ್ಯಮಂತ್ರಿ ಆಗಿದ್ದೀರಿ. ನಿಮಗೆ ಕುರುಬ ಜನಾಂಗ ಸೇರಿದಂತೆ ಎಲ್ಲಾ ಜನಾಂಗದವರು ಮತ ಹಾಕಿದ್ದಾರೆ. ಆದರೆ ನೀವು ಹಾಗೆ ಮಾತನಾಡುತ್ತಿರುವುದು ಸಮುದಾಯಕ್ಕೆ ಶೋಭೆ ತರುವಂತದ್ದಲ್ಲ. ಮುಖ್ಯಮಂತ್ರಿ, ಪ್ರಧಾನಿಗಳನ್ನು ಏಕವಚನದಲ್ಲಿ ಮಾತನಾಡೋದು ಸಭ್ಯ ಸಮಾಜದಲ್ಲಿ ಸಣ್ಣತನ. ಪ್ರಪಂಚದಲ್ಲಿ ಕುರಿಯನ್ನು ಹೆಚ್ಚು ಸಾಕೋದು ಯುರೋಪ್, ಎರಡನೇಯದ್ದು ಭಾರತ. ಯುರೋಪ್ನಲ್ಲಿ ಅದು ಬಹು ಮುಖ್ಯ ಉದ್ಯಮ. ಆದರೆ ಭಾರತ ದೇಶದಲ್ಲಿ ಅದನ್ನು ಸಂಕುಚಿತ ಮಾಡಿ ಒಂದು ಜಾತಿಗೆ ಸೀಮಿತ ಮಾಡಲಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.
"ಸಿದ್ದರಾಮಯ್ಯ ಸಂಕುಚಿತ ಆದಂತೆ ಕುರುಬರು ಏಕಾಂಗಿಗಳಾಗುತ್ತಾರೆ. ಇದರ ಅಪಾಯ ಮನಗಂಡು ಎಚ್ಚರಿಕೆಯಿಂದ ಮಾತನಾಡಿ. ರಾಜಕಾರಣದಲ್ಲಿ ನೀವು ಏಕಾಂಗಿಗಳಾಗಿಬಿಡುತ್ತೀರಿ. ಯಾರೂ ಕೂಡ ಏಕಾಂಗಿಯಾಗಿ ಏನೂ ಮಾಡಲು ಆಗಲ್ಲ. ಸಿದ್ದರಾಮಯ್ಯನವರಿಗೆ ಕೃತಜ್ಞತೆ ಎಂಬುದೇ ಇಲ್ಲ. ಈ ನಾಡಿನಲ್ಲಿ ಕೃತಜ್ಞತೆ ಇಲ್ಲದ ನಾಯಕ ಅಂದರೆ ಸಿದ್ದರಾಮಯ್ಯ. ಎಚ್. ಡಿ. ದೇವೇಗೌಡ ಅವರು ನಿಮ್ಮನ್ನು ಆಚೆಗೆ ಹಾಕಿದಾಗ ನಿಮ್ಮನ್ನು ಕರೆತಂದವರು ನಾವು. ಎಸ್. ಎಂ. ಕೃಷ್ಣ, ಹೆಚ್. ಎಂ. ರೇವಣ್ಣ, ಮಲ್ಲಿಕಾರ್ಜುನ ಖರ್ಗೆ" ಎಂದರು.
"ನಿಮ್ಮನ್ನು ವಿರೋಧ ಪಕ್ಷದ ನಾಯಕನಾಗಿ ಮಾಡಿದರು. ನಂತರ ಮುಖ್ಯಮಂತ್ರಿ ಆದಿರಿ. ಸಿದ್ದರಾಮಯ್ಯ ಒಂಥರ ಇಂಗ್ಲಿಷ್ನವರ ರೀತಿ. ನಿಮ್ಮನ್ನು ಒಳಗೆ ಕರೆತಂದರೆ, ನೀವು ನಮ್ಮನ್ನು ಹೊರಗೆ ಹಾಕಿದಿರಿ. ಶ್ರೀನಿವಾಸ್ ಪ್ರಸಾದ್ ಮನೆಗೆ ಹೋಗುವಾಗ ನಾನು ನಿಮಗೆ ಗನ್ಮ್ಯಾನ್ ತರ ಇದ್ದೆ. ಆದರೆ ನೀವು ಯಾರನ್ನೂ ಬಿಡಲಿಲ್ಲ, ಹೊರ ಹಾಕಿದಿರಿ. ಎಸ್. ಎಂ. ಕೃಷ್ಣ ನಿಮ್ಮನ್ನು ಅನ್ ಪಾಲಿಷ್ಡ್ ಡೈಮಂಡ್ ಅಂದರು. ಆದರೆ ನೀವು ಅವರಿಗೂ ಏಕವಚನದಲ್ಲಿ ಮಾತನಾಡಿದಿರಿ" ಎಂದು ವಿಶ್ವನಾಥ್ ಕಿಡಿಕಾರಿದರು.
"ಮಾಜಿ ಸಿಎಂ ಎಸ್. ಎಂ. ಕೃಷ್ಣ ಅವರಿಗೆ ಕೂಡ ಗೌರವ ಕೊಡಲಿಲ್ಲ. ನಾನು ಎಂಬ ಭಾವದಲ್ಲಿ ದುರಂಹಕಾರ ಪ್ರದರ್ಶನ ಮಾಡಿದ್ದೀರಿ. ಸೆಕೆಂಡ್ ಲೈನ್ ಲೀಡರ್ ಯಾರನ್ನು ಬೆಳೆಸಿದ್ದೀರಾ?. ನಮ್ಮನ್ನೆ ಬಲಿ ಹಾಕಿದ್ದೀರಿ, ಬಿ. ಬಿ. ಚಿಮನಕಟ್ಟಿಯನ್ನು ಬೀದಿಗೆ ತಂದಿರಿ, ದಲಿತರು ಮತ್ತು ಅಲ್ಪ ಸಂಖ್ಯಾತರನ್ನು ಮುಗಿಸುತ್ತಿದ್ದೀರಿ, ಕಾಗಿನೆಲೆ ಮಠದ ಸ್ಥಾಪಕ ಅಧ್ಯಕ್ಷ ನಾನು, ಆದರೆ ಈಗ ನಾನೇ ಮಠ ಕಟ್ಟಿದೆ ಅಂತೀರಾ?" ಎಂದು ವಾಗ್ದಾಳಿ ನಡೆಸಿದರು.
"ನಾನೇ ನಾನೇ ಅಂತ ಹೇಳುತ್ತೀರಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿರಿ. ಸೆಕೆಂಡ್ ಲೈನ್ ನಾಯಕರನ್ನು ಬೆಳೆಸಲಿಲ್ಲ. ನಾನು ನಾನು ಅಂತ ಮಾತಾಡ್ತಾರೆ. ನೀವು ಯಾವ ಸೀಮೆ ಅಹಿಂದ. ನನ್ನನ್ನೇ ಬಲಿ ಹಾಕಿದಿರಿ. ನಿಮ್ಮದು ಯಾವ ಅಹಿಂದ. ಅಹಿಂದವನ್ನು ಮುಗಿಸುತ್ತ ಬಂದಿರಿ. ನಿಮ್ಮ ಮಾತು ಸಮಾಜವನ್ನು ಸಡಿಲಮಾಡುತ್ತಿದೆ. ಕಾಗಿನೆಲೆಯಲ್ಲಿ 10 ಸಾವಿರ ಮನೆ ಇದೆ. ಇದರಲ್ಲಿ ಒಂಭತ್ತೂವರೆ ಮುಸ್ಲಿಂ ಸಮುದಾಯ ಇದೆ. ಮಠ ಕಟ್ಟಿದೆ ಅಂತೀರಾ ಕಾಗಿನೆಲೆ ಊರಿನ ಒಳಗೆ ಹೋಗಿಲ್ಲ. ಕನಕಗೋಪುರ ಕೆಡವಿದಾಗ ಎಲ್ಲಿದ್ದಿರಿ?. ಕುರುಬ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು?" ಎಂದು ಎಚ್. ವಿಶ್ವನಾಥ ಪ್ರಶ್ನಿಸಿದರು.