ಮೈಸೂರು: ಕೋವಿಡ್ ಸಂಕಷ್ಟದಲ್ಲಿ ವಿದ್ಯಾರ್ಥಿನಿಯರ 'ಮನ ಮೆಚ್ಚುವ' ಕಾರ್ಯ
ಮೈಸೂರು, ಮೇ 12: ಕೋವಿಡ್ ಸಂಕಷ್ಟಕ್ಕೆ ಇಡೀ ಕರುನಾಡು ಕಂಗೆಟ್ಟಿದ್ದು, ಮೈಸೂರು ಜಿಲ್ಲೆಯಲ್ಲಿ ಪರಿಸ್ಥಿತಿ ದಿನೇ ದಿನೇ ಬಿಗುಡಾಯಿಸುತ್ತಿದೆ. ಬಡವರು ಹಾಗೂ ಅಸಹಾಯಕರು ದಿಕ್ಕು ತೋಚದಂತಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಮೈಸೂರಿನ ವಿದ್ಯಾರ್ಥಿನಿಯರು ವಿನೂತನ ಪ್ರಯತ್ನ ನಡೆಸ್ತಿದ್ದಾರೆ. ಲಾಕ್ಡೌನ್ ಸಂಕಷ್ಟದಲ್ಲಿ ಬಡವರಿಗೆ ನೆರವಾಗುವ ಮೂಲಕ ಮೈಸೂರಿನ ಕಾಲೇಜು ವಿದ್ಯಾರ್ಥಿನಿಯರು ಮಾದರಿಯಾಗಿದ್ದಾರೆ.
ಹೌದು, ಯುವತಿಯರು ಕೋವಿಡ್ ವಿರುದ್ಧ ಟೊಂಕಕಟ್ಟಿ ನಿಂತಿದ್ದು, ಸಮಾಜ ಸೇವೆಗೆ ಇಳಿದಿದ್ದಾರೆ. ಧೈರ್ಯದಿಂದ ಮನೆಯಿಂದ ಹೊರ ಬಂದು ಜನಸೇವೆ ಮಾಡುತ್ತಿರುವ ವಿದ್ಯಾರ್ಥಿನಿಯರು, ರಸ್ತೆ ಬದಿ, ಸ್ಲಂ ನಿವಾಸಿಗಳಿಗೆ ಸ್ವಂತ ಹಣದಿಂದ ಅಗತ್ಯ ವಸ್ತುಗಳು, ಉಪಾಹಾರ, ಮಾಸ್ಕ್, ಸ್ಯಾನಿಟೈಜರ್ ಅನ್ನು ಉಚಿತವಾಗಿ ನೀಡುತ್ತಿದ್ದಾರೆ. ಕೋವಿಡ್ ಸಂಕಷ್ಟದ ಸ್ಥಿತಿಯಲ್ಲಿ ಈ ರೀತಿಯ ಸಾಮಾಜಿಕ ಕಳಕಳಿಗೆ ಜನರು ಶಹಬ್ಬಾಸ್ ಅಂತಿದ್ದಾರೆ.
ಸ್ವಂತ ಹಣದಿಂದ ಖರ್ಚು
ಇನ್ನು, ಸಮಾಜಕ್ಕೆ ಏನನ್ನಾದರೂ ಕೊಡ್ಬೇಕು ಅನ್ನೋ ಉದ್ದೇಶದಿಂದ ವಿದ್ಯಾರ್ಥಿನಿಯರು ಈ ಕೆಲಸ ಮಾಡ್ತಿದ್ದಾರೆ. ಮೈಸೂರಿನಲ್ಲಿ ಈ ಕೆಲಸಕ್ಕೆ ಪ್ರಶಂಸೆ ಕೂಡ ಸಿಕ್ಕಿದೆ. ಈ ಕಾರ್ಯಕ್ಕೆ ಸ್ವಂತ ಹಣ ಖರ್ಚು ಮಾಡುತ್ತಿದ್ದು, ಓದುವ ವಯಸ್ಸಿಗೆ ಈ ರೀತಿಯ ಸಮಾಜಮುಖಿ ಕೆಲಸಕ್ಕೆ ಕೈ ಹಾಕಿರುವುದು ಶ್ಲಾಘನೀಯವಾಗಿದೆ.
ಇನ್ನು ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಅಂತಿಮ ಬಿ.ಎ ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಯುವತಿಯರ ಕಾರ್ಯಕ್ಕೆ ಎಲ್ಲರೂ ಸಲಾಂ ಅಂದಿದ್ದು, ಇದನ್ನೇ ಮುಂದುವರೆಸಿ ಹೋಗುವಂತೆ ಸಲಹೆ ಕೊಟ್ಟಿದ್ದಾರೆ.