ವಿದ್ಯಾರ್ಥಿನಿಗೆ ಕಿರುಕುಳ; ಮೈಸೂರಿನಲ್ಲಿ ಕಾಲೇಜು ಸಿಬ್ಬಂದಿ ಅಮಾನತು
ಮೈಸೂರು, ಡಿಸೆಂಬರ್ 19: ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಿಬ್ಬಂದಿಯೊಬ್ಬರು ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ.
ಕಾಲೇಜಿನ ದ್ವಿತೀಯ ದರ್ಜೆ ಸಹಾಯಕ ಜಯರಾಮ ಅಮಾನತುಗೊಂಡ ಸಿಬ್ಬಂದಿ. ಕಾಲೇಜಿನ ವಿದ್ಯಾರ್ಥಿನಿಯೊಬ್ಬರ ಮೊಬೈಲ್ ನಂಬರ್ ಪಡೆದುಕೊಂಡು ಆಕೆಗೆ ಕರೆ ಮಾಡಿ ಮಾನಸಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದು, ಕಾಲೇಜಿನ ಮಹಿಳಾ ದೌರ್ಜನ್ಯ ಸಮಿತಿಯ ನಡಾವಳಿಯ ಆಧಾರದ ಮೇಲೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಡಿ.12 ರಂದು ಜಯರಾಮ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಬಿಷಪ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಉಲ್ಟಾ ಹೊಡೆದ ಸಂತ್ರಸ್ತೆ
ಕಾಲೇಜಿನ ವಿದ್ಯಾರ್ಥಿನಿಯೊಬ್ಬರ ಮೊಬೈಲ್ ನಂಬರ್ ಪಡೆದುಕೊಂಡು, ಆಕೆಗೆ ಕರೆ ಮಾಡಿ ಶೈಕ್ಷಣಿಕ ವಿಚಾರವನ್ನು ಮುಂದಿಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದು, "ನೀನು ಸರಿಯಾಗಿ ಕಾಲೇಜಿಗೆ ಬರುತ್ತಿಲ್ಲ. ಈ ವಿಚಾರವನ್ನು ಪಾಲಕರ ಗಮನಕ್ಕೆ ತರುತ್ತೇನೆ. ನಿನಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ" ಎಂದೆಲ್ಲ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿದೆ. ವಿದ್ಯಾರ್ಥಿನಿ ಬೆದರಿಕೆಗೆ ಮಣಿದಾಗ, ಪಾರ್ಟಿ ಕೊಡಿಸಬೇಕೆಂದು ಪೀಡಿಸಿರುವ ಮಾತುಗಳು ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ. ಅಲ್ಲದೆ ನೀನೊಬ್ಬಳೇ ನನ್ನ ಜತೆ ಮಾತನಾಡಬೇಕು ಎಂದು ಆತ ಬೆದರಿಕೆಯೊಡ್ಡಿದ್ದು, ಇದರಿಂದ ನನಗೆ ಓದಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನೊಂದ ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ದೂರು ನೀಡಿದ್ದಳು.
ಈ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದ ಕಾಲೇಜಿನ ಮಹಿಳಾ ದೌರ್ಜನ್ಯ ಸಮಿತಿ ಜಯರಾಮ ವಿರುದ್ಧ ಕಾಲೇಜು ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಿತ್ತು. ಈ ವರದಿ ಆಧಾರದ ಮೇಲೆ ಜಯರಾಮ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
ನಿತ್ಯಾನಂದ ಸ್ವಾಮೀಜಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ
ಏತನ್ಮಧ್ಯೆ ಶಾಸಕ ಎಲ್.ನಾಗೇಂದ್ರ ಸಿಬ್ಬಂದಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆ ಪ್ರಕಾರ ಮಹಾರಾಣಿ ಕಾಲೇಜಿನಲ್ಲಿ ಮಹಿಳಾ ಲೈಂಗಿಕ ಕಿರುಕುಳ ನಿವಾರಣಾ ಸಮಿತಿ ರಚನೆಯಾಗಿಲ್ಲ. ಸುತ್ತೋಲೆಯಲ್ಲಿ ಸೂಚಿಸಿರುವ ಸದಸ್ಯರನ್ನು ಸಮಿತಿಗೆ ನೇಮಕ ಮಾಡಿಲ್ಲ. ಸಮಿತಿ ರಚನೆಯಲ್ಲಿಯೇ ಲೋಪವಾಗಿದ್ದು, ಈ ಸಮಿತಿ ವರದಿ ಆಧಾರದ ಮೇಲೆ ಜಯರಾಮ ಅವರನ್ನು ಅಮಾನತು ಮಾಡಿರುವುದು ಸರಿಯಲ್ಲ. ಕಾಲೇಜಿನಲ್ಲಿರುವ ಕೆಲವು ಸಿಬ್ಬಂದಿ ಜಯರಾಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಅಮಾನತು ಆದೇಶ ಹಿಂಪಡೆಯಬೇಕೆಂದು ಅವರು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸಚಿವರು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ನಿರ್ದೇಶಿಸಿದ್ದಾರೆ ಎನ್ನಲಾಗಿದೆ.