ಸೆ.15 ರಂದು ದಿ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸಿಎಂ ಚಾಲನೆ
ಮೈಸೂರು, ಸೆಪ್ಟೆಂಬರ್ 14: ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಹಲವು ವರ್ಷಗಳ ಕನಸು ಕೊನೆಗೂ ನನಸಾಗುವ ಕಾಲ ಬಂದಿದೆ. ಸೆ.15 ರಂದು ದಿ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ.
ಸಾಹಸ ಸಿಂಹ ವಿಷ್ಣುವರ್ಧನ್ ಅವರು ಹಠಾತ್ ಮೃತರಾದ ನಂತರ ಸಾವಿರಾರು ಅಭಿಮಾನಿಗಳು ಸ್ಮಾರಕ ನಿರ್ಮಾಣಕ್ಕಾಗಿ ಒತ್ತಾಯಿಸಿದ್ದರು. ಸರ್ಕಾರಗಳು, ಮುಖ್ಯಮಂತ್ರಿಗಳು ಬದಲಾದರೂ ಸ್ಮಾರಕ ನಿರ್ಮಾಣ ಮಾತ್ರ ಕಗ್ಗಂಟಾಗಿಯೇ ಉಳಿದಿತ್ತು.
ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ನಟಿ ಭಾರತಿ ವಿಷ್ಣುವರ್ಧನ್ ಚಾಲನೆ
ಏಕೆಂದರೆ ಸರ್ಕಾರವು ಸ್ಮಾರಕ ನಿರ್ಮಾಣಕ್ಕೆ ಸ್ಥಳವನ್ನೇ ಗುರುತಿಸದೆ ಗೊಂದಲದಲ್ಲಿತ್ತು. ಒಮ್ಮೆ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಸ್ಥಳ ಹುಡುಕಾಟ ನಡೆಸಿದರೆ, ನಂತರ ಮೈಸೂರು ಸಮೀಪ ಸ್ಥಳ ಗುರುತಿಸಲಾಗುತ್ತಿತ್ತು.
ಎಚ್.ಡಿ.ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ
ವಿಷ್ಣುವರ್ಧನ್ ಪತ್ನಿ ಭಾರತಿ ಅವರು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ನಂತರ ಮೈಸೂರು ಹೊರವಲಯದಲ್ಲಿ ಸ್ಮಾರಕ ಸ್ಥಳ ಅಂತಿಮಗೊಳಿಸಲಾಯಿತು. ಆದರೆ ಗುರುತಿಸಲಾದ ಸ್ಥಳಕ್ಕೆ ಸ್ಥಳೀಯ ರೈತರಿಂದಲೂ ಆಕ್ಷೇಪ ಎದುರಾಗಿತ್ತು. ಈಗ ಅದನ್ನೆಲ್ಲ ಪರಿಹರಿಸಿಕೊಂಡು ಮೈಸೂರಿನ ಎಚ್.ಡಿ.ಕೋಟೆ ರಸ್ತೆಯ ಉದ್ಬೂರು ಬಳಿಯ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸ್ಥಳ ನಿಗದಿಪಡಿಸಲಾಗಿದೆ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸೆ.15 ರಂದು ಭೂಮಿ ಪೂಜೆ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರದಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಸ್ಮಾರಕ ನಿರ್ಮಾಣದ ಸ್ಥಳವನ್ನು ಸ್ವಚ್ಛಗೊಳಿಸಲಾಗುತ್ತಿದೆ
ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ನಿಟ್ಟಿನಲ್ಲಿ ಸ್ಮಾರಕ ನಿರ್ಮಾಣದ ಸ್ಥಳವನ್ನು ಸ್ವಚ್ಛಗೊಳಿಸಲಾಗುತ್ತಿದ್ದು, ಜೆಸಿಬಿ ಮೂಲಕ ಜಾಗವನ್ನು ಸಮತಟ್ಟು ಮಾಡುವ ಕಾರ್ಯ ನಡೆಸಲಾಗಿದೆ. ನಟಿ ಭಾರತಿ ವಿಷ್ಣುವರ್ಧನ್ ಸಹ ಸ್ಥಳಕ್ಕೆ ಭೇಟಿ ನೀಡಿ, ಸಿದ್ಧತಾ ಕಾರ್ಯಗಳನ್ನು ವೀಕ್ಷಣೆ ಮಾಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಹಲವು ವರ್ಷಗಳ ನಂತರ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿರುವುದು ನಿಜಕ್ಕೂ ಸಂತಸ ಮೂಡಿಸಿದೆ ಎಂದರು.
ಯಡಿಯೂರಪ್ಪ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ
ಸ್ಮಾರಕ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಭಾರತಿ ವಿಷ್ಣುವರ್ಧನ್ ತಿಳಿಸಿದರು. ಸ್ಮಾರಕ ನಿರ್ಮಾಣ ಆಗಬೇಕೆಂದು ಹಲವರು ಹೋರಾಟ ಮಾಡಿದ್ದರು, ಅಭಿಮಾನಿಗಳು ಸಹ ಇಲ್ಲೇ ಸ್ಮಾರಕ ಆಗಬೇಕೆಂದು ಆಸೆ ಪಟ್ಟಿದ್ದರು. ಅವರ ಆಸೆಯಂತೆ ಸ್ಮಾರಕ ನಿರ್ಮಾಣಕ್ಕೆ ಭೂಮಿಪೂಜೆ ಆಗುತ್ತಿದೆ. ಈ ವಿಷಯ ವಿಷ್ಣು ಅಭಿಮಾನಿಗಳಿಗೆ, ಹಿತೈಷಿಗಳಿಗೆ ಖುಷಿಯಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಬರಬೇಡಿ ಎಂದು ಮನವಿ
ಅಲ್ಲದೇ ಕೊರೊನಾ ಹಿನ್ನೆಲೆಯಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಡಿ ಎಂದು ಮನವಿ ಮಾಡಿರುವ ಭಾರತಿ ವಿಷ್ಣುವರ್ಧನ್, ಅಭಿಮಾನಿಗಳು ನಿಮ್ಮ ಜೀವವನ್ನು ಮೊದಲು ಸುರಕ್ಷಿತವಾಗಿಟ್ಟುಕೊಳ್ಳಿ, ವಿಷ್ಣು ಅವರ ಸ್ಮಾರಕ ಇಲ್ಲಿಯೇ ಇರಲಿದ್ದು, ಯಾವಾಗಲಾದರು ಬಂದು ನೋಡಬಹುದು. ಹೀಗಾಗಿ ಅಭಿಮಾನಿಗಳು ಸ್ಮಾರಕ ನಿರ್ಮಾಣದ ಸ್ಥಳಕ್ಕೆ ಬರದೆ ಇರುವ ಸ್ಥಳದಲ್ಲೇ ಸಂಭ್ರಮಿಸುವಂತೆ ಮನವಿ ಮಾಡಿದ್ದಾರೆ.