ಲಾಕ್ಡೌನ್ ನಿಯಮ ಉಲ್ಲಂಘಿಸಿದ ಸಿಎಂ ಪುತ್ರ ವಿಜಯೇಂದ್ರ!
ಮೈಸೂರು, ಮೇ 18: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಲ್ಲಿ ಲಾಕ್ಡೌನ್ ಘೋಷಿಸಿ ದೇವಾಲಯಗಳ ದರ್ಶನಕ್ಕೂ ನಿರ್ಬಂಧ ಹೇರಲಾಗಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಲ್ಲದೆ, ಕಪಿಲಾ ನದಿ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ವ್ಯಕ್ತವಾಗಿವೆ.
ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಅವರು ಪತ್ನಿ ಸಹಿತ ದೇವಾಲಯಕ್ಕೆ ಭೇಟಿ ನೀಡಿದ್ದೆಷ್ಟು ಸರಿ? ಇದು ಕೋವಿಡ್ ನಿಯಮದ ಉಲ್ಲಂಘನೆ ಅಲ್ಲವೆ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಮಂಗಳವಾರ ಪತ್ನಿ ಸಹಿತ ದೇವಾಲಯಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಅವರು ಬರಮಾಡಿಕೊಂಡು ದೇಗುಲದ ಬಾಗಿಲು ತೆರೆದು ದೇವಾಲಯದೊಳಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟರು. ಸುಮಾರು ಅರ್ಧಗಂಟೆ ಶ್ರೀಕಂಠೇಶ್ವರನಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಗೈದ ದಂಪತಿ ಬಳಿಕ ಕಪಿಲಾ ನದಿ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಆ ನಂತರ ನದಿಗೆ ಬಾಗಿನ ಅರ್ಪಿಸಿದ್ದಾರೆ. ಸುಮಾರು ಎಂಟು ಮಂದಿ ಗನ್ ಮ್ಯಾನ್ ಗಳೊಂದಿಗೆ ಆಗಮಿಸಿದ ವಿಜಯೇಂದ್ರ ದಂಪತಿ ಬಳಿ ಸಾರ್ವಜನಿಕರು ಸುಳಿಯದಂತೆ ನೋಡಿಕೊಳ್ಳಲಾಯಿತಲ್ಲದೆ, ಮಾಧ್ಯಮದವರಿಗೆ ಚಿತ್ರೀಕರಣ ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು.
ಕಾನೂನು ಜಾರಿ ಮಾಡುವವರೇ ಕಾನೂನು ಪಾಲನೆ ಮಾಡದೆ ಹೋದರೆ ಲಾಕ್ಡೌನ್ ಮಾಡಬೇಕಾದ ಅಗತ್ಯವೇನಿತ್ತು? ಕಳೆದ ಒಂದು ತಿಂಗಳಿನಿಂದ ಪುರೋಹಿತರು ಹೊರತುಪಡಿಸಿ ಸಾರ್ವಜನಿಕರು ದೇವಸ್ಥಾನಕ್ಕೆ ಭೇಟಿ ನೀಡದೆ ಹೊರಗಿನಿಂದಲೇ ದೇವರಿಗೆ ಕೈಮುಗಿದು ಹೋಗುತ್ತಿದ್ದರು. ಆದರೆ ಲಾಕ್ಡೌನ್ ಹೇರಿರುವ ಕಾಲದಲ್ಲಿ ದೇವರ ದರ್ಶನ ಮಾಡುವ ಜರೂರು ಏನಿತ್ತು ಎಂದು ಜನ ಕೇಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಎಂ ಪುತ್ರನಿಗೊಂದು ನ್ಯಾಯ..? ಸಾಮಾನ್ಯರಿಗೊಂದು ನ್ಯಾಯವೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.