ಮಾತೇ ಸಾಧನೆಯಲ್ಲ, ಸಾಧನೆ ಮಾತಾಗಬೇಕು; ಭರವಸೆ ಕೊಟ್ಟ ಸಿಎಂ
Recommended Video
ಮಂಡ್ಯ, ಆಗಸ್ಟ್ 29: ಸತತ ನಾಲ್ಕನೇ ಬಾರಿ ಸಿಎಂ ಆಗಿ, ತುಂಬಿದ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿರುವ ಸಿಎಂ ಯಡಿಯೂರಪ್ಪನವರು ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳವಾಗಿ ಕೆಆರ್ ಎಸ್ ಅಣೆಕಟ್ಟೆಯನ್ನು ರೂಪಿಸಲು ತಯಾರಿ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ತುಂಬಿ ತುಳುಕುತ್ತಿರುವ ಕಾವೇರಿಗೆ ಇಂದು ಸಿಎಂ ಬಾಗಿನ ಸಮರ್ಪಣೆ
ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಮೊದಲು ಮಳೆಯಾಗದೆ, ಡ್ಯಾಂ ತುಂಬುತ್ತೋ ಇಲ್ಲವೋ ಎಂದು ರೈತರು ಆತಂಕಗೊಂಡಿದ್ದರು. ಆದರೆ, ನಂತರ ಸುರಿದ ಭಾರೀ ಮಳೆಯಿಂದಾಗಿ ಕೆಆರ್ ಎಸ್ ಸೇರಿದಂತೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ" ಎಂದರು.
"ಒಂದು ತಿಂಗಳ ಹಿಂದೆ ಈ ರಾಜ್ಯದ ಯಾವುದೇ ಜಲಾಶಯ ತುಂಬಿರಲಿಲ್ಲ. ಮುಂದೆ ಈ ನಾಡಿನ ಭವಿಷ್ಯ ಏನು ಎಂದು ಚಿಂತೆ ಮಾಡುತ್ತಿದ್ದೆವು. ಪ್ರತಿ ದಿನ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗೆ ಕರೆ ಮಾಡಿ ಜಲಾಶಯದ ಒಳಹರಿವಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ. ಆದರೆ ವರುಣದೇವನ ಕೃಪೆಯಿಂದ ಕೇವಲ 4-5 ದಿನಗಳಲ್ಲಿ ಕೆಆರ್ ಎಸ್ ಭರ್ತಿಯಾಗಿದ್ದು ಸಂತಸ ತಂದಿದೆ" ಎಂದರು.
"ಈಗಾಗಲೇ ಜಲಾಶಯ ತುಂಬಿದ ಪರಿಣಾಮ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಸೂಚಿಸಿದ್ದೇನೆ. ಹಾಗಾಗಿ ಅಂತರ್ಜಲ ಕುಸಿಯುವುದು ತಪ್ಪಲಿದೆ. ಕೆಆರ್ ಎಸ್ಅ ಭಿವೃದ್ಧಿಗೆ ನಾನು ಶ್ರಮಿಸುತ್ತೇನೆ. ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳವಾಗಿ ಕೆಆರ್ ಎಸ್ ಅಣೆಕಟ್ಟೆ ರೂಪಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಅಂದಾಜು ಕಳುಹಿಸುವಂತೆ ತಿಳಿಸಿದ್ದೇನೆ" ಎಂದರು.
"ಕನ್ನಂಬಾಡಿ ಗ್ರಾಮದಲ್ಲಿ ನನ್ನ ಅಜ್ಜ ಇದ್ದರು. ಬೂಕನಕೆರೆಯಲ್ಲಿ ನನ್ನ ತಂದೆ ಇದ್ದರು. ದಸರಾ ನೋಡಲು ನಾನು ಇಲ್ಲಿಗೆ ಬರುತ್ತಿದ್ದೆ. ಈಗ ಈ ಭಾಗವನ್ನು ಅಭಿವೃದ್ಧಿಪಡಿಸುವ ಸೌಭಾಗ್ಯ ನನ್ನದಾಗಿದೆ. ಶೀಘ್ರದಲ್ಲೇ ಮೈಷುಗರ್ ಕಾರ್ಖಾನೆ, ಪಾಂಡವಪುರ ಪಿಎಸ್ಎಸ್ ಕೆ ಸಕ್ಕರೆ ಕಾರ್ಖಾನೆ ಪುನರಾರಂಭ ಮಾಡಲು ಹಣಕಾಸಿನ ನೆರವು ನೀಡಲಾಗುವುದು. ಕಾರ್ಖಾನೆ ಆರಂಭ ಮಾಡಲು ಹಣಕಾಸಿನ ನೆರವು ಎಷ್ಟಿದೆ ಎನ್ನುವುದನ್ನು ಜಿಲ್ಲಾಧಿಕಾರಿಗಳು ತಿಳಿಸಿದಲ್ಲಿ ತಕ್ಷಣ ಅಗತ್ಯ ಹಣವನ್ನು ಬಿಡುಗಡೆ ಮಾಡಲಿದ್ದೇನೆ" ಎಂದರು.
ತುಂಬಿದ ಕೆಆರ್ ಎಸ್; ಜಲಾಶಯದ ಸುತ್ತ ಕಲ್ಲು ಗಣಿಗಾರಿಕೆಗೆ ನಿಷೇಧಾಜ್ಞೆ
"ಯಡಿಯೂರಪ್ಪ ಭರವಸೆ ಕೊಟ್ಟರೆ ಅದು ಕೇವಲ ಭರವಸೆಯಾಗಿ ಉಳಿಯುವುದಿಲ್ಲ, ಕಾರ್ಯರೂಪಕ್ಕೆ ಬರಲಿದೆ. ಮಾತೇ ಸಾಧನೆಯಾಗಬಾರದು, ಸಾಧನೆ ಮಾತನಾಡಬೇಕು" ಎಂದರು.