"ಮೈಸೂರಿನಲ್ಲಿ ಕೊರೊನಾ ಹೆಚ್ಚಾದರೆ ಮುಖ್ಯಮಂತ್ರಿಗಳೇ ನೇರ ಹೊಣೆ"
ಮೈಸೂರು, ಅಕ್ಟೋಬರ್ 20: ದಸರಾ ಮುನ್ನ ಸರಳ ದಸರಾ ಆಚರಿಸುತ್ತೇವೆ ಎಂದು ಘೋಷಿಸಿ ಜಿಲ್ಲಾಧಿಕಾರಿಗಳು ಪ್ರವಾಸಿ ತಾಣಗಳನ್ನು ನಿರ್ಬಂಧಿಸಿ ಆದೇಶಿಸಿದ್ದರು. ಆದರೆ ದಸರಾ ಉದ್ಘಾಟನೆಗೆ ಬಂದ ಮುಖ್ಯಮಂತ್ರಿಗಳು ಪ್ರವಾಸಿ ತಾಣಗಳ ನಿರ್ಬಂಧ ತೆರವುಗೊಳಿಸಿ ಆದೇಶಿಸಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾ ಸೋಂಕಿನ ಪ್ರಕರಣದಲ್ಲೂ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದರೆ ಅದಕ್ಕೆ ಮುಖ್ಯಮಂತ್ರಿಗಳೇ ನೇರ ಹೊಣೆಯಾಗಬೇಕು ಎಂದಿದ್ದಾರೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್.
ಮೈಸೂರು ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಆಚರಿಸುವಾಗ ಸರಳ ದಸರಾ ಎಂದು ಘೋಷಣೆ ಮಾಡಿ ಸುಮಾರು 15 ಕೋಟಿ ಹಣ ಬಿಡುಗಡೆಗೊಳಿಸಲಾಗಿದೆ. ಕಳೆದ ಎರಡು ದಿನಗಳಿಂದ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೋವಿಡ್ ಟೆಸ್ಟ್ಗಾಗಿ ಮೈಸೂರು ಪಾಲಿಕೆಯಿಂದ ಮೊಬೈಲ್ ತಂಡ
ಯಡಿಯೂರಪ್ಪನವರು ಸಿಎಂ ಆದ ಮೇಲೆ ಉತ್ತರ ಕರ್ನಾಟಕ ಮತ್ತು ಇತರೆ ಜಿಲ್ಲೆಗಳು ಸೇರಿ 24 ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗಿದೆ. ಎಲ್ಲಾ ರೀತಿಯಲ್ಲಿ ಇಲ್ಲಿಯವರೆಗೆ ಹಾನಿಯಾಗಿರುವ ಮೊತ್ತ ಸುಮಾರು 48 ಸಾವಿರ ಕೋಟಿ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ ಕೇಂದ್ರ ಸರ್ಕಾರ ನೀಡಿರುವ ಮೊತ್ತ ಸುಮಾರು 2000 ಕೋಟಿಯಷ್ಟು ಮಾತ್ರ. ಕಳೆದ 15 ದಿನಗಳಿಂದ ವಿಜಾಪುರ ಮತ್ತು ಕಲಬುರಗಿ ಜಿಲ್ಲೆಗಳ ಅತಿವೃಷ್ಟಿಯಿಂದ ಸುಮಾರು 184 ಗ್ರಾಮಗಳು ಜಲಾವೃತವಾಗಿವೆ. ಆದರೆ ಇಲ್ಲಿಯವರೆಗೆ ಮುಖ್ಯಮಂತ್ರಿಗಳು ಆ ಕಡೆ ತಿರುಗಿಯೂ ನೋಡಿಲ್ಲ. ಇದೊಂದು ಮಾನವೀಯತೆ ಇಲ್ಲದಿರುವ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಮೈಸೂರಿನ ಕೊರೊನಾ ಪ್ರಕರಣಗಳು: ಮೈಸೂರು ಜಿಲ್ಲಿಯಲ್ಲಿ ಒಟ್ಟು 45,193 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದುವರೆಗೂ 37,319 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. 6,947 ಸಕ್ರಿಯ ಪ್ರಕರಣಗಳಿದ್ದು, ಕೊರೊನಾ ಸೋಂಕಿನಿಂದಾಗಿ 927 ಮಂದಿ ಸಾವನ್ನಪ್ಪಿದ್ದಾರೆ.
Recommended Video