ಸಿಎಂ ನನ್ನ ಮೇಲೆ ನಂಬಿಕೆ ಇಟ್ಟು ಆರೋಗ್ಯ ಇಲಾಖೆ ನೀಡಿದ್ದಾರೆ: ಸಚಿವ ಕೆ.ಸುಧಾಕರ್
ಮೈಸೂರು, ಅಕ್ಟೋಬರ್ 12: ರಾಜ್ಯ ಬಿಜೆಪಿ ಸರ್ಕಾರದಲ್ಲಿ ದಿಢೀರ್ ಬೆಳವಣಿಗೆಯಾಗಿದ್ದು, ಇಂದಿನಿಂದ ಆರೋಗ್ಯ ಸಚಿವರಾಗಿ ಕೆ.ಸುಧಾಕರ್ ಅವರು ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು ಸಮಾಜ ಕಲ್ಯಾಣ ಇಲಾಖೆಯ ಹೊಣೆಯನ್ನು ಹೊತ್ತುಕೊಳ್ಳಲಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಆರೋಗ್ಯ ಇಲಾಖೆ ವಹಿಸಿಕೊಂಡು ಕೊರೊನಾ ನಿಯಂತ್ರಣ ಸೇರಿದಂತೆ ಮಹತ್ವದ ಬದಲಾವಣೆ ತರುವಂತೆ ಹಾಗೂ ರಾಜ್ಯದ ಜನರಿಗೆ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಕ್ರಾಂತಿಕಾರಕ ಕೆಲಸ ಮಾಡಬೇಕು ಅಂತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನನಗೆ ಸೂಚನೆ ನೀಡಿದ್ದಾರೆ. ಸಿಎಂ ಅವರಿಗೆ ಧನ್ಯವಾದ ಹೇಳುತ್ತೇನೆ. ಮುಖ್ಯಮಂತ್ರಿಗಳ ನಂಬಿಕೆ ಉಳಿಸಿಕೊಳ್ಳುವಂತಹ ಕೆಲಸ ಮಾಡ್ತೇನೆ. ಶಕ್ತಿ ಮೀರಿ ಪ್ರಾಮಾಣಿಕ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಪಕ್ಷದ ಎಲ್ಲಾ ನಾಯಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಆರೋಗ್ಯ ಸಚಿವ ಶ್ರೀರಾಮುಲು ಖಾತೆ ಬದಲಾವಣೆ: ಅಸಮಾಧಾನ ಸ್ಫೋಟ!
ಶ್ರೀರಾಮುಲು ಜೊತೆ ಮಾತಾಡಿದ್ದೇನೆ
ಸಚಿವ ಶ್ರೀರಾಮುಲು ಜೊತೆ ಮಾತಾಡಿದ್ದೇನೆ, ಅವರಿಗೆ ಸಮಾಜ ಕಲ್ಯಾಣ ಇಲಾಖೆ ನೀಡಿದ್ದಾರೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಂದೇ ಆಗಿದೆ. ಆರೋಗ್ಯ ಇಲಾಖೆ ಸವಾಲಿನ ಇಲಾಖೆ. ಹೊಸ ಜವಾಬ್ದಾರಿಯನ್ನು ವಿಶ್ವಾಸದಿಂದ ತೆಗೆದುಕೊಳ್ಳುತ್ತೇನೆ. ಮೊದಲ ದಿನ ಮೈಸೂರಿನಲ್ಲಿ ಸಭೆ ಮಾಡುತ್ತಿದ್ದೇನೆ. ದಸರಾ ಸಿದ್ಧತೆ ಮತ್ತು ಒಂದು ವಾರದಿಂದ ಕೊರೊನಾ ಹೆಚ್ಚಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಮಾಡುತ್ತೇವೆ. ಖಾಸಗಿ ಆಸ್ಪತ್ರೆಗಳ ಜೊತೆಯೂ ಸಭೆ ಮಾಡ್ತೀನಿ. ಕೆಲ ಆಸ್ಪತ್ರೆಗಳಿಗೂ ಭೇಟಿ ನೀಡಿ, ಕೊರೊನಾ ನಿಯಂತ್ರಿಸುವ ಕೆಲಸ ಮಾಡ್ತೇವೆ ಎಂದರು.
ಸಾವಿನ ಪ್ರಮಾಣ ಕಡಿಮೆ ಮಾಡುವುದು ನನ್ನ ಗುರಿ
ಶ್ರೀರಾಮುಲು ಅವರಿಗೆ ಯಾವುದೇ ಬೇಸರ ಇಲ್ಲ. ನಾನು ಅವರ ಜೊತೆ ಮಾತಾಡಿದ್ದೇನೆ. ಸಮಾಜ ಕಲ್ಯಾಣ ಇಲಾಖೆ ದೊಡ್ಡ ಇಲಾಖೆ. ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡುವ ಇಲಾಖೆ. ಅವರು ಮೊದಲು ಅದೇ ಇಲಾಖೆ ಕೇಳಿದ್ದರು ಅಂತ ಕೇಳಿದ್ದೇನೆ. ಹೀಗಾಗಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಅಂತ ಭಾವಿಸಿದ್ದೇನೆ ಎಂದು ಹೇಳಿದರು. ಆರೋಗ್ಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ನನ್ನ ಮೊದಲ ಆದ್ಯತೆ ಕೊರೊನಾ ನಿಯಂತ್ರಣ ಮಾಡುವುದು, ಸಾವಿನ ಪ್ರಮಾಣ ಕಡಿಮೆ ಮಾಡುವುದು ನನ್ನ ಗುರಿ. ಜನರಿಗೆ ಸುಲಭವಾಗಿ ಚಿಕಿತ್ಸೆ ಸಿಗುವಂತೆ ಕ್ರಮ ತೆಗೆದುಕೊಳ್ಳುತ್ತೇನೆ ವಿವರಿಸಿದರು.
ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿಲ್ಲ
ಆರೋಗ್ಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿಲ್ಲ. ಈಗಾಗಲೇ ಸದನದಲ್ಲಿ ಈ ಬಗ್ಗೆ ಹೇಳಿದ್ದೇನೆ. ಇನ್ನೂ ಇಲಾಖೆ ಚಾರ್ಜ್ ತಗೊಂಡಿಲ್ಲ. ಇಲಾಖೆ ಚಾರ್ಜ್ ತೆಗೆದುಕೊಂಡ ಕೂಡಲೇ ಇಲಾಖೆ ಅಧ್ಯಯನ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಜನರಿಗೆ ಸೇವೆ ಸಿಗುವಂತೆ ಇಲಾಖೆಯಲ್ಲಿ ಮೈಲಿಗಲ್ಲಾಗಿಸಬೇಕಾಗಿದೆ. ಕೆಲಸ ಇನ್ನು ಬಹಳ ರಚನಾತ್ಮಕವಾಗಿ ಆಗಬೇಕಾಗಿದೆ. ಕೇರಳ ಮಾದರಿಯಲ್ಲಿ ಆರೋಗ್ಯ ಇಲಾಖೆಯನ್ನು ಸುಧಾರಣೆ ಮಾಡಬೇಕಿದೆ ಎಂದು ಹೇಳಿದರು.
ಬಯಸದೇ ಬಂದ ಭಾಗ್ಯ
ಇದೇ ವೇಳೆ ಶ್ರೀರಾಮುಲು ಅವರ ಗಮನಕ್ಕೆ ತಂದು ಖಾತೆ ಬದಲಾವಣೆ ಮಾಡಲಾಗಿದೆಯಾ ಅನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಸುಧಾಕರ್, ಅದನ್ನು ಮುಖ್ಯಮಂತ್ರಿಗಳಿಗೆ ನೀವು ಕೇಳಬೇಕು. ಬಯಸದೇ ಬಂದ ಭಾಗ್ಯ ಅನ್ನುವುದಕ್ಕಿಂತ, ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಂದೇ. ಈಗ ಈ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಅದನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ ಎಂದು ಭರವಸೆ ನೀಡಿದರು.