ರಂಗೇರಿದ ಉಪಚುನಾವಣೆ: ಇಂದು ಸಿಎಂ, ಯಡಿಯೂರಪ್ಪ ಪ್ರಚಾರ
ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳ ಮತದಾರರಿಗೆ ಮಾರ್ಚ್ 31ರಂದು ತಮ್ಮ ನೆಚ್ಚಿನ ನಾಯಕರನ್ನು ತಮ್ಮ ಹಳ್ಳಿಯಲ್ಲೇ ಒಂದೇ ದಿನ ನೋಡುವ ಭಾಗ್ಯ.
ಬೆಂಗಳೂರು, ಮಾರ್ಚ್ 31: ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ 31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. ಹೀಗಾಗಿ, ಉಪಚುನಾವಣಾ ಕಣಕ್ಕೆ ಹೊಸ ರಂಗು ಬಂದಿದೆ.
ಈಗಾಗಲೇ ಎರಡೂ ಕ್ಷೇತ್ರಗಳಲ್ಲಿ ಕಾರ್ಯಕ್ರಮದ ವೇಳಾ ಪಟ್ಟಿಗಳು ಸಿದ್ಧಗೊಂಡಿವೆ. ಮುಖ್ಯಮಂತ್ರಿ ಜತೆಗೆ, ಅವರ ಆಪ್ತ ಶಾಸಕರು ಹಾಗೂ ಇನ್ನಿತರ ಬೆಂಬಲಿಗರೂ ಈ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇತ್ತ, ಬಿಎಸ್ ವೈ ಅವರ ಜತೆಗೆ ಬಿಜೆಪಿಯ ಇತರ ಪ್ರಭಾವಿ ನಾಯಕರು ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಲಾಗಿದೆ.
ಇಬ್ಬರೂ ನಾಯಕರು ಬಹಿರಂಗ ಸಭೆಗಳು ಹಾಗೂ ರೋಡ್ ಶೋಗಳಲ್ಲಿ ಭಾಗವಹಿಸಲಿದ್ದಾರೆಂದು ಕೆಲ ವಾಹಿನಿಗಳು ವರದಿ ಮಾಡಿವೆ. ಒಟ್ಟಾರೆಯಾಗಿ, ತಮ್ಮ ನೆಚ್ಚಿನ ರಾಜಕೀಯ ನಾಯಕರನ್ನು ತಮ್ಮ ಹಳ್ಳಿಯಲ್ಲೇ ಒಂದೇ ದಿನ ನೋಡುವ ಭಾಗ್ಯ ಮತದಾರರದ್ದು.