ಚಿಕ್ಕಮಾದು ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ
ಮೈಸೂರು, ನವೆಂಬರ್ 1 : ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್.ಡಿ.ಕೋಟೆಗೆ ಭೇಟಿ ನೀಡಿ ಶಾಸಕ ಚಿಕ್ಕಮಾದು ಅವರಿಗೆ ಅಂತಿಮ ನಮನ ಸಲ್ಲಿಸಿದರು. ಚಿಕ್ಕಮಾದು ಅವರ ನಿಧನಕ್ಕೆ ಸಂತಾಪ ಸೂಚಿಸಿದ ಅವರು, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು.
ಎಚ್.ಡಿ.ಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಚಿಕ್ಕಮಾದು ವಿಧಿವಶ
ಬುಧವಾರ ಮಧ್ಯಾಹ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಚಿಕ್ಕಮಾದು ಅವರ ಜೊತೆಗಿನ ಒಡನಾಟ ಸ್ಮರಿಸಿದರು. 'ಚಿಕ್ಕಮಾದು ಅವರ ನಿಧನ ತಮಗೆ ದುಃಖ ಉಂಟು ಮಾಡಿದೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ವಿಧಾನಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಅವರು ಜನಪರ ಕಾಳಜಿ ಹೊಂದಿದ್ದರು' ಎಂದು ಬಣ್ಣಿಸಿದರು.
'ಚಿಕ್ಕಮಾದು ಅವರು ಇನ್ನೂ ಬಹಳ ಕಾಲ ರಾಜಕೀಯದಲ್ಲಿ ಇರಬೇಕಿತ್ತು. ಕಳೆದ ವಾರ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿದ್ದೆ. ಗುಣಮುಖರಾಗುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ, ಅವರ ಅಕಾಲಿಕ ನಿಧನ ನೋವುಂಟು ಮಾಡಿದೆ' ಎಂದು ಹೇಳಿದರು.
ಎಚ್.ಡಿ.ಕೋಟೆ ಜೆಡಿಎಸ್ ಶಾಸಕ ಚಿಕ್ಕಮಾದು ಪರಿಚಯ
'ನಾನು ಮತ್ತು ಅವರು ಬೇರೆ-ಬೇರೆ ಪಕ್ಷದಲ್ಲಿದ್ದರೂ ವಿಶ್ವಾಸ ಮತ್ತು ಸ್ನೇಹ ಚೆನ್ನಾಗಿತ್ತು. ಅವರು ಬೇರೆ ಪಕ್ಷದವರು ಎಂದು ಯಾವತ್ತೂ ಪರಿಗಣಿಸಿರಲಿಲ್ಲ. ಚಿಕ್ಕಮಾದು ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ' ತಿಳಿಸಿದರು.
ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಹೆಚ್.ಡಿ.ಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಚಿಕ್ಕಮಾದು ಅವರು ಬುಧವಾರ ಮುಂಜಾನೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.